ಬೆಂಗಳೂರು: ‘ಆಟೊ ಚಾಲಕರು ಮೀಟರ್ಗಿಂತ ಹೆಚ್ಚು ಹಣವನ್ನು ಕೇಳಿದರೆ, ಕೆಟ್ಟದಾಗಿ ವರ್ತಿಸಿದರೆ, ತಕ್ಷಣ ದೂರು ನೀಡಿ’ ಎಂದು ಪೂರ್ವ ಸಂಚಾರ ವಿಭಾಗದ ಡಿಸಿಪಿ ಎಂ.ಎನ್.ಬಾಬು ರಾಜೇಂದ್ರ ಪ್ರಸಾದ್ ಹೇಳಿದರು.
ರಾಷ್ಟ್ರೀಯ ರಸ್ತೆ ಸುರಕ್ಷತೆ ಸಂಘಟನೆಯು ನಗರ ಸಂಚಾರ ಪೊಲೀಸರ ಸಹಯೋಗದಲ್ಲಿ ಬುಧವಾರ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಆಯೋಜಿಸಿದ್ದ ‘ರಸ್ತೆ ಸುರಕ್ಷತಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಆಟೊ ಚಾಲಕರ ವಿರುದ್ಧ ದೂರು ಸಲ್ಲಿಸಿದರೆ, ಕೂಡಲೇ ಕ್ರಮ ಕೈಗೊಳ್ಳಲಾಗುವುದು’ ಎಂದರು. ‘ರಸ್ತೆಗಳನ್ನು ಹೆಚ್ಚು ಸುರಕ್ಷಿತವಾಗಿಸಲು ಸಂಚಾರ ವಿಭಾಗದಿಂದ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಹೇಳಿದರು.
ರಾಷ್ಟ್ರೀಯ ರಸ್ತೆ ಸುರಕ್ಷತೆ ಸಂಘಟನೆಅಧ್ಯಕ್ಷ ಎಸ್.ಸತ್ಯಪಾಲ, ‘ನಗರವು ದಿನದಿಂದ ದಿನಕ್ಕೆ ಅಸುರಕ್ಷಿತವಾಗುತ್ತಿದೆ. ನಗರದ ಹೆಚ್ಚಿನ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ವಾಹನ ಸವಾರರಿಗೆ ರಸ್ತೆಯಲ್ಲಿ ಸಂಚರಿಸುವುದು ಸವಾಲಾಗಿದೆ’ ಎಂದು ಹೇಳಿದರು.