ಚಿಕ್ಕಮಗಳೂರು: ಪೆಟ್ರೋಲಿಯಂ ಡೀಲರ್ ಸಮಸ್ಯೆ ಕುರಿತು ಅಧ್ಯಯನ ಮಾಡಿ, ನೀಡಿರುವ ಅಪೂರ್ವಚಂದ್ರ ಸಮಿತಿ ವರದಿಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿರುವ ದಿನದಿಂದ ವಿತರಕ ರಿಗೆ ಕಮಿಷನ್ ನೀಡಿ, ಪೆಟ್ರೋಲಿಯಂ ವಿತರಕರನ್ನು ರಕ್ಷಿಸಬೇಕೆಂದು ಚಿಕ್ಕಮಗ ಳೂರು ಜಿಲ್ಲಾ ಪೆಟ್ರೋಲಿಯಂ ವಿತರಕರ ಸಂಘದ ಅಧ್ಯಕ್ಷ ದೇವಾನಂದ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಕೇಂದ್ರ ಸರ್ಕಾರ ನೇಮಿಸಿದ್ದ ಅಪೂರ್ವಚಂದ್ರ ಸಮಿತಿ ನೀಡಿರುವ ವರದಿಯನ್ನು ಹಿಂದಿನ ಯುಪಿಎ ಸರ್ಕಾರ ಒಪ್ಪಿಕೊಂಡಿದೆ. ಸಮಿತಿ ವರದಿಯಂತೆ ದೇಶದಾದ್ಯಂತ ಪೆಟ್ರೋಲಿಯಂ ವಿತರಕ ರಿಗೆ ವರದಿ ಒಪ್ಪಿರುವ ದಿನಾಂಕದಿಂದ ಪೂರ್ವಾನ್ವಯವಾಗುವಂತೆ ಕಮಿಷನ್ ನೀಡಿ, ಸಮಸ್ಯೆಯಿಂದ ಬಳಲುತ್ತಿರುವ ವಿತರಕರನ್ನು ಕಾಪಾಡಬೇಕೆಂದು ಕೋರಿದರು.
ವರ್ಷದ ಅವಧಿಯಲ್ಲಿ ಸಾರ್ವಜನಿಕ ತೈಲ ಕಂಪೆನಿಗಳು ಪೆಟ್ರೋಲ್, ಡೀಸೆಲ್ ಮತ್ತು ಎಲ್.ಪಿ.ಜಿ. ದರವನ್ನು 20 ಬಾರಿ ಪರಿಷ್ಕರಿಸಿ, ದೇಶದಲ್ಲಿರುವ 55 ಸಾವಿರ ಪೆಟ್ರೊಲಿಯಂ ವಿತರಕರಲ್ಲಿ ಆತಂಕ ವನ್ನುಂಟು ಮಾಡಿವೆ. ಇಂಧನ ಕಂಪೆನಿ ಗಳು ಪೆಟ್ರೋಲ್ ದರವನ್ನು 6 ಬಾರಿ ಹೆಚ್ಚಿಸಿ, 16 ಬಾರಿ ಇಳಿಕೆ ಮಾಡಿವೆ. ಡೀಸೆಲ್ ದರವನ್ನು 7 ಬಾರಿ ಹೆಚ್ಚಿಸಿ, 12 ಬಾರಿ ಇಳಿಸಿವೆ. ಪೆಟ್ರೋಲನ್ನು ₨13.8 ಕ್ಕೆ ಹೆಚ್ಚಳಗೊಳಿಸಿ, ₨26.16ಕ್ಕೆ ಇಳಿಸಿವೆ. ಡೀಸೆಲನ್ನು ₨ 11.3ಕ್ಕೆ ಹೆಚ್ಚಿಸಿ, ₨ 23.53ಕ್ಕೆ ಇಳಿಕೆ ಮಾಡಿವೆ. ಆಟೊ ಎಲ್.ಪಿ.ಜಿ. ದರವನ್ನು ₨ 7.41ಕ್ಕೆ ಹೆಚ್ಚಳಗೊಳಿಸಿ, ₨ 16.18ಕ್ಕೆ ಇಳಿಸಿವೆ ಎಂದು ದರ ಪರಿಷ್ಕರಣೆ ಮಾಹಿತಿ ನೀಡಿದರು.
