ಕೋಲ್ಕತ್ತ (ಐಎಎನ್ಎಸ್): ಹದಿಮೂರು ವರ್ಷಗಳ ಬಳಿಕ ಐ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆದ ಮೋಹನ್ ಬಾಗನ್ ತಂಡಕ್ಕೆ ತವರಿನಲ್ಲಿ ಭರ್ಜರಿ ಸ್ವಾಗತ ಲಭಿಸಿತು.
ಬೆಂಗಳೂರಿನಲ್ಲಿ ಭಾನುವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಬಿಎಫ್ಸಿ ಎದುರು ಡ್ರಾ ಮಾಡಿಕೊಂಡು ಬಾಗನ್ ತಂಡ ನಾಲ್ಕನೇ ಬಾರಿಯ ಐ ಲೀಗ್ ಪ್ರಶಸ್ತಿ ಎತ್ತಿ ಹಿಡಿದಿತ್ತು. ಚಾಂಪಿಯನ್ ತಂಡದ ಆಟಗಾರರು ಸೋಮವಾರ ತವರಿಗೆ ಮರಳಿದರು. ಈ ವೇಳೆ ಅಭಿಮಾನಿಗಳು ಪಟಾಕಿಗಳನ್ನು ಸಿಡಿಸಿ, ಕುಣಿದು ಸಂಭ್ರಮಿಸಿದರು. ಕೆಲವರು ಸಿಹಿ ಹಂಚಿ ಖುಷಿಪಟ್ಟರು.
‘ನಮ್ಮ ತಂಡ ಐ ಲೀಗ್ನಲ್ಲಿ ಪ್ರಶಸ್ತಿ ಜಯಿಸಿದ್ದು ಪಶ್ಚಿಮ ಬಂಗಾಳದ ಫುಟ್ಬಾಲ್ಗೆ ಹುಮ್ಮಸ್ಸು ತುಂಬಿದೆ. ಮುಂದೆಯೂ ಮತ್ತಷ್ಟು ಸಾಧನೆ ಮಾಡಲು ಈ ಗೆಲುವು ಅಗತ್ಯವಿತ್ತು’ ಎಂದು ಮಾಜಿ ಆಟಗಾರರು ಅಭಿಪ್ರಾಯ ಪಟ್ಟಿದ್ದಾರೆ.
ಭಾರತ ತಂಡದ ಮಾಜಿ ನಾಯಕ ಚುನು ಗೋಸ್ವಾಮಿ ಮಾತನಾಡಿ, ‘ದೇಶದ ಫುಟ್ಬಾಲ್ ನಕ್ಷೆಯಲ್ಲಿ ಬಾಗನ್ ಕ್ಲಬ್ ಮತ್ತೆ ಪ್ರಾಬಲ್ಯ ಮೆರೆಯಲು ಈ ಗೆಲುವು ಪ್ರೇರಣೆಯಾಗಿದೆ’ ಎಂದಿದ್ದಾರೆ.
‘ಖುಷಿಯ ಸಂದರ್ಭದಲ್ಲಿ ಏನು ಹೇಳಬೇಕೆಂಬುದೇ ಗೊತ್ತಾಗುತ್ತಿಲ್ಲ. ಪದಗಳು ಸೋಲುತ್ತಿವೆ. 70 ವರ್ಷಗಳಿಂದ ಕ್ಲಬ್ ಜೊತೆಗೆ ನನಗೆ ಒಡನಾಟವಿದೆ. ಆದರೆ, ಈ ಬಾರಿ ಪ್ರಶಸ್ತಿ ಜಯಿಸಿದ್ದು ನನ್ನ ಪಾಲಿಗೆ ವಿಶೇಷ. ಈ ಗೆಲುವು ಮೋಹನ್ ಬಾಗನ್ ಕ್ಲಬ್ಗೆ ಮಾತ್ರವಲ್ಲ. ಬಂಗಾಳದ ಫುಟ್ಬಾಲ್ಗೆ ದೊರೆತ ಯಶಸ್ಸು’ ಎಂದೂ ಗೋಸ್ವಾಮಿ ಬಣ್ಣಿಸಿದ್ದಾರೆ.
‘ಬಾಗನ್ ಕ್ಲಬ್ ಸಾಧನೆ ಹೆಮ್ಮೆ ಮೂಡಿಸಿದೆ. ಈ ಯಶಸ್ಸಿನಲ್ಲಿ ಕೋಚ್ ಸಂಜಯ್ ಸೇನ್ ಪಾತ್ರ ಮುಖ್ಯವಾಗಿದೆ’ ಎಂದು ಬಾಗನ್ ಕ್ಲಬ್ನ ಮಾಜಿ ಆಟಗಾರರಾದ ದೇವೆಂದು ಬಿಸ್ವಾಸ್ ಮತ್ತು ಅಲೋಕ್ ಮುಖರ್ಜಿ ಖುಷಿ ವ್ಯಕ್ತಪಡಿಸಿದ್ದಾರೆ.