ಬೆಂಗಳೂರು: ನ್ಯಾಯಾಲಯದ ಆದೇಶ ಮತ್ತು ಸರ್ಕಾರದ ನಿರ್ಧಾರದಂತೆ ಕಬ್ಬು ಬೆಳೆಗಾರರಿಗೆ 15 ದಿನಗಳೊಳಗೆ ಪ್ರತಿ ಟನ್ಗೆ ರೂ2,500 ದರ ಪಾವತಿಸುವಂತೆ 56 ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಲಾಗಿದೆ ಎಂದು ಸಕ್ಕರೆ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಭಾನುವಾರ ಹೇಳಿದರು.
ಈ ವಿವಾದಕ್ಕೆ ಸಂಬಂಧಿಸಿದಂತೆ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಗಾಗಲೇ ಈ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ. 15 ದಿನಗಳ ಒಳಗಾಗಿ ಹಣ ಪಾವತಿಸಿ ವರದಿ ನೀಡುವಂತೆ ಸೂಚಿಸಿದ್ದೇವೆ’ ಎಂದರು.
‘ಪ್ರಸಕ್ತ ಹಂಗಾಮಿನಲ್ಲಿ ಈಗಾಗಲೇ 24 ಕಾರ್ಖಾನೆಗಳು ಕಬ್ಬು ಅರೆಯಲು ಆರಂಭಿಸಿವೆ. ಅರೆಯುವಿಕೆಗೆ ಚಾಲನೆ ನೀಡುವಂತೆ ಇತರ ಕಾರ್ಖಾನೆಗಳಿಗೂ ಸೂಚಿಸಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಈ ವರ್ಷ ಕಬ್ಬಿಗೆ ದರ ನಿಗದಿ ಪಡಿಸಿಲ್ಲ. ನ್ಯಾಯಬದ್ಧ ಲಾಭದಾಯಕ ಬೆಲೆ (ಎಫ್ಆರ್ಪಿ) ನಿಯಮಗಳ ಪ್ರಕಾರ, ಕಾರ್ಖಾನೆಗಳು ಎರಡು ಕಂತಿನಲ್ಲಿ ಬೆಳೆಗಾರರಿಗೆ ಹಣ ಪಾವತಿಸಬೇಕು. ಕಬ್ಬು ಖರೀದಿಸಿದ 14 ದಿನಗಳ ಒಳಗಾಗಿ ಮೊದಲ ಕಂತನ್ನು ಪಾವತಿಸಬೇಕು. ಶೇ 9.5 ರಷ್ಟು ಇಳುವರಿ ಹೊಂದಿರುವ ಪ್ರತಿ ಟನ್ ಕಬ್ಬಿಗೆ ಕಾರ್ಖಾನೆ ಮಾಲೀಕರು ರೂ2,200 ನೀಡಬೇಕು. ನಂತರ ಮಾರ್ಚ್ ತಿಂಗಳಲ್ಲಿ ಅರೆಯುವಿಕೆ ಪೂರ್ಣಗೊಂಡ ಬಳಿಕ ಲಾಭಾಂಶ ಸೇರಿ ಎಲ್ಲದನ್ನೂ ಲೆಕ್ಕಾಚಾರ ಹಾಕಿ, ಹೆಚ್ಚುವರಿ ಮೊತ್ತ ನೀಡಬೇಕು’ ಎಂದು ಹೇಳಿದರು.