ಮುಂಬೈ (ಪಿಟಿಐ): ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊತ್ತಿರುವ ನಟ ಸೂರಜ್ ಪಂಚೋಲಿ ಪೋಷಕರಾದ ತಾರಾ ದಂಪತಿ ಆದಿತ್ಯ ಪಂಚೋಲಿ- ಮತ್ತು ಜರೀನಾ ವಾಹಬ್ ಅವರು ಜಿಯಾ ತಾಯಿ ರಬಿಯಾ ಖಾನ್ ವಿರುದ್ಧ ಬಾಂಬೆ ಹೈಕೋರ್ಟ್ನಲ್ಲಿ ₨ 100 ಕೋಟಿಗಳ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಶುಕ್ರವಾರ ಪಂಚೋಲಿ ದಂಪತಿಯ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸಿ. ಗುಪ್ತೆ ಅವರು ರಬಿಯಾ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದ್ದು, ಪ್ರಕರಣದ ವಿಚಾರಣೆಯನ್ನು ಜುಲೈ 9ಕ್ಕೆ ಮುಂದೂಡಿದರು.
‘ಈವರೆಗೂ ನಮಗೆ ಯಾವುದೇ ನೋಟಿಸ್ ಬಂದಿಲ್ಲ. ಆದರೆ ಮಾನನಷ್ಟ ಮೊಕದ್ದಮೆ ದಾಖಲಾಗಿರುವುದರ ಬಗ್ಗೆ ತಿಳಿದಿದೆ. ಈ ಬಗ್ಗೆ ಬುಧವಾರ (ಜುಲೈ 9) ವಿಚಾರಣೆ ನಡೆಯುವ ಬಗ್ಗೆ ಮಾಹಿತಿ ಇದೆ’ ಎಂದು ರಬಿಯಾ ಪರ ವಕೀಲ ದಿನೇಶ್ ತಿವಾರಿ ತಿಳಿಸಿದ್ದಾರೆ.
ಜಿಯಾ ಪ್ರಕರಣವು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಕೋರಿ ಜಿಯಾ ತಾಯಿ ರಬಿಯಾ ಖಾನ್ ಅವರು ಅರ್ಜಿ ಸಲ್ಲಿಸಿದ್ದರ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಗುರುವಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು.