ಬೆಂಗಳೂರು: ಯಾವುದೇ ಅಳುಕಿಲ್ಲದೆ ಸ್ವಚ್ಛಂದವಾಗಿ ಸೈಕಲ್ ಸವಾರಿ ಮಾಡಿದ ಮಕ್ಕಳು, ಗ್ರಾಮೀಣ ಆಟಗಳಾದ ಅಳಿಗುಳಿಮನೆ, ಕುಂಟೆಬಿಲ್ಲೆ, ಕವಡೆ, ಹಾವು ಏಣಿ ಆಟಗಳನ್ನು ಆಡುವ ಮೂಲಕ ಸಂಭ್ರಮಪಟ್ಟರು.
ನಗರ ಭೂ ಸಾರಿಗೆ ನಿರ್ದೇಶನಾಲಯ ಮತ್ತು ರಾಜಾಜಿನಗರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬಿ ಪ್ಯಾಕ್ ಸಂಸ್ಥೆಯ ಆಶ್ರಯದಲ್ಲಿ ರಾಜಾಜಿನಗರದ ಡಿ ಬ್ಲಾಕ್ ರಸ್ತೆಯಲ್ಲಿ ಭಾನುವಾರ ಆಯೋಜಿಸಿದ್ದ ‘ಸೈಕಲ್ ದಿನ’ದ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳಿವು.
ಬೆಳಿಗ್ಗೆ ಏಳು ಗಂಟೆಯಿಂದ ಶುರುವಾದ ಈ ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳು, ಶಾಲಾ ಮಕ್ಕಳು ಬಿಬಿಎಂಪಿ ಸದಸ್ಯರು ಪಾಲ್ಗೊಂಡಿದ್ದರು. ಸಂಚಾರ ಮುಕ್ತ ರಸ್ತೆಯಲ್ಲಿ ಮಕ್ಕಳು ಸೈಕಲ್ ಸವಾರಿ ಮಾಡುವ ಮೂಲಕ ಖುಷಿಪಟ್ಟರು. ಅಲ್ಲದೆ, ಗ್ರಾಮೀಣ ಆಟಗಳನ್ನು ಆಡುವ ಮೂಲಕ ಸಂಭ್ರಮಿಸಿದರು.
ರಾಜಾಜಿನಗರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜೆ.ಗೋಪಾಲ್ ಅವರು ಮಾತನಾಡಿ, ‘ಸೈಕಲ್ ದಿನದಲ್ಲಿ ಭಾಗವಹಿಸುವ ಮಕ್ಕಳಿಗಾಗಿ 50 ಸೈಕಲ್ಗಳನ್ನು ಬಾಡಿಗೆ ತರಲಾಗಿತ್ತು. ಸ್ವಂತ ಸೈಕಲ್ ಇಲ್ಲದವರಿಗೆ ಈ ಸೈಕಲ್ಗಳನ್ನು ನೀಡಲಾಯಿತು’ ಎಂದರು.
ಕೆ.ಎಲ್.ಇ ಸೊಸೈಟಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಪ್ರಕಾಶ್ ಮಾತನಾಡಿ, ‘ವಾರದ ಹಿಂದೆ ನನ್ನ ಸ್ನೇಹಿತ ಸೈಕಲ್ ದಿನದ ಮಾಹಿತಿ ನೀಡಿದ್ದ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತುಂಬ ಖುಷಿ ಕೊಟ್ಟಿದೆ. ವಾರಾಂತ್ಯದಲ್ಲಿ ಇದು ಅರ್ಥರ್ಪೂರ್ಣ ಕಾರ್ಯಕ್ರಮ’ ಎಂದು ಹೇಳಿದಳು.
ನಗರ ಭೂ ಸಾರಿಗೆ ನಿರ್ದೇಶನಾಲಯದ ಸಾರಿಗೆ ಯೋಜನಾಧಿಕಾರಿ ಸೋನಾಲ್ ಕುಲಕರ್ಣಿ ಅವರು ಮಾತನಾಡಿ, ‘ಬೆಂಗಳೂರು ನಗರದಲ್ಲಿ ಇದುವರೆಗೆ 130 ಸ್ಥಳಗಳಲ್ಲಿ ಸೈಕಲ್ ದಿನಾಚರಣೆ ಮಾಡಲಾಗಿದೆ. ಮುಂದಿನ ಭಾನುವಾರ ಸಂಜಯನಗರದಲ್ಲಿ ಸೈಕಲ್ ದಿನವನ್ನು ಆಯೋಜಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.