ಮೂರು ತಿಂಗಳಿಗೊ ಮ್ಮೆಯೋ ಅಥವಾ ಆರು ತಿಂಗಳಿಗೊಮ್ಮೆ ದರ ಪರಿಷ್ಕರಿಸಿದರೆ ಒಳ್ಳೆಯದು. ಆದರೆ, ಆಗಾಗ್ಗೆ ದರ ಪರಿಷ್ಕರಣೆಯಾಗು ತ್ತಿರುವುದರಿಂದ ದೇಶದಲ್ಲಿರುವ 55 ಸಾವಿರ ವಿತರಕರಿಗೆ ಸುಮಾರು ₨ 2 ಸಾವಿರ ಕೋಟಿ ನಷ್ಟವಾಗಿದೆ. ಪ್ರತಿ ವಿತರಕರಿಗೆ ವಾರ್ಷಿಕ ₨5ರಿಂದ 10 ಲಕ್ಷ ನಷ್ಟವಾಗಿದ್ದು, ಉದ್ದಿಮೆಯಲ್ಲಿ ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕ ತೈಲ ಕಂಪನಿಗಳು ಸ್ಥಿರತೆ ಮೂಡಿಸಲು ಮುಂದಾಗಬೇಕಿದೆ ಎಂದರು.
ಒಂದು ಪೆಟ್ರೋಲ್ ಬಂಕ್ ನಿಂದ ಇನ್ನೊಂದು ಪೆಟ್ರೋಲ್ ಬಂಕ್ಗೆ ಇಂತಿಷ್ಟು ದೂರ ಇರಬೇಕೆಂಬ ನಿಯಮ ಇದೆ. ಆದರೆ, ಇತ್ತೀಚೆಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಎಲ್ಲೆಂದರಲ್ಲಿ ಹೊಸ ಪೆಟ್ರೋಲ್ ಬಂಕ್ ತೆರೆದಿವೆ ಎಂದು ದೂರಿದರು. ಇದರಿಂದ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಬಂಕ್ಗಳಿಗೆ, ಹೊಸದಾಗಿ ತೆರೆಯುವ ಬಂಕ್ ಗಳಿಗೂ ಲಾಭವಾಗುತ್ತಿಲ್ಲ. ಈ ಕುರಿತು ಕೇಂದ್ರ ಸರ್ಕಾರ ನಿರ್ದಿಷ್ಟ ವೈಜ್ಞಾನಿಕ ಮಾರುಕಟ್ಟೆ ಬೇಡಿಕೆ ಮತ್ತು ಪೂರೈಕೆ ಆಧಾರಿತ ಮಾರ್ಗಸೂಚಿ ಸೂತ್ರಗಳನ್ನು ತೈಲ ಕಂಪೆನಿಗಳಿಗೆ ಸೂಚಿಸಿ, ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶ ನೀಡಬೇಕೆಂದು ಕೋರಿದರು.
ವಿತರಕರಿಗೆ ಹೆಚ್ಚು ಕಮಿಷನ್ ನೀಡಲು ಮುಂದಾಗದಿದ್ದರೆ, ಇದೇ 15ರಂದು ದೇಶದ ಎಲ್ಲ ಪೆಟ್ರೋಲ್ ಬಂಕ್ಗಳಲ್ಲಿ ಕಪ್ಪು ಪಟ್ಟಿ ಧರಿಸಿ ಕೆಲಸ ನಿರ್ವಹಿಸಲಾಗುವುದು, ಮುಂದಿನ ದಿನ ಗಳಲ್ಲಿ ಅಮರಣಾಂತ ಉಪವಾಸ ನಡೆಸ ಲಾಗುವುದು ಎಂದು ಎಚ್ಚರಿಸಿದರು. ಅಸೋಸಿಯೇಷನ್ ಕಾರ್ಯದರ್ಶಿ ದಿನಕರರಾವ್, ಸತ್ಯನಾರಾಯಣ, ವಿವೇಕ್ ಪುಣ್ಯಮೂರ್ತಿ, ನಾಗರಾಜ್, ಸಿ.ಡಿ.ಹನುಮಂತಪ್ಪ ಇದ್ದರು.
*
ಸರ್ಕಾರ ಮತ್ತು ತೈಲ ಕಂಪೆನಿಗಳು ವಿತರಕರ ಬಗ್ಗೆ ಗಮನ ಹರಿಸದಿರುವು ದರಿಂದ ವರ್ತಕರು ದಿವಾಳಿ ಅಂಚಿಗೆ ಬಂದಿದ್ದಾರೆ. ಕೆಲವರು ಆತ್ಮಹತ್ಯೆ ದಾರಿ ತುಳಿಯುವ ಸಾಧ್ಯತೆಗಳಿವೆ.
-ದೇವಾನಂದ್,
ಜಿಲ್ಲಾ ಪೆಟ್ರೋಲಿಯಂ ವಿತರಕರ ಸಂಘದ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.