ನವದೆಹಲಿ (ಐಎಎನ್ಎಸ್): ಡೆಹ್ರಾಡೂನ್ ನಲ್ಲಿ 2009ರಲ್ಲಿ ನಡೆದ ನಕಲಿ ಗುಂಡಿನ ಘರ್ಷಣೆಯಲ್ಲಿ 22ರ ಹರೆಯದ ವಿದ್ಯಾರ್ಥಿಯೊಬ್ಬನನ್ನು ಕೊಂದ ಪ್ರಕರಣದಲ್ಲಿ 18 ಮಂದಿಯ ಪೈಕಿ 17 ಪೊಲೀಸರಿಗೆ ದೆಹಲಿ ನ್ಯಾಯಾಲಯವೊಂದು ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿತು.
ಕೇಂದ್ರೀಯ ತನಿಖಾ ದಳ (ಸಿಬಿಐ) ವಿಶೇಷ ನ್ಯಾಯಾದೀಶ ಜೆ.ಪಿ.ಎಸ್. ಮಲಿಕ್ ಅವರು ನಕಲಿ ಗುಂಡಿನ ಘರ್ಷಣೆಯಲ್ಲಿ ಷಾಮೀಲಾಗಿದ್ದ 17 ಮಂದಿ ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು.
ಯುವಕನನ್ನು ಕೊಂದು ಹಾಕಿದ ಪ್ರಕರಣದಲ್ಲಿ 18 ಮಂದಿ ಪೊಲೀಸರಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿತು. ಆದರೆ ಅವರ ಪೈಕಿ ಒಬ್ಬನನ್ನು ಕೊಲೆ ಆಪಾದನೆಯಿಂದ ಮುಕ್ತಗೊಳಿಸಿ ತಪ್ಪು ದಾಖಲೆ ಸೃಷ್ಟಿಸಿದ ಅಪರಾಧಕ್ಕಾಗಿ ಶಿಕ್ಷೆಗೆ ಗುರಿ ಪಡಿಸಿತು.
ನಗರ ನಿಯಂತ್ರಣ ಕೇಂದ್ರದ ಮುಖ್ಯಸ್ಥ ಜಸ್ಪಾಲ್ ಸಿಂಗ್ ಗೊಸಾಯಿನ್ ಗೆ ಭಾರತೀಯ ದಂಡ ಸಂಹಿತೆಯ 218ನೇ ವಿಧಿಯ ಅಡಿಯಲ್ಲಿ ತಪ್ಪು ದಾಖಲೆ ಸೃಷ್ಟಿಸಿದ್ದಕ್ಕಾಗಿ ಶಿಕ್ಷಿಸಲಾಯಿತು.
2009ರ ಜುಲೈ ತಿಂಗಳಲ್ಲಿ ಗುಡ್ಡಗಾಡು ರಾಜ್ಯದಲ್ಲಿ ರಣಬೀರ್ ಸಿಂಗ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ 18 ಪೊಲೀಸರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.