ಬೆಂಗಳೂರು: ‘ಪದೇ ಪದೇ ಭೂಕಂಪ ಹಾಗೂ ಪ್ರವಾಹ ಸಂಭವಿಸುವಂಥ ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುವರಿಗಾಗಿ ಕಡಿಮೆ ವೆಚ್ಚದಲ್ಲಿ
ಸುರಕ್ಷಿತ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ಉತ್ತರಾಖಂಡದಲ್ಲಿ ನಡೆಸಿರುವ ಪ್ರಯೋಗ ಯಶಸ್ವಿಯಾಗಿದೆ’ ಎಂದು ಯುವ ವಾಸ್ತುಶಿಲ್ಪಿ ಅಲೋಕ್ ಶೆಟ್ಟಿ ತಿಳಿಸಿದರು.
ಅಮೆರಿಕದ ‘ಟೈಮ್’ ನಿಯತಕಾಲಿಕೆಯಿಂದ ‘ನಾಳಿನ ಯುವ ನಾಯಕ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅವರು, ‘ಈ ಯೋಜನೆಗಾಗಿ ಸೂಕ್ಷ್ಮ ಸ್ಥಳಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಭೀಕರ ಪ್ರವಾಹಕ್ಕೆ ಒಳಗಾಗಿದ್ದ ಉತ್ತರಾಖಂಡದ ಹಳ್ಳಿಯೊಂದರಲ್ಲಿ ಈಗಾಗಲೇ ಶಾಲೆ ನಿರ್ಮಿಸಿದ್ದೇವೆ. ಅಲ್ಲಿನ ಯಶಸ್ಸು ಮುಂದಿನ ಯೋಜನೆಗೆ ಪ್ರೇರಣೆ ನೀಡಿದೆ’ ಎಂದರು.
‘ಬಡವರು ಹಾಗೂ ಕೊಳೆಗೇರಿ ಪ್ರದೇಶದಲ್ಲಿ ವಾಸಿಸುವವರಿಗಾಗಿ ಕಡಿಮೆ ವೆಚ್ಚದಲ್ಲಿ 200 ಮನೆ ನಿರ್ಮಿಸುವ ಯೋಜನೆ ಹೊಂದಿದ್ದೇನೆ. 2015ರ ಮೇನಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ₨ 18 ಸಾವಿರ ದಲ್ಲಿ ಮನೆ ನಿರ್ಮಿಸಿಕೊಡಲಾಗುವುದು. ಕಡಿಮೆ ಸಮಯದಲ್ಲಿ ಬಿದಿರು, ಮರ ಹಾಗೂ ಇನ್ನಿತರ ಸಾಮಗ್ರಿ ಉಪಯೋಗಿಸಿ ನಿರ್ಮಿಸಬಹುದು. ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಈ ಯೋಜನೆಗೆ ಹೊಸ ಸ್ವರೂಪ ಕೊಡುವ ಉದ್ದೇಶವಿದೆ’ ಎಂದು ತಿಳಿಸಿದರು.
‘ಈ ವರ್ಷದ ಡಿಸೆಂಬರ್ ವೇಳೆಗೆ 10 ಮನೆಗಳನ್ನು ನಿರ್ಮಿಸಿ ಬಡವರಿಗೆ ಉಚಿತವಾಗಿ ನೀಡುವ ಯೋಜನೆ ಹೊಂದಿದ್ದೇನೆ. ಸ್ವಯಂ ಸೇವಾ ಸಂಸ್ಥೆ ‘ಪರಿಣಾಮ ಪ್ರತಿಷ್ಠಾನ’ ಮೂಲಕ 10 ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಆ ಕುಟುಂಬಗಳಿಗೆ ಈ ಮನೆಗಳನ್ನು ನೀಡಲಾಗುವುದು’ ಎಂದು ಹೇಳಿದರು.
ರೈಲಿನ ಬೋಗಿಯಲ್ಲಿ ಆಸ್ಪತ್ರೆ..!
