ಬೆಂಗಳೂರು: ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಂಡಿರುವ ನಗರದ ವಿವಿಧ ರಾಜಕಾಲುವೆಗಳಿಗೆ ಬಿಬಿಎಂಪಿಯ (ರಾಜಕಾಲುವೆ) ಮುಖ್ಯ ಎಂಜಿನಿಯರ್ ಎಚ್.ಸಿ. ಅನಂತಸ್ವಾಮಿ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ನಗರದ ಎಚ್ಬಿಆರ್ ಲೇಔಟ್, ಕರಿಯಣ್ಣಪಾಳ್ಯ, ಈಜೀಪುರ ಹಾಗೂ ನೀಲಸಂದ್ರದಿಂದ ಹಾದು ಹೋಗಿರುವ ರಾಜಕಾಲುವೆಗಳಲ್ಲಿ ಕೈಗೊಂಡಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರು.
‘ಮಳೆಗಾಲದಲ್ಲಿ ರಾಜಕಾಲುವೆಗಳಲ್ಲಿ ನೀರು ತುಂಬಿಕೊಂಡು ಸಮಸ್ಯೆ ಉದ್ಭವಿಸುವ ಒಟ್ಟು 147 ಸ್ಥಳಗಳನ್ನು ನಗರದಲ್ಲಿ ಗುರುತಿಸಲಾಗಿದ್ದು, ಆರಂಭಿಕ ಹಂತದಲ್ಲಿ ಚಳ್ಳಘಟ್ಟ, ಕೋರಮಂಗಲ, ವೃಷಭಾವತಿ ಹಾಗೂ ಹೆಬ್ಬಾಳದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದು ಹೇಳಿದರು.
‘ಲಿಂಗರಾಜಪುರದಿಂದ ಕಲ್ಕೆರೆವರೆಗೆ ಒಟ್ಟು 8 ಕಿ.ಮೀ ರಾಜಕಾಲುವೆಯಿಂದ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಅದರಲ್ಲಿ ಈಗಾಗಲೇ 4 ಕಿ.ಮೀ ಕೆಲಸ ಪೂರ್ಣಗೊಂಡಿದೆ’ ಎಂದು ತಿಳಿಸಿದರು.
‘ಆಡುಗೋಡಿಯಿಂದ ಕೋರ ಮಂಗಲ ಕಣಿವೆಯವರೆಗೆ 7.5 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಇದನ್ನು ಬೆಳ್ಳಂದೂರುವರೆಗೆ ಮುಗಿಸಲು ಉದ್ದೇಶಿಸಲಾಗಿದ್ದು, ಇದರ ಒಟ್ಟು ಉದ್ದ 3 ಕಿ.ಮೀ ಇದೆ. ಈ ಕೆಲಸ ಪೂರ್ಣಗೊಳ್ಳಲು ಒಂದು ತಿಂಗಳು ಸಮಯ ಹಿಡಿಯಬಹುದು’ ಎಂದರು. ‘ಹೆಬ್ಬಾಳ ಸಮೀಪದ ಚಾಮುಂಡಿನಗರ ಸೇರಿದಂತೆ ಇತರ ಕಡೆ ಒಟ್ಟು 3.5 ಕಿ.ಮೀ ವರೆಗೆ ರಾಜಕಾಲುವೆಯಿಂದ ಹೂಳು ತೆಗೆಯಲಾಗುತ್ತಿದೆ. ಇದಕ್ಕೆ ₨3.91 ಕೋಟಿ ಖರ್ಚು ಆಗಲಿದೆ’ ಎಂದರು.
‘ಪೂರ್ವ ವಲಯದಲ್ಲಿ ₨3.85 ಕೋಟಿ ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಳೆದ ಒಂದೂವರೆ ತಿಂಗಳಿಂದ ಕೆಲಸ ನಡೆಯುತ್ತಿದೆ’ ಎಂದರು.
‘ಬೊಮ್ಮನಹಳ್ಳಿ, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯೂ ಕೆಲಸ ಪ್ರಗತಿಯಲ್ಲಿದೆ’ ಎಂದೂ ಮಾಹಿತಿ ನೀಡಿದರು. ‘ರಾಜಕಾಲುವೆಗಳ ಹೂಳು ತೆಗೆದು ಅದನ್ನು ನೈಸ್ ರಸ್ತೆಯಲ್ಲಿರುವ ಗೊಟ್ಟಿಗೆರೆ ಸಮೀಪದ ಕ್ವಾರಿಗಳಿಗೆ ಸಾಗಿಸಲಾಗುತ್ತಿದೆ’ ಎಂದರು.