ಮಂಡ್ಯ: ನಗರದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಗಸ್ಟ್ 2ರಂದು ‘ಉದ್ಯೋಗ ಮೇಳ’ ನಡೆಯ
ಲಿದ್ದು, ಸುಮಾರು 125 ಕಂಪೆನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಜಾತ್ಯತೀತ ಜನತಾದಳ, ಬೆಂಗಳೂರಿನ ಉದ್ಯೋಗ ಮಿತ್ರ ಹಾಗೂ ಪ್ರಗತಿ ಗ್ರೂಪ್ ಆಫ್ ಕಂಪೆನಿ ಜಂಟಿ ಆಶ್ರಯದಲ್ಲಿ ‘ಉದ್ಯೋಗ ಮೇಳ’ ನಡೆಯಲಿದೆ ಎಂದು ಮಾಜಿ ಶಾಸಕ ಎಂ. ಶ್ರೀನಿವಾಸ್ ಗುರುವಾರ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು.
ಜಾತ್ಯತೀತ ಜನತಾದಳ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಶಾಸಕ ಎನ್. ಚಲುವರಾಯಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ನೂತನವಾಗಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಸದಸ್ಯರನ್ನು ಪ್ರಗತಿ ಗ್ರೂಪ್ ಆಫ್ ಕಂಪೆನೀಸ್ ವ್ಯವಸ್ಥಾಪಕ ನಿರ್ದೇಶಕ ಎಚ್.ಎನ್. ಯೋಗೇಶ್, ‘ಉದ್ಯೋಗ ಮಿತ್ರ’ದ ವ್ಯವಸ್ಥಾಪಕ ನಿರ್ದೇಶಕ ಸಚ್ಚಿನ್ ನಾಯಕ್ ಅಭಿನಂದಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಉದ್ಯೋಗ ಮಿತ್ರ ಮತ್ತು ಪ್ರಗತಿ ಗ್ರೂಪ್ ಆಫ್ ಕಂಪೆನೀಸ್ ನಿರ್ದೇಶಕರಿಗೆ ಸಂಸದ ಸಿ.ಎಸ್. ಪುಟ್ಟರಾಜು ಅವರು ಅಭಿನಂದಿಸುವರು ಎಂದರು.
‘ಉದ್ಯೋಗ ಮೇಳ’ದಲ್ಲಿ ಕುಶಲ ಕಾರ್ಮಿಕರಿಗೂ ಉದ್ಯೋಗಾವಕಾಶ ಇರಲಿದೆ. ಅಭ್ಯರ್ಥಿಗಳ ವಿವರಗಳನ್ನು ದಾಖಲಿಸಿಕೊಂಡು ಉದ್ಯೋಗಾವ ಕಾಶದ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ ಎಂದು ಹೇಳಿದರು. ಮೇಳದಲ್ಲಿ 125ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಲಿವೆ ಎಂದು ಪ್ರಗತಿ ಗ್ರೂಪ್ ಆಫ್ ಕಂಪೆನೀಸ್ ವ್ಯವಸ್ಥಾಪಕ ನಿರ್ದೇಶಕ ಎಚ್.ಎನ್. ಯೋಗೇಶ್ ವಿವರ ನೀಡಿದರು.
ಉದ್ಯೋಗ ಮೇಳದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಸೂಕ್ತ ಉದ್ಯೋಗ ಒದಗಿಸಲಾಗುತ್ತದೆ ಎಂದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹೇಶ್, ಜಿ.ಪಂ ಸದಸ್ಯ ಕೆ.ಎಸ್. ವಿಜಯಾನಂದ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಉದಯಶಂಕರ್, ತಾಲ್ಲೂಕು ಜೆಡಿಎಸ್್ ಘಟಕದ ಅಧ್ಯಕ್ಷ ಕಂಬದಹಳ್ಳಿ ಪುಟ್ಟಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಎಸ್.ಪಿ. ಗೌರೀಶ್, ಮುಖಂಡ ತಗ್ಗಹಳ್ಳಿ ವೆಂಕಟೇಶ್, ಉದ್ಯೋಗ ಮಿತ್ರದ ನ್ಯಾನ್ಸಿ ಅವರು ಸುದ್ದಿಗೋಷ್ಠಿಯಲ್ಲಿ ಇದ್ದರು.