ಬೆಂಗಳೂರು: ‘ನಿರಂತರ ಟ್ರಸ್ಟ್ ವತಿಯಿಂದ ಗ್ರಾಮೀಣ ಸೊಗಡನ್ನು ಪಸರಿಸಲು ಏ.27ರಂದು ಆರನೇ ವರ್ಷದ ‘ಭೂಮಿ ಹಬ್ಬ’ವನ್ನು ನಗರದ ಸುರಧೇನುಪುರದಲ್ಲಿ ಆಚರಿಸಲಾಗುವುದು’ ಎಂದು ಟ್ರಸ್ಟ್ನ ಅಧ್ಯಕ್ಷ ಮಂಜುನಾಥ ಅದ್ದೆ ಅವರು ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ ಏ. 27ರ ಬೆಳಿಗ್ಗೆ 10ಗಂಟೆಗೆ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಪಂದ್ಯವನ್ನು ಏರ್ಪಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ’ ಎಂದರು.
ಸಂಜೆ 5ಗಂಟೆಗೆ ಅದ್ದೆ ಗ್ರಾಮದಿಂದ ವಿವಿಧ ಗ್ರಾಮದೇವತೆಗಳ ಮೆರವಣಿಗೆ ನಡೆಯಲಿದ್ದು, ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಅವರು ನುಡಿದರು. ‘ಕಾರ್ಯಕ್ರಮದಲ್ಲಿ ಕವಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್, ನಟಿ ರಿಷಿಕಾಸಿಂಗ್ ಭಾಗವಹಿಸುವವರು’ ಎಂದರು.
ಪ್ರತಿಕಾಗೋಷ್ಠಿಯಲ್ಲಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಕಡತನಮಲೆ ಸತೀಶ್, ಕಾರ್ಯದರ್ಶಿ ಪಿ.ರಾಜಣ್ಣ ಸುರಧೇನುಪುರ ಮೊದಲಾದವರು ಉಪಸ್ಥಿತರಿದ್ದರು.