ಹೈದರಾಬಾದ್ (ಪಿಟಿಐ): ನಾಂದೇಡ್–ಸಿಕಂದರಾಬಾದ್ ಪ್ರಯಾಣಿಕರ ರೈಲು, ಶಾಲಾ ವಾಹನಕ್ಕೆ ಡಿಕ್ಕಿಯಾಗಿ ದೂರದವರೆಗೆ ಎಳೆದುಕೊಂಡು ಹೋದ ಕಾರಣ ಬಸ್ನಲ್ಲಿದ್ದ 16 ಮಕ್ಕಳು ಸೇರಿ 18 ಮಂದಿ ಮೃತಪಟ್ಟ ಘಟನೆ ತೆಲಂಗಾಣದ ಮೆದಕ್ ಜಿಲ್ಲೆಯ ಮಾಸಾಯಿಪೇಟ ಗ್ರಾಮದಲ್ಲಿ ಗುರುವಾರ ನಡೆದಿದೆ.
ಮೆದಕ್ನ ಯೆಲ್ದುರ್ತಿ ಮಂಡಳದ ಕಾವಲುರಹಿತ ರೈಲ್ವೆ ಕ್ರಾಸಿಂಗ್ನಲ್ಲಿ ಬೆಳಿಗ್ಗೆ 9.10ಕ್ಕೆ ನಡೆದ ಈ ಅವಘಡದಲ್ಲಿ ಚಾಲಕ ಹಾಗೂ ಕ್ಲೀನರ್ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ 22 ಮಕ್ಕಳು ಹೈದರಾಬಾದ್ನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೈಲು ದೂರದಿಂದಲೇ ಹಾರ್ನ್ ಮಾಡುತ್ತ ಬರುತ್ತಿತ್ತು. ಆದರೆ, ಶಾಲಾ ವಾಹನದ ಚಾಲಕ ಇದನ್ನು ನಿರ್ಲಕ್ಷಿಸಿದ. ರೈಲು ವಾಹನಕ್ಕೆ ಡಿಕ್ಕಿ ಹೊಡೆದಾಗ ದೊಡ್ಡ ಶಬ್ದ ಕೇಳಿಬಂತು. ವಾಹನ ಮೇಲಕ್ಕೆ ಚಿಮ್ಮಿತು ಎಂದು ಪ್ರತ್ಯಕ್ಷದರ್ಶಿ ಬಾಲಾ ಮಹೇಶ್ ಹೇಳಿದ್ದಾರೆ.
ಕಾಕತಿಯ ಟೆಕ್ನೊ ಸ್ಕೂಲ್ ವಾಹನದಲ್ಲಿ 36 ಮಕ್ಕಳು ಇದ್ದರು. ಅತಿ ವೇಗದಲ್ಲಿ ಚಲಿಸುತ್ತಿದ್ದ ರೈಲು ಬಸ್ಸನ್ನು ಒಂದು ಕಿ.ಮೀ. ದೂರದವರೆಗೆ ಎಳೆದುಕೊಂಡು ಹೋಗಿ ನಿಂತಿತು. ಬಸ್ ಸಂಪೂರ್ಣ ಜಖಂಗೊಂಡಿದ್ದು, ಮಕ್ಕಳ ಬ್ಯಾಗ್ ಹಾಗೂ ತಿಂಡಿ ಡಬ್ಬಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮೃತ ಮಕ್ಕಳೆಲ್ಲ 5–-15ರ ವಯೋಮಾನದವರು.
ಸಿಕಂದರಾಬಾದ್–ನಿಜಾಬಾಮಾದ್ ರೈಲು ನಿಲ್ದಾಣಗಳ ಮಾಸಾಯಿಪೇಟ ಹಾಗೂ ವಡಿಯಾರಾಮ್ ನಡುವಣ ರೈಲ್ವೆ ಕ್ರಾಸಿಂಗ್ನಲ್ಲಿ ದುರಂತ ನಡೆದಿದೆ.