ನವದೆಹಲಿ (ಪಿಟಿಐ): ದೇಶದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 12 ರಾಜ್ಯಗಳ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿರುವುದಾಗಿ ಕೇಂದ್ರೀಯ ಜಲ ಆಯೋಗ (ಸಿಡಬ್ಲ್ಯುಸಿ) ಶುಕ್ರವಾರ ತಿಳಿಸಿದೆ.
ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಉತ್ತರಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ತ್ರಿಪುರಾ ರಾಜ್ಯಗಳ ಜಲಾಶಯಗಳಲ್ಲಿ ಕಳೆದ ಜುಲೈ 3ರಲ್ಲಿ ದಾಖಲಾದ ನೀರಿನ ಪ್ರಮಾಣಕ್ಕಿಂತ ಕಡಿಮೆ ನೀರು ಸಂಗ್ರಹವಾಗಿದೆ. ಆದರೆ ಪಂಜಾಬ್, ಒಡಿಶಾ ಹಾಗೂ ಛತ್ತೀಸಗಡ ರಾಜ್ಯಗಳ ಜಲಾಶಯಗಳಲ್ಲಿ ನೀರಿನ ಸಂಗ್ರಹ ಈ ವರ್ಷವೂ ಉತ್ತಮವಿದೆ ಎಂದು ಹೇಳಿದೆ.
ಶೇ 53ರಷ್ಟು ಮಳೆ ಕೊರತೆ: ರಾಷ್ಟ್ರದಲ್ಲಿ ಇದುವರೆಗೆ ಮುಂಗಾರು ಕೊರತೆ ಪ್ರಮಾಣ ಶೇ 53ರಷ್ಟು ಎಂದು ಹವಾಮಾನ ತಜ್ಞರು ಹೇಳಿದ್ದು, ದಕ್ಷಿಣ ಭಾರತ ಮತ್ತು ಮಧ್ಯಭಾರತದಲ್ಲಿ ಅತಿ ಹೆಚ್ಚು ಕೊರತೆ ಕಂಡುಬಂದಿದೆ. ದಕ್ಷಿಣ ಭಾರತದಲ್ಲಿ ಶೇ 62 ಮತ್ತು ಮಧ್ಯಭಾರತದಲ್ಲಿ ಶೇ 74ರಷ್ಟು ಕೊರತೆ ಇದೆ.