ಬೆಂಗಳೂರು: ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿರುವ ಅಗರ್ಬತ್ತಿ ಕಾರ್ಖಾನೆ ಮೇಲೆ ಗುರುವಾರ ಬೆಳಿಗ್ಗೆ ದಿಢೀರ್ ದಾಳಿ ನಡೆಸಿದ ಸಿಐಡಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಬಾಲಕರು ಸೇರಿದಂತೆ 107 ಜೀತದಾಳುಗಳನ್ನು ರಕ್ಷಿಸಿದ್ದಾರೆ.
‘ಕಾರ್ಖಾನೆಯ ಮಾಲೀಕ ಬಾಲಾಜಿ, ಹಲವು ವರ್ಷಗಳಿಂದ ಕಾರ್ಮಿಕರನ್ನು ಜೀತಕ್ಕೆ ಇಟ್ಟುಕೊಂಡಿರುವ ಬಗ್ಗೆ ಸ್ವಯಂ ಸೇವಾ ಸಂಸ್ಥೆಯೊಂದು (ಎನ್ಜಿಒ) ಮಾಹಿತಿ ನೀಡಿತು. ಆ ಮಾಹಿತಿ ಆಧರಿಸಿ ಬೆಳಿಗ್ಗೆ 6.30ಕ್ಕೆ ಆರೋಗ್ಯ ಇಲಾಖೆ, ಸಿಐಡಿಯ ಮಾನವ ಸಾಗಣೆ ತಡೆ ಘಟಕ, ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರ ಜತೆ ಕಾರ್ಯಾಚರಣೆ ನಡೆಸಿ ಕಾರ್ಮಿಕರನ್ನು ರಕ್ಷಿಸಲಾಯಿತು’ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದರು.
‘ಪಶ್ಚಿಮ ಬಂಗಾಳ ಮೂಲದ 43, ಅಸ್ಸಾಂನ 40, ಜಾರ್ಖಂಡ್ನ 23 ಹಾಗೂ ನೇಪಾಳ ಮೂಲದ ಇಬ್ಬರು ಕಾರ್ಮಿಕರನ್ನು ರಕ್ಷಿಸಲಾಗಿದೆ. ಅವರನ್ನು ಇಂಟರ್ನ್ಯಾಷನಲ್ ಜಸ್ಟಿಸ್ ಮಿಷನ್ (ಐಜೆಎಂ) ಸ್ವಯಂಸೇವಾ ಸಂಸ್ಥೆಯ ನೆರವಿನಿಂದ ತವರಿಗೆ ಕಳುಹಿಸಲಾಗುವುದು. ಕಾರ್ಖಾನೆ ಮಾಲೀಕ ಬಾಲಾಜಿ ವಿರುದ್ಧ ಜೀತಕ್ಕಾಗಿ ವ್ಯಕ್ತಿಯನ್ನು ಖರೀದಿಸುವುದು (ಐಪಿಸಿ 370), ಕಾನೂನು ಬಾಹಿರವಾಗಿ ದುಡಿಸಿಕೊಳ್ಳುವುದು (ಐಪಿಸಿ 374) ಹಾಗೂ ಮಾನವ ಸಾಗಣೆ ಆರೋಪದಡಿ ಕಗ್ಗಲಿಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.
