ನ್ಯೂಯಾರ್ಕ್ (ಪಿಟಿಐ): ತಮಿಳುನಾಡಿನ ವೆಲ್ಲೂರಿನಲ್ಲಿ ಚಾಲಕರೊಬ್ಬರು ಉಲ್ಕಾಪಾತದಿಂದ ಮೃತಪಟ್ಟಿದ್ದಾರೆ ಎಂಬ ಸಂಗತಿಯನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಅಲ್ಲಗೆಳೆದಿದ್ದು, ನೆಲಬಾಂಬ್ ಸ್ಫೋಟಗೊಂಡು ಸಾವನ್ನಪ್ಪಿರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದೆ.
ವೆಲ್ಲೂರು ಜಿಲ್ಲೆಯ ನತ್ರಂಪಲ್ಲಿಯಲ್ಲಿರುವ ಖಾಸಗಿ ಎಂಜಿನಿಯರಿಂಗ್ ಕಾಲೇಜ್ ನಲ್ಲಿ ಶನಿವಾರ ಚಾಲಕರೊಬ್ಬರು ಉಲ್ಕಾಪಾತದಿಂದ ಮೃತಪಟ್ಟಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹೇಳಿದ್ದರು.
ಸ್ಫೋಟದ ಕುರಿತು ಅಂತರ್ಜಾಲ ದಲ್ಲಿ ಕಂಡುಬಂದ ಚಿತ್ರಗಳನ್ನು ಗಮನಿಸಿದರೆ ನೆಲಬಾಂಬ್ವೊಂದು ಸ್ಫೋಟಗೊಂಡಿರುವ ಸಾಧ್ಯತೆಯೇ ಹೆಚ್ಚಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.