ಬೆಂಗಳೂರು: ‘ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಗಸ್ಟ್ 1 ರಿಂದ 15 ರವರೆಗೆ ‘ವಂದೇ ಮಾತರಂ ಬಾ–ರಥ’ ಮಹಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಮೀಡಿಯಾ ಎನ್ ಮೀಡಿಯಾ ಸಂಸ್ಥೆಯ ಯೋಜನಾ ನಿರ್ದೇಶಕ ಎಸ್.ಎಲ್.ಎನ್ ಸ್ವಾಮಿ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಹಲವರ ತ್ಯಾಗ ಬಲಿದಾನಗಳ ಪ್ರತೀಕವಾಗಿದೆ. ನಮ್ಮ ದೇಶದ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಭಾರತದ ಪರಂಪರೆಯನ್ನು ವಿವಿಧತೆಯಲ್ಲಿ ಏಕತೆಯೆಂಬ ಬೀಜ ಮಂತ್ರವನ್ನು ಪುನಃ ಪಠಿಸುವುದು ಅಭಿಯಾನದ ಸಂಕಲ್ಪವಾಗಿದೆ’ ಎಂದು ತಿಳಿಸಿದರು.
‘ಅಭಿಯಾನವು ರಾಜ್ಯದ ವಿದುರಾಶ್ವತ್ಥದಿಂದ ಆಗಸ್ಟ್ 1 ರಿಂದ ಪ್ರಾರಂಭವಾಗಿ 15ರಂದು ಯಲಹಂಕದಲ್ಲಿ ಕೊನೆಗೊಳ್ಳಲಿದೆ. ಆಗಸ್ಟ್ 14 ರ ಮಧ್ಯರಾತ್ರಿ 11.59ಕ್ಕೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹೊ.ಶ್ರೀನಿವಾಸಯ್ಯ ಅವರು
ಧ್ವಜಾರೋಹಣ ಮಾಡುತ್ತಾರೆ. ಅಭಿಯಾನವು 30 ಜಿಲ್ಲೆ ಸೇರಿದಂತೆ ಒಟ್ಟು 4,900 ಕಿ.ಮೀ ಸಂಚಾರ ಮಾಡುತ್ತದೆ’ ಎಂದರು.