‘ದೇಶದಲ್ಲಿನ ಅತ್ಯುತ್ತಮ ಸಂಪರ್ಕ ವ್ಯವಸ್ಥೆ ಎಂದರೆ ರೈಲು ಸಂಚಾರ. ಹಾಗಾಗಿ ರೈಲಿನ ಬೋಗಿಗಳ ಮೂಲಕವೇ ಆಸ್ಪತ್ರೆ ತೆರೆಯುವ ಯೋಜನೆ ರೂಪಿಸಲಾಗುತ್ತಿದೆ. ಯಾವುದೇ ವ್ಯವಸ್ಥೆ ಇಲ್ಲದ ಹಳ್ಳಿಯ ಹಾದಿಯಲ್ಲಿ ತೆರಳುವ ರೈಲಿಗೆ ಆಸ್ಪತ್ರೆ ವ್ಯವಸ್ಥೆ ಇರುವ ಬೋಗಿಯನ್ನು ಜೋಡಿಸಲಾಗುವುದು. ಬೋಗಿಯನ್ನು ಆ ಹಳ್ಳಿಯಲ್ಲಿ ಬಿಟ್ಟು ರೈಲು ಮುಂದೆ ಹೋಗುತ್ತದೆ’.
‘ಹಳ್ಳಿಯ ಜನರು ಈ ಯೋಜನೆಯ ಸದುಪಯೋಗ ಪಡೆಯಬಹುದು. ನಂತರ ಬರುವ ರೈಲಿಗೆ ಆ ಬೋಗಿ ಜೋಡಿಸಲಾಗುವುದು. ಇದನ್ನು ಸಂಚಾರಿ ಆಸ್ಪತ್ರೆ ಎಂದೂ ಕರೆಯಬಹುದು. ಇದಕ್ಕೆ ನಾವಿಟ್ಟಿರುವ ಹೆಸರು ‘ಬ್ಲ್ಯಾಕ್ ಬಾಕ್ಸ್ ಥಿಯೇಟರ್’. ಈ ಯೋಜನೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಇದೇ ಯೋಜನೆಯಡಿ ಸಂಚಾರಿ ಶಾಲೆಗಳನ್ನೂ ನಿರ್ಮಿಸಲು ಚಿಂತಿಸಲಾಗುತ್ತಿದೆ’ ಎಂದು ವಿವರಿಸಿದರು.
ಕುಂದಾಪುರ ಮೂಲದ ಅಲೋಕ್ ಅವರು ಬೆಂಗಳೂರಿನಲ್ಲಿ ‘ಭೂಮಿಪುತ್ರ’ ಎಂಬ ವಾಸ್ತು ವಿನ್ಯಾಸ ಸಂಸ್ಥೆ ನಡೆಸುತ್ತಿದ್ದಾರೆ. 10 ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಊಟದ ಸೌಲಭ್ಯ ಒದಗಿಸಿದ್ದಾರೆ. ‘ವಾಸ್ತು ವಿನ್ಯಾಸದಿಂದ ಬರುವ ಆದಾಯದಿಂದ ಈ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. 12ನೇ ತರಗತಿ ವರೆಗೆ ಶಿಕ್ಷಣ ನೀಡುವ ಉದ್ದೇಶ ಹೊಂದಿದ್ದೇವೆ.
ಜೊತೆಗೆ ಅವರ ಹೆಸರಿನಲ್ಲಿ ಉಳಿತಾಯ ಖಾತೆ ತೆರೆಯಲಾಗಿದೆ. ಅದಕ್ಕೆ ಪ್ರತಿ ವರ್ಷ ಹಣ ಜಮೆ ಮಾಡಲಾಗುತ್ತದೆ. ಈ ಹಣದಿಂದ ಅವರು ಶಿಕ್ಷಣ ಮುಂದುವರಿಸಬಹುದು. ಇಲ್ಲವೇ ಉದ್ಯೋಗದಲ್ಲಿ ತೊಡಗಬಹುದು’ ಎಂದು 28 ವರ್ಷ ವಯಸ್ಸಿನ ಅಲೋಕ್ ಹೇಳಿದರು. ‘ಈ ಕುಟುಂಬಗಳ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಚಿಕ್ಕಂದಿನಿಂದಲೂ ಈ ಬಗ್ಗೆ ನನ್ನ ಮನಸ್ಸು ತುಡಿಯುತ್ತಿತ್ತು. ಏಕೆಂದರೆ ಬದುಕು ಸಾಗಿಸಲು ಕೆಲವರಿಗೆ ಒಂದು ಸಣ್ಣ ಸೂರು ಕೂಡ ಇಲ್ಲ. ಹೀಗಾಗಿ ಅವರಿಗೆ ಸಹಾಯ ಮಾಡಲು ಮುಂದಾದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.