ಕುಣಿಗಲ್: ತಾಲ್ಲೂಕಿನ ಡಿ.ಹೊಸಹಳ್ಳಿ ಗೊಲ್ಲರಹಟ್ಟಿಯಲ್ಲಿ ಮಹಿಳೆಯರು ಮುಟ್ಟಿನ ದಿನ ಕಳೆಯುವ ‘ಸೂತಕದ ಮನೆ’ಗೆ ಹಾವು ನುಗ್ಗಿದ್ದರಿಂದ ಗುರುವಾರ ಮೂವರು ಮಹಿಳೆಯರು ಅಕ್ಷರಶಃ ಬೀದಿ ಪಾಲಾಗಿದ್ದರು. ‘ಹಾವು ಬಂದಿದೆ, ದಯವಿಟ್ಟು ಯಾರಾದರೂ ಬಂದು ಅದನ್ನು ಓಡಿಸಿ’ ಎಂದು ಮಹಿಳೆಯರು ಗೋಗರೆದರೂ ಗ್ರಾಮದ ಪುರುಷರು, ಮೈಲಿಗೆಯಾಗುವ ಹೆದರಿಕೆಯಿಂದ ಹತ್ತಿರ ಸುಳಿಯಲಿಲ್ಲ.
ಗೊಲ್ಲರಹಟ್ಟಿಯಲ್ಲಿ ೨೩೦ ಮನೆಗಳಿದ್ದು, ೨೫೦ಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಸಂಪ್ರದಾಯದಂತೆ ಮುಟ್ಟಿನ ದಿನಗಳಲ್ಲಿ ಹಟ್ಟಿಯಿಂದ ದೂರ ಇರುವ ಸೂತಕದ ಮನೆಯಲ್ಲಿ ೫ ದಿನ ಇರಬೇಕು. ೩೦ ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಸೂತಕದ ಮನೆಗೆ ಯಾವುದೇ ಮೂಲ ಸೌಕರ್ಯವಿಲ್ಲ. ಕಟ್ಟಡವು ಶಿಥಿಲಗೊಂಡಿದೆ. ಹೊಲಕ್ಕೆ ಹೊಂದಿಕೊಂಡಂತಿರುವುದರಿಂದ ಹಾವು ಮತ್ತಿತರ ಹುಳುಹುಪ್ಪಟೆಗಳ ಕಾಟ ಸಾಮಾನ್ಯ ಎನಿಸಿದೆ.
ತಮ್ಮ ಸ್ಥಿತಿ ವಿವರಿಸಿದ ಊರ ಸೊಸೆಯಾಗಿ ಗ್ರಾಮಕ್ಕೆ ಬಂದಿರುವ ಎಂಎಸ್ಡಬ್ಲ್ಯು ಪದವೀಧರೆ ಪವಿತ್ರಾ, ‘ಸಂಪ್ರದಾಯದ ಹೆಸರಿನಲ್ಲಿ ನಮ್ಮ ಮೇಲೆ ಶೋಷಣೆ ನಡೆಯುತ್ತಿದೆ. ಬವಣೆ ಸಾಕಾಗಿದೆ; ಬದಲಾವಣೆ ಬೇಕಾಗಿದೆ’ ಎಂದರು.
‘ಮುಟ್ಟಾದ ಮಹಿಳೆಯರಿಗೆ ಗಾಳಿ– ಬೆಳಕಿರುವ ಕೊಠಡಿಯಲ್ಲಿ ವಾಸಿಸುವ ಹಕ್ಕೂ ಇಲ್ಲವೇ. ‘ಆ ದಿನ’ಗಳಲ್ಲಿ ಮನೆಯವರ ಜೊತೆಗೆ ಇರುವ ಅವಕಾಶವನ್ನು ಮಹಿಳೆಯರು ಬಯಸುತ್ತಿದ್ದಾರೆ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು’ ಎಂದು ಅವರು ಪ್ರಶ್ನಿಸಿದರು.
ಹಾವಿಗೆ ಹೆದರಿ ಬೀದಿಯಲ್ಲಿ ಕುಳಿತಿದ್ದ ಮಹಿಳೆಯರೊಂದಿಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬರು ಮಾತನಾಡಿ, ‘ತಿಂಗಳಲ್ಲಿ ೫ ದಿನ ಕಾಲೇಜಿಗೂ ಹೋಗುವಂತಿಲ್ಲ. ಕತ್ತಲ ಕೋಣೆಯಲ್ಲಿ ಕೊಳೆಯಬೇಕು. ಇದು ನಮ್ಮ ದೌರ್ಭಾಗ್ಯ’ ಎಂದರು.
ಅದೇ ಗುಂಪಿನಲ್ಲಿದ್ದ ಚಿಕ್ಕಮ್ಮ ಮಾತ್ರ, ‘ನಾವು ಕಾಡು ಗೊಲ್ಲರು, ಕಾಡಿನಲ್ಲಿ ಇದ್ದು ಜೀವಿಸಬೇಕಾದವರು. ಇಂಥ ಸಂಪ್ರದಾಯಗಳಿಂದ ಮಾನಸಿಕ ಧೈರ್ಯ ಉಂಟಾಗುತ್ತದೆ. ಬದಲಾವಣೆ ಬೇಕಾಗಿಲ್ಲ’ ಎಂದು ಖಂಡತುಂಡವಾಗಿ ನುಡಿದರು.
ಹೊತ್ತು ಇಳಿಯುತ್ತಾ ಬಂದರೂ ಹಾವು ಮಾತ್ರ ಸೂತಕದ ಮನೆಯಿಂದ ಹೊರಬರಲಿಲ್ಲ. ಆತಂಕಕ್ಕೊಳಗಾದ ಮಹಿಳೆಯರು ಸರ್ಕಾರಿ ಪ್ರೌಢಶಾಲೆಯ ಕಟ್ಟಡದಲ್ಲಿ ರಾತ್ರಿ ಕಳೆಯಲು ನಿರ್ಧರಿಸಿ, ಕತ್ತಲಾಗುವುದನ್ನು ಕಾಯುತ್ತಿದ್ದರು.