ನವದೆಹಲಿ(ಪಿಟಿಐ): ‘ಬಾಂಬ್ ಸ್ಫೋಟಗಳು ಮುಂದುವರಿದಿದ್ದೇ ಆದರೆ, ಶಾಂತಿಸಂಧಾನ ಪ್ರಯತ್ನಗಳು ಆ ಸದ್ದಿನಲ್ಲಿ ಹುದುಗಿಹೋಗುತ್ತವೆ ಎಂಬುದನ್ನು ಪಾಕಿಸ್ತಾನಕ್ಕೆ ಭಾರತ ಸ್ಪಷ್ಟಪಡಿಸಿದೆ’ ಎಂದು ಹೊಸ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದರು.
ಸುಷ್ಮಾ ಸಚಿವೆಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರ ಬಳಿ ಮಾತನಾಡಿ, ಪ್ರಧಾನಿ ಮೋದಿ ಅವರು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರೊಂದಿಗೆ ಮಂಗಳವಾರದ ಚರ್ಚೆ ವೇಳೆ ಇದನ್ನು ಒತ್ತಿ ಹೇಳಿದ್ದಾರೆ ಎಂದು ತಿಳಿಸಿದರು.
‘ನೆರೆಯ ಪಾಕಿಸ್ತಾನದ ಜತೆ ಭಾರತ ಉತ್ತಮ ಬಾಂಧವ್ಯ ಬಯಸುತ್ತದೆ. ಆದರೆ, ಭಾರತದ ವಿರುದ್ಧ ತನ್ನ ನೆಲದಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳನ್ನು ನಿಲ್ಲಿಸಲು ಪಾಕಿಸ್ತಾನ ಕ್ರಮ ಕೈಗೊಳ್ಳಬೇಕು. ಬಾಂಬ್ ದಾಳಿಗಳಿಂದಾಗಿ ಉಭಯ ದೇಶಗಳ ಮಾತುಕತೆಗೆ ಅಡ್ಡಿಯಾಗಿದೆ’ ಎಂಬುದನ್ನು ಮೋದಿ ಸ್ಪಷ್ಟಪಡಿಸಿದ್ದಾರೆ ಎಂದರು.
26/11ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ನಲ್ಲಿ ಬಂಧಿಸಲಾಗಿರುವ ಆರೋಪಿಗಳ ವಿಚಾರಣೆಯನ್ನು ತ್ವರಿತವಾಗಿ ನಡೆಸಬೇಕೆಂಬ ಭಾರತದ ಕೋರಿಕೆಗೆ ಪಾಕಿಸ್ತಾನ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು.
ಬಲಿಷ್ಠ ‘ಸಾರ್ಕ್’: ‘ಪ್ರಮಾಣವಚನಕ್ಕೆ ಬಂದಿದ್ದ ‘ಸಾರ್ಕ್’ ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸಿರುವ ಮೋದಿ, ದ್ವಿಪಕ್ಷೀಯ ಸಮಸ್ಯೆಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಈವರೆಗೂ ಛಾಪು ಮೂಡಿಸಲು ‘ಸಾರ್ಕ್’ಗೆ ಸಾಧ್ಯವಾಗಿಲ್ಲ. ಈ ಸಮಸ್ಯೆಗಳು ಇತ್ಯರ್ಥಗೊಂಡಲ್ಲಿ ‘ಸಾರ್ಕ್’ ಕೂಡ ವಿಶ್ವದ ಒಂದು ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಪ್ರತಿಪಾದಿಸಿದ್ದಾರೆ’ ಎಂದು ತಿಳಿಸಿದರು.
‘ನೆರೆಯ ಹಾಗೂ ಕಾರ್ಯತಂತ್ರ ಪಾಲುದಾರಿಕೆ ರಾಷ್ಟ್ರಗಳಾದ ಆಫ್ರಿಕಾ, ಆಸಿಯಾನ್ ಸದಸ್ಯ ರಾಷ್ಟ್ರಗಳು, ಯುರೋಪ್ ಹಾಗೂ ಇತರೆ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಣೆ ಜತೆಗೆ, ಜಗತ್ತಿಗೆ ಭಾರತದ ಶಕ್ತಿ ಏನು ಎಂದು ತೋರಿಸುವುದು ನನ್ನ ಆದ್ಯತೆಯಾಗಿದೆ’ ಎಂದು ಸುಷ್ಮಾ ಇದೇ ಹೇಳಿದರು.