ಮೈಸೂರು: ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿವಾಹ ನಡೆಯುವುದರಿಂದ ಜೂನ್ 24ರಿಂದ 29ರ ವರೆಗೆ ಇಲ್ಲಿನ ಅಂಬಾವಿಲಾಸ ಅರಮನೆಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.
ಮದುವೆಯ ಪ್ರಾಥಮಿಕ ಹಂತದ ಸಿದ್ಧತೆಗಳು 24ರಿಂದ ಆರಂಭವಾಗಲಿದ್ದು, 27ರಂದು ಮದುವೆ ಹಾಗೂ 28ರಂದು ಆರತಕ್ಷತೆ ನಡೆಯಲಿದೆ. ಹಲವು ಗಣ್ಯರು ಮದುವೆಗೆ ಬರುವುದರಿಂದ ಸಾರ್ವಜನಿಕರ ಪ್ರವೇಶವನ್ನು 24ರಿಂದ 6 ದಿನಗಳ ಕಾಲ ನಿಷೇಧಿಸಬೇಕು ಎಂದು ರಾಜವಂಶಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಅರಮನೆ ಪ್ರವೇಶ ನಿಷೇಧಿಸಿ ಸರ್ಕಾರ ಆದೇಶಿಸಿದೆ. ಆರು ದಿನ ಸಾರ್ವಜನಿಕ ಪ್ರವೇಶ ನಿಷೇಧಿಸುವಂತೆ ರಾಜಮನೆತನದಿಂದ ಪತ್ರ ಬಂದಿತ್ತು. ಕೇಳಿದಷ್ಟು ದಿನ ಸರ್ಕಾರ ಪ್ರವೇಶ ನಿಷೇಧಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ತಿಳಿಸಿದ್ದಾರೆ.
ಅರಮನೆ ಪಾವಿತ್ರ್ಯಕ್ಕೆ ಧಕ್ಕೆ: ಅಂಬಾವಿಲಾಸ ಅರಮನೆಯ ನಿಷೇಧಿತ ಪ್ರದೇಶದಲ್ಲಿ ವಿಡಿಯೊ ಚಿತ್ರೀಕರಣ ಮಾಡಿರುವುದರಿಂದ ಅರಮನೆಯ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬೇಸರ ವ್ಯಕ್ತಪಡಿಸಿದರು.