‘ದಲ್ಲಾಳಿಗಳ ಮೂಲಕ ಈ ಕಾರ್ಮಿಕರನ್ನು ಸಂಪರ್ಕಿಸಿದ್ದ ಬಾಲಾಜಿ, ಮಾಸಿಕ ₨ 7 ಸಾವಿರ ಕೂಲಿ, ಊಟ–ವಸತಿ ಕಲ್ಪಿಸುವುದಾಗಿ ನಂಬಿಸಿ ಕರೆದುಕೊಂಡು ಬಂದಿದ್ದ. ನಿತ್ಯ 15 ತಾಸು ದುಡಿಸಿಕೊಳ್ಳುತ್ತಿದ್ದ ಅವರು, ಮೂರು ಮಂದಿಯುಳ್ಳ ಕುಟುಂಬವೊಂದಕ್ಕೆ ಮಾಸಿಕ ₹ ₨ 300 ಮಾತ್ರ ನೀಡುತ್ತಿದ್ದರು. ಎಲ್ಲಾ 107 ಮಂದಿ ದೊಡ್ಡ ಗೋದಾಮಿನಲ್ಲಿ ಮಲಗಬೇಕಿತ್ತು. ಇಷ್ಟು ಕಾರ್ಮಿಕರಿಗೆ ಕೇವಲ ಎರಡು ಶೌಚಾಲಯಗಳಿದ್ದವು’ ಎಂದು ಐಜೆಎಂ ಸದಸ್ಯ ಜೋಸೆಫ್ ತಿಳಿಸಿದರು.
‘ನಿಯಮ ಪ್ರಕಾರ ದಿನಕ್ಕೆ ₹ ₨ 252 ಕನಿಷ್ಠ ಕೂಲಿ ಸಿಗಬೇಕು. ಆದರೆ, ಇವರಿಗೆ ದಿನಕ್ಕೆ ₹ ₨ 9 ರಿಂದ ₹ ₨ 15 ಮಾತ್ರ ನೀಡಲಾಗುತ್ತಿತ್ತು ಎಂಬುದು ಕಾರ್ಮಿಕರ ವಿಚಾರಣೆಯಿಂದ ಗೊತ್ತಾಗಿದೆ’ ಎಂದರು. ‘ರಕ್ಷಿಸಲಾದ ಜೀತದಾಳುಗಳಲ್ಲಿ 5 ರಿಂದ 10 ವರ್ಷದ ಆರು ಮಕ್ಕಳೂ ಇದ್ದಾರೆ. ಮಾಲೀಕರು, ಆ ಮಕ್ಕಳನ್ನೂ ಕೆಲಸದಲ್ಲಿ ತೊಡಗಿಸುವಂತೆ ಪೋಷಕರಿಗೆ ಒತ್ತಾಯಿಸುತ್ತಿದ್ದರು. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಜತೆಗೆ ಶಾಲೆಗೆ ಹೋಗಬೇಕಾದ ಮಕ್ಕಳನ್ನು ಅಕ್ರಮ ಬಂಧನದಲ್ಲಿಟ್ಟಿರುವುದು ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆ. ಹೀಗಾಗಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಮೊಬೈಲ್ ಕಿತ್ತುಕೊಂಡರು
‘ಜೀವನ ಸಾಗಿಸುವಷ್ಟು ಕೂಲಿ ಸಿಗುತ್ತದೆ ಎಂಬ ಆಸೆಯಿಂದ ನಗರಕ್ಕೆ ಬಂದೆವು. ಆದರೆ, ಕಾರ್ಖಾನೆ ಪ್ರವೇಶಿಸುತ್ತಿದ್ದಂತೆಯೇ ಮೊಬೈಲ್–ಪರ್ಸ್ಗಳನ್ನು ಕಸಿದುಕೊಂಡ ಮಾಲೀಕರು, ತಮ್ಮ ಆಳುಗಳಿಂದ ಬೆದರಿಸಿ ಬಲವಂತವಾಗಿ ಕೆಲಸ ಮಾಡಿಸಿಕೊಳ್ಳಲು ಆರಂಭಿಸಿದರು. ಅಗರ್ಬತ್ತಿ ತಯಾರಿಕೆ ವೇಳೆ ರಾಸಾಯನಿಕ ವಸ್ತುಗಳ ವಾಸನೆಯಿಂದ ಆರೋಗ್ಯ ಹದಗಟ್ಟಿದ್ದರೂ ಆಸ್ಪತ್ರೆಗೆ ಹೋಗಲೂ ಅವಕಾಶ ಕೊಟ್ಟಿರಲಿಲ್ಲ’ ಎಂದು ಅಸ್ಸಾಂ ಮೂಲದ ಕಾರ್ಮಿಕರೊಬ್ಬರು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.