ನವದೆಹಲಿ (ಪಿಟಿಐ): ಸುಪ್ರೀಂಕೋರ್ಟ್ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ದೆಹಲಿ ಪೊಲೀಸರಿಗೆ ಸೋಮವಾರ ಇ–ಮೇಲ್ ಮೂಲಕ ಬೆದರಿಕೆ ಪತ್ರ ಬಂದ ಕಾರಣ, ಸುಪ್ರೀಂಕೋರ್ಟ್ಗೆ ಬಿಗಿ ಭದ್ರತೆ ಒದಗಿಸಲಾಗಿದೆ.
ಸುಪ್ರೀಂಕೋರ್ಟ್ ಆವರಣಕ್ಕೆ ತರಬೇತಿ ನಿರತ ಕಾನೂನು ವಿದ್ಯಾರ್ಥಿಗಳು ಹಾಗೂ ಸಂದರ್ಶಕರು ಭೇಟಿ ನೀಡದಂತೆ ನಿರ್ಬಂಧಿಸಲಾಗಿದೆ. ಅಲ್ಲದೇ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ಚಟುವಟಿಕೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ವಕೀಲರಿಗೆ ಸೂಚಿಸಲಾಗಿದೆ.
ಕಕ್ಷಿದಾರರು ಹಾಗೂ ಸಂದರ್ಶಕರಿಗೆ ಕೋರ್ಟ್ ಆವರಣ ಪ್ರವೇಶಕ್ಕೆ ಪಾಸ್ ನೀಡುವಾಗ ಹಿನ್ನೆಲೆ ವಿಚಾರಿಸಿಕೊಂಡು ಎಚ್ಚರಿಕೆಯಿಂದ ಪಾಸ್ ನೀಡಬೇಕು. ಬೇಕಾಬಿಟ್ಟಿಯಾಗಿ ಪಾಸ್ ನೀಡಬಾರದು ಎಂದು ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ತನ್ನ ಸದಸ್ಯರಿಗೆ ಸುತ್ತೋಲೆಯಲ್ಲಿ ತಿಳಿಸಿದೆ.
1993ರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ತಪ್ಪಿತಸ್ಥನಾಗಿದ್ದ ಯಾಕೂಬ್ ಮೆಮನ್ ಗಲ್ಲುಶಿಕ್ಷೆ ರದ್ದುಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ್ದ ಕಾರಣಕ್ಕಾಗಿ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಬೆದರಿಕೆ ಪತ್ರ ಬಂದಿದ್ದನ್ನು ಇಲ್ಲಿ
ಉಲ್ಲೇಖಿಸಬಹುದು.