ಚೆನ್ನೈ(ಪಿಟಿಐ): ದೋಣಿ ಮೂಲಕ ಆಸ್ಟ್ರೇಲಿಯಾಕ್ಕೆ ಅಕ್ರಮವಾಗಿ ಪ್ರಯಾಣಿಸುತ್ತಿದ್ದ ಶ್ರೀಲಂಕಾದ 26 ತಮಿಳರನ್ನು ಅಂಡಮಾನ್ ಬಳಿ, ಭಾರತೀಯ ಸಾಗರ ಭದ್ರತಾ ಪಡೆಯವರು ಬಂಧಿಸಿ ಅವರನ್ನು ಗುರುವಾರ ಪುನಃ ಶ್ರೀಲಂಕಾಗೆ ಕಳುಹಿಸಿದ್ದಾರೆ.
ಅಕ್ರಮವಾಗಿ ಪ್ರಯಾಣ ಬೆಳೆಸಿದ್ದ 26 ಜನರನ್ನು ಅಂಡಮಾನ್ ಪೊಲೀಸರು ಇಲ್ಲಿಗೆ ಕರೆತಂದು ಸ್ಪೈಸ್ ಜೆಟ್ ವಿಮಾನದ ಮೂಲಕ ಶ್ರೀಲಂಕಾಗೆ ಮರಳಿ ಕಳುಹಿಸಿದ್ದಾರೆ ಎಂದು ಚೆನ್ನೈನ ವಿಮಾ ನಿಲ್ದಾಣದ ಮೂಲಗಳು ತಿಳಿಸಿವೆ.
ಕಡಲು ಭದ್ರತಾ ಸಿಬ್ಬಂದಿ ಎರಡು ದಿನಗಳ ಹಿಂದೆ ಗಸ್ತಿನಲ್ಲಿದ್ದಾಗ 26 ಜನರು ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ನಂತರ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಕೆಲಸ ಹುಡುಕಾಟಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ, ಅವರನ್ನೆಲ್ಲ ಆಸ್ಟ್ರೇಲಿಯಾಕ್ಕೆ ಬಿಡಲು ದೋಣಿ ನಿರ್ವಾಹಕನಿಗೆ ಲಕ್ಷಾಂತರ ಹಣ ಕೊಟ್ಟಿರುವುದಾಗಿ ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ 2009ರಲ್ಲಿ ನಡೆದ ನಾಗರಿಕ ಯುದ್ಧದ ನಂತರ ಲಂಕಾ ತಮಿಳರು ಕೆಲಸ ಹುಡುಕಲು ಆಸ್ಟ್ರೇಲಿಯಾಗೆ ಅಕ್ರಮವಾಗಿ ವಲಸೆ ಹೋಗುತ್ತಿದ್ದಾರೆ.