ಚೆನ್ನೈ (ಪಿಟಿಐ): ಪಕ್ಷದ ಖಜಾಂಚಿ ಎಂ.ಕೆ.ಸ್ಟಾಲಿನ್ ಮನೆಯಲ್ಲಿ ಭಾನುವಾರ ಅವರ ಎದುರಿನಲ್ಲಿಯೇ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆಯ 11 ಕಾರ್ಯಕರ್ತರನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿತು. ಎಲ್ಲ ಆರೋಪಿಗಳನ್ನು ವೆಲ್ಲೂರು ಕಾರಾಗೃಹಕ್ಕೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದರು.
ಪಕ್ಷದ ಆಂತರಿಕ ವಿಚಾರಗಳನ್ನು ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ಧ ಭಾನುವಾರ ಪ್ರತಿಭಟನೆ ನಡೆಸಿದ ಡಿಎಂಕೆಯ ಒಂದು ಗುಂಪಿನ ಕಾರ್ಯಕರ್ತರು ಕೆಲ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಮೂವರು ಪತ್ರಕರ್ತರು ಗಾಯಗೊಂಡಿದ್ದರು.
ಘಟನೆ ಹಿನ್ನೆಲೆ:
ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಕಳಪೆ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಕ್ಷದ ಖಜಾಂಚಿ ಎಂ.ಕೆ. ಸ್ಟಾಲಿನ್, ಕೆಲವೇ ಗಂಟೆಗಳಲ್ಲಿ ವರಿಷ್ಠರ ಸಲಹೆಯಂತೆ ನಿರ್ಧಾರ ಬದಲಿಸಿದ ಘಟನೆ ಭಾನುವಾರ ನಡೆದಿತ್ತು.
ತಮ್ಮ ಕಿರಿಯ ಪುತ್ರನ ರಾಜೀನಾಮೆ ನಂತರ ಪಕ್ಷದ ಹಿರಿಯರ ಜತೆ ಚರ್ಚಿಸಿದ ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ, ನಿರ್ಧಾರ ಬದಲಿಸಲು ಸ್ಟಾಲಿನ್ ಅವರಿಗೆ ಸೂಚಿಸಿದರು. ಇದರ ಜತೆ ಪಕ್ಷದ ವಿವಿಧ ಮುಖಂಡರು ಮತ್ತು ಕಾರ್ಯಕರ್ತರು ಸ್ಟಾಲಿನ್ ಮನೆಗೆ ಧಾವಿಸಿ ರಾಜೀನಾಮೆ ಹಿಂಪಡೆಯಲು ಒತ್ತಡ ಹಾಕಿದ್ದರು.
ಈ ಬೆಳವಣಿಗೆ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಡಿಎಂಕೆ ಯುವ ಘಟಕದ ಮುಖ್ಯಸ್ಥರೂ ಆದ ಸ್ಟಾಲಿನ್, ಹಿರಿಯರ ಸಲಹೆಯಂತೆ ರಾಜೀನಾಮೆ ವಾಪಸ್ ಪಡೆದಿರುವುದಾಗಿ ತಿಳಿಸಿದ್ದರು.
ಆದರೆ, ಸ್ಟಾಲಿನ್ ರಾಜೀನಾಮೆ ಹಿಂಪಡೆದಿರುವುದನ್ನು ಅವರ ಹಿರಿಯಣ್ಣ ಮತ್ತು ಪಕ್ಷದ ಉಚ್ಚಾಟಿತ ನಾಯಕ ಎಂ.ಕೆ. ಅಳಗಿರಿ, ಇದೊಂದು ‘ನಾಟಕ’ ಎಂದು ಟೀಕಿಸಿದ್ದರು.
ದಿನಪೂರ್ತಿ ನಡೆದ ಈ ಬೆಳವಣಿಗೆಯನ್ನು ಪ್ರಸಾರ ಮಾಡಿದ ಕೆಲ ಮಾಧ್ಯಮಗಳ ವಿರುದ್ಧ ಡಿಎಂಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ವರದಿಗಾಗಿ ಸ್ಟಾಲಿನ್ ಮನೆಗೆ ಆಗಮಿಸಿದ್ದ ಕೆಲ ವರದಿಗಾರರ ಮೇಲೆ ಸ್ಟಾಲಿನ್ ಎದುರೇ ಹಲ್ಲೆ ನಡೆಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.