ಶ್ರೀನಗರ (ಪಿಟಿಐ): ಭೀಕರ ಪ್ರವಾಹದಿಂದ ತತ್ತರಿಸಿರುವ ಲಡಾಖ್ ಸೇರಿದಂತೆ ಜಮ್ಮು ಕಾಶ್ಮೀರದಲ್ಲಿ ಸುಮಾರು 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಗಳು ಪ್ರವಾಹಕ್ಕೆ ತುತ್ತಾಗಿ, ಇದರಿಂದ ₨ 3,674 ಕೋಟಿ ನಷ್ಟ ಉಂಟಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ಜಮ್ಮ–ಕಾಶ್ಮೀರ ಕೃಷಿ ಇಲಾಖೆ ಪ್ರವಾಹ ಪೀಡಿತ ಪ್ರದೇಶದಲ್ಲಿ ಬೆಳೆಹಾನಿ ಕುರಿತು ಪರಿಶೀಲನೆ ನಡೆಸಿದೆ. ಪುಲ್ವಮ ಜಿಲ್ಲೆಯಲ್ಲಿ ಹೆಚ್ಚು ಬೆಳೆಹಾನಿ ಸಂಭವಿಸಿದ್ದು, ಸುಮಾರು ₨1,104 ಕೋಟಿ ನಷ್ಟವುಂಟಾಗಿದೆ ಎನ್ನಲಾಗಿದೆ.
ಸೇನಾನೆಲೆಗಳು ನಾಶ: ಶಿಬಿರಗಳು, ಬಂಕರುಗಳು ಸೇರಿದಂತೆ 70 ಸೇನಾ ನೆಲೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಆದರೆ ಭದ್ರತಾ ಪಡೆ ಬೇರೆ ಸ್ಥಳಗಳಿಗೆ ತಮ್ಮ ಸೇನಾ ಶಿಬಿರಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.
ಸೇನಾನೆಲೆಗಳು ಭಾಗಶಃ ಅಥವಾ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿತ್ತು. ಆದರೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿ ಎಲ್ಲ ಸೇನಾ ಪಡೆಯವರನ್ನು ರಕ್ಷಿಸಿದ್ದಾರೆ.
‘ಗಡಿ ನಿಯಂತ್ರಣ ರೇಖೆ ಸೇರಿದಂತೆ ಕಾಶ್ಮೀರ ಕಣಿವೆಯಲ್ಲಿರುವ 30–40 ಸೇನಾ ಶಿಬಿರ, ನೆಲೆ ಹಾಗೂ ಬಂಕರುಗಳು ಪ್ರವಾಹದಿಂದ ಹಾನಿಗೊಳಗಾಗಿವೆ. 10–15 ಬಂಕರುಗಳು ನೀರಿನಲ್ಲಿ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ’ ಎಂದು ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.