ಬೆಂಗಳೂರು: ರಾಜ್ಯದ 105 ತಾಲ್ಲೂಕುಗಳಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದು, ಬರದ ಛಾಯೆ ಆವರಿಸಿದೆ. ಸಚಿವ ಸಂಪುಟ ಸಭೆ ಸೇರಿ ಮುಂದಿನ ಒಂದು ವಾರದಲ್ಲಿ ಬರಪೀಡಿತ ತಾಲ್ಲೂಕುಗಳನ್ನು ಘೋಷಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ ಬಹಿರಂಗಪಡಿಸಿದರು.
ಬುಧವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘7 ತಾಲ್ಲೂಕುಗಳಲ್ಲಿ ಮಾತ್ರ ಹೆಚ್ಚು ಮಳೆಯಾಗಿದೆ. 64 ತಾಲ್ಲೂಕುಗಳಲ್ಲಿ ಸಾಧಾರಣ ಮಳೆ ಆಗಿದೆ. ಉಳಿದಂತೆ ಎಲ್ಲ ತಾಲ್ಲೂಕುಗಳಲ್ಲಿ ಮಳೆ ಕಡಿಮೆ ಆಗಿದೆ’ ಎಂದು ವಿವರಿಸಿದರು.
ಮಳೆ ಕೊರತೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅನೇಕ ಕಡೆ ವಿದ್ಯುತ್ ಸಂಪರ್ಕವನ್ನೂ ನೀಡಿಲ್ಲ. ಈ ಸಲುವಾಗಿ ₨ 200 ಕೋಟಿ ಅಗತ್ಯ ಇದ್ದು, ತಕ್ಷಣ ಬಿಡುಗಡೆ ಮಾಡಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದರು.
‘ಮುಖ್ಯ ಕಾರ್ಯದರ್ಶಿಯವರು ನಾಳೆಯೇ ಅಧಿಕಾರಿಗಳ ಸಭೆ ನಡೆಸಿ, ಪರಿಸ್ಥಿತಿಯನ್ನು ಅವಲೋಕಿಸಬೇಕು. ಜಿಲ್ಲಾಧಿಕಾರಿಗಳಿಗೆ ಅಗತ್ಯ ಇರುವ ಹಣ ಬಿಡುಗಡೆ ಮಾಡಬೇಕು ಎಂದರು.
ಅಗತ್ಯ ಇರುವ ಕಡೆ ಗೋಶಾಲೆ ಗಳನ್ನು ತೆರೆಯಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಮಸೂದೆಗೆ ಆಕ್ಷೇಪ: ‘ಬಿಬಿಎಂಪಿ ವಿಭಜನೆ ಮಸೂದೆಯನ್ನು ರಾಜ್ಯಪಾಲರು ಸಂವಿಧಾನದ ಅನುಚ್ಛೇದ 200ರ ಅಡಿಯಲ್ಲಿ ರಾಷ್ಟ್ರಪತಿ ಅವರಿಗೆ ಕಳುಹಿಸಿದ್ದಾರೆ’ ಎಂದರು.
‘ಮಸೂದೆಗೆ ಸಂಬಂಧಿಸಿದಂತೆ ರಾಜ್ಯಪಾಲರು 15 ರಿಂದ 20 ಆಕ್ಷೇಪಗಳನ್ನು ಎತ್ತಿದ್ದಾರೆ. ಅಧಿಕಾರಿ ಗಳೊಂದಿಗೆ ಸೇರಿ ಅವುಗಳ ಅಧ್ಯಯನ ನಡೆಸುತ್ತಿದ್ದೇನೆ’ ಎಂದು ಹೇಳಿದರು.
‘ರಾಜ್ಯಪಾಲರ ವಿರುದ್ಧ ಕೇಂದ್ರ ಸರ್ಕಾರಕ್ಕೆ ದೂರು ನೀಡುತ್ತೀರಾ’ ಎಂಬ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸಲು ಜಯಚಂದ್ರ ನಿರಾಕರಿಸಿದರು.