ನವದೆಹಲಿ (ಪಿಟಿಐ): ಪವಿತ್ರ ಗಂಗಾ ನದಿಯ ಶುದ್ಧೀಕರಣಕ್ಕೆ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿಯ 18 ವರ್ಷಗಳ ಯೋಜನೆಯ ನೀಲನಕ್ಷೆಯನ್ನು ಮೋದಿ ನೇತೃತ್ವದ ಸರ್ಕಾರವು ಸುಪ್ರೀಂಕೋರ್ಟ್ ಮುಂದಿಟ್ಟಿದೆ.
ಗಂಗಾ ನದಿ ಶುದ್ಧೀಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿಳಂಬ ಧೋರಣೆಗೆ ಸುಪ್ರೀಂಕೋರ್ಟ್ ಇತ್ತೀಚೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಮೊದಲ ಹಂತದಲ್ಲಿ ಗಂಗಾ ನದಿಯ ದಡದಲ್ಲಿ ಬರುವ 118 ಪಟ್ಟಣಗಳಲ್ಲಿ ನದಿಗೆ ಒಳಚರಂಡಿ ನೀರು, ಕಸಕಡ್ಡಿಗಳು, ಮತ್ತು ಕೊಳಚೆ ಸೇರದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿರುವ ನೀಲನಕ್ಷೆ ಯೋಜನೆಯಲ್ಲಿ ತಿಳಿಸಲಾಗಿದೆ.
ಗಂಗಾ ನದಿ ಪುನಶ್ಚೇತನಕ್ಕಾಗಿ ಕಾಲ ಮಿತಿಯ ಬಹು ಹಂತದ ಯೋಜನೆಗಳನ್ನು ರೂಪಿಸಲಾಗಿದೆ. ಮೂರು ವರ್ಷಗಳ ಅಲ್ಪಾವಧಿ ಯೋಜನೆ, ಅದರ ನಂತರದ ಐದು ವರ್ಷಗಳ ಮಧ್ಯಮಾವಧಿ ಯೋಜನೆ ಹಾಗೂ ಅದರ ನಂತರದ 10 ವರ್ಷಗಳ ದೀರ್ಘಾವಧಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿರುವ ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ. ಇದಕ್ಕಾಗಿ ಸಾವಿರಾರು ಕೋಟಿಗಳ ಬಂಡವಾಳ ಬೇಕಾಗುತ್ತದೆ ಎಂದೂ ಹೇಳಿದೆ.
2,500 ಕಿ. ಮೀ. ಉದ್ದದ ನದಿಯನ್ನು ಶುದ್ಧ ಮಾಡುವ ಯೋಜನೆಯನ್ನು ಜಾರಿ ಮಾಡಬೇಕಾಗಿರುವ ಐದು ರಾಜ್ಯ ಸರ್ಕಾರಗಳ ಜತೆ ಸಮಾಲೋಚಿಸಿದ ನಂತರ ಮೂರು ಹಂತದ ಕಾಲಮಿತಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಲಾಗಿದೆ.
ಮೊದಲ ಹಂತದಲ್ಲಿ 118 ಪಟ್ಟಣಗಳನ್ನು ಗುರುತಿಸಲಾಗಿದ್ದು, ಈ ಪಟ್ಟಣಗಳಲ್ಲಿ ಸಂಪೂರ್ಣ ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ.
ಗಂಗಾ ನದಿ ಹೆಚ್ಚು ಮಲಿನಗೊಳ್ಳುವ ಕೇದಾರನಾಥ್, ಹರಿದ್ವಾರ, ವಾರಾಣಸಿ , ಕಾನ್ಪುರ, ಅಲಹಾಬಾದ್, ಪಟ್ನಾ ಮತ್ತು ದೆಹಲಿ ಹೀಗೆ ಏಳು ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ. ಗಂಗಾ ನದಿಯ ದಡದ ಮೇಲಿರುವ 1649 ಗ್ರಾಮಪಂಚಾಯತ್ಗಳಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆಗೆ 51 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯ ಮಾಡಲು ಉದ್ದೇಶಿಸಲಾಗಿದೆ.
ಗಂಗಾ ಶುದ್ಧೀಕರಣದ ದೀರ್ಘಾವಧಿ ಯೋಜನೆಯನ್ನು ಏಳು ಐಐಟಿಗಳ ತಜ್ಞರ ಸಲಹೆ ಪಡೆದು ರೂಪಿಸಲಾಗಿದೆ ಎಂದು ಸುಪ್ರೀಂಕೋರ್ಟ್ಗೆ ತಿಳಿಸಲಾಗಿದೆ.