ನವದೆಹಲಿ (ಪಿಟಿಐ): ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಸೋಮವಾರ ಇಲ್ಲಿ 104 ಗಣ್ಯರಿಗೆ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಇದೇ ಸಂದರ್ಭದಲ್ಲಿ, ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಮದನ್ ಮೋಹನ್ ಮಾಳವೀಯ (ಮರಣೋತ್ತರ) ಅವರಿಗೆ ಪ್ರಕಟಿಸಲಾದ ಭಾರತ ರತ್ನ ಪುರಸ್ಕಾರವನ್ನೂ, ಅವರ ಕುಟುಂಬಕ್ಕೆ ರಾಷ್ಟ್ರಪತಿ ಅವರು ಪ್ರದಾನ ಮಾಡಿದರು.
66ನೇ ಗಣರಾಜ್ಯೋತ್ಸವ ಅಂಗವಾಗಿ ಕೇಂದ್ರ ಸರ್ಕಾರ ಒಟ್ಟು 104 ಗಣ್ಯರಿಗೆ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿತ್ತು. ಇದರಲ್ಲಿ 9 ಪದ್ಮ ವಿಭೂಷಣ, 20 ಪದ್ಮ ಭೂಷಣ ಹಾಗೂ 75 ಪದ್ಮಶ್ರೀ ಪುರಸ್ಕೃತರು ಸೇರಿದ್ದಾರೆ.
ಕರ್ನಾಟಕದವರಾದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ (ಪದ್ಮ ವಿಭೂಷಣ), ಸಿದ್ಧಗಂಗಾಮಠದ ಶಿವಕುಮಾರ ಸ್ವಾಮೀಜಿ ಮತ್ತು ವಿಜ್ಞಾನಿ ಡಾ. ಖರಗ್ ಸಿಂಗ್ ವಾಲ್ಡಿಯಾ (ಪದ್ಮ ಭೂಷಣ), ವಿಜ್ಞಾನಿ ಎಸ್. ಅರುಣನ್, ಇನ್ಫೊಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ಟಿ.ವಿ. ಮೋಹನ್ದಾಸ್ ಪೈ (ಪದ್ಮಶ್ರೀ) ಅವರಿಗೆ ಪ್ರಶಸ್ತಿ ಗೌರವ ಲಭಿಸಿದೆ. ದ್ಗುರು
ಪದ್ಮ ವಿಭೂಷಣ ಪುರಸ್ಕೃತರಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್ ಮತ್ತು ದಿಲೀಪ್ ಕುಮಾರ್, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಹಿರಿಯ ವಕೀಲ ಕೆ.ಕೆ. ವೇಣುಗೋಪಾಲ್, ಪರಮಾಣು ವಿಜ್ಞಾನಿ ಪ್ರೊ. ಎಂ.ಆರ್. ಶ್ರೀನಿವಾಸನ್, ವಾಣಿಜ್ಯೋದ್ಯಮಿ ಕರೀಂ ಅಲ್ ಹುಸೇನಿ ಆಗಾ ಖಾನ್, ಉತ್ತರಪ್ರದೇಶದ ಜಗದ್ಗುರು ರಮಾನಂದಾಚಾರ್ಯಸ್ವಾಮಿ ರಾಮಭದ್ರಾಚಾರ್ಯ ಇದ್ದಾರೆ.
ಪದ್ಮ ಭೂಷಣ ಪುರಸ್ಕೃತರಲ್ಲಿ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ, ಮೈಕ್ರೊಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್ ಮತ್ತು ಅವರ ಪತ್ನಿ ಮೆಲಿಂಡಾ, ಲೋಕಸಭೆ ಮಾಜಿ ಸೆಕ್ರೆಟರಿ ಜನರಲ್ ಸುಭಾಶ್ ಸಿ ಕಶ್ಯಪ್, ಪತ್ರಕರ್ತರಾದ ರಜತ್ ಶರ್ಮ ಮತ್ತು ಸ್ವಪನ್ ದಾಸ್ಗುಪ್ತ, ಹಿರಿಯ ವಕೀಲ ಹರೀಶ್ ಸಾಳ್ವೆ, ಹೃದ್ರೋಗತಜ್ಞ ಅಶೋಕ್ ಸೇಠ್, ಭಾರತ ಸಂಜಾತ ಅಮೆರಿಕ ಗಣಿತಶಾಸ್ತ್ರಜ್ಞ ಮಂಜುಲ್ ಭಾರ್ಗವ, ಹಿರಿಯ ಕ್ರೀಡಾಪಟು ಸತ್ಪಾಲ್, ಸ್ವಾಮಿ ಸತ್ಯಮಿತ್ರಾನಂದ ಗಿರಿ ಸೇರಿದ್ದಾರೆ.
ಪದ್ಮಶ್ರೀ ಪುರಸ್ಕೃತರಲ್ಲಿ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಕ್ರೀಡಾಪಟುಗಳಾದ ಪಿ.ವಿ. ಸಿಂಧೂ, ಮೈಥಿಲಿರಾಜ್, ಸಬಾ ಅಂಜುಮ್, ಎನ್ಸಿಇಆರ್ಟಿ ಮಾಜಿ ನಿರ್ದೇಶಕ ಜೆ.ಎಸ್. ರಜಪೂತ್, ಕರ್ನಾಟಕ ಸಂಗೀತಗಾರ್ತಿ ಸುಧಾ ರಘುನಾಥನ್, ಜಗತ್ ಗುರು ಅಮೃತ ಸೂರ್ಯಾನಂದ ಮಹಾರಾಜ, ದಾವೂದಿ ಬೋಹ್ರಾ ಸಮುದಾಯದ ನಾಯಕ ದಿ. ಸೈಯೇಂದ್ರ ಮೊಹಮ್ಮದ್ ಬರ್ಹಾನುದ್ದೀನ್ ಒಳಗೊಂಡಿದ್ದಾರೆ.
ಪ್ರಶಸ್ತಿ ಪುರಸ್ಕೃತರಲ್ಲಿ ತಲಾ 17 ಮಹಿಳೆಯರು, ವಿದೇಶಿಯರು, ಎನ್ಆರ್ಐಗಳು, ಪಿಐಒಗಳು ಹಾಗೂ ನಾಲ್ವರಿಗೆ ಮರಣೋತ್ತರವಾಗಿ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.