ಕಾಸರಗೋಡು: ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ಕಾಸರಗೋಡು ತಾಲ್ಲೂಕು ಸಮಿತಿ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇದೇ 27 ಮತ್ತು 28ರಂದು ಮುಜುಂಗಾವಿನಲ್ಲಿ ನಡೆಯಲಿರುವ ಕಾಸರಗೋಡು ಜಿಲ್ಲಾ ಮಟ್ಟದ ಬೃಹತ್ ಕೃಷಿ ಉತ್ಸವದ ಯಶಸ್ವಿಗಾಗಿ ವ್ಯವಸ್ಥಾಪನ ಸಮಿತಿ ಹಾಗೂ ಉಪ ಸಮಿತಿಗಳ ಪ್ರಮುಖರ ಸಭೆ ಕುಂಬಳೆ ಯೋಜನಾ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು.
ಕೃಷಿ ಉತ್ಸವದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಯೋಗೀಶ ಕಡಮಣ್ಣಾಯ ಅಧ್ಯಕ್ಷತೆ ವಹಿಸಿದ್ದರು. ಸುಮಾರು ಏಳುವರೆ ಲಕ್ಷ ರೂಪಾಯಿಯಷ್ಟು ವೆಚ್ಚವಾಗಲಿರುವ ಕೃಷಿ ಉತ್ಸವಕ್ಕೆ ಧರ್ಮಸ್ಥಳದಿಂದ ಆರ್ಥಿಕ ಸಹಾಯವಲ್ಲದೆ, ಊರವರಿಂದ ಹೊರೆ ಕಾಣಿಕೆ ಸಹಿತ ವಿವಿಧ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ತೀರ್ಮಾನಿಸಲಾಯಿತು.
ಉತ್ಸವದ ಉದ್ಘಾಟನೆ ಹಾಗೂ ಸಮಾರೋಪದಲ್ಲಿ ಸಚಿವರು, ಜನಪ್ರತಿ ನಿಧಿಗಳು, ಸಾಮಾಜಿಕ ವಲಯದ ಗಣ್ಯರು, ಕೃಷಿ ಮುಖಂಡರನ್ನು ಆಹ್ವಾನಿಸಲು ನಿರ್ಧರಿಸಲಾಯಿತು.
27ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಅವರು ಅಂದು ಪ್ರಗತಿಬಂಧು ಒಕ್ಕೂಟ ಉದ್ಘಾಟನೆ ಹಾಗೂ ಯೋಜನೆ ಪಾಲುದಾರ ಸದಸ್ಯರೊಂದಿಗೆ ಸಂವಾದ ನಡೆಸುವರು.
ಸಮಗ್ರ ಕೃಷಿ ಪದ್ಧತಿ, ಶ್ರೀ ಪದ್ಧತಿ, ಗುಡಿ ಕೈಗಾರಿಕೆ, ಸಾವಯವ ಕೃಷಿ, ಮಣ್ಣು ಪರೀಕ್ಷೆ, ಆಡು, ಮೊಲ ಸಾಕಣೆ, ಮಳೆಕೊಯ್ಲು ಇತ್ಯಾದಿ ಪ್ರಾತ್ಯಕ್ಷಿಕೆಯಲ್ಲದೆ ಕೃಷಿ ಪರಿಕರ, ಕೃಷಿ ಯಂತ್ರೋಪಕರಣ, ಕರಕುಶಲ ವಸ್ತು, ಕೃಷಿ ಉತ್ಪನ್ನ, ಜಾನುವಾರು, ಶ್ವಾನ, ಕುಕ್ಕುಟ ಪ್ರದರ್ಶನ ಏರ್ಪಡಿಸಲು ತೀರ್ಮಾನಿಸಲಾಯಿತು. ನರ್ಸರಿ ಮಳಿಗೆ, ಪಶು ಸಂಗೋಪನ ತಂತ್ರಜ್ಞಾನ, ವಿವಿಧ ವಸ್ತುಪ್ರದರ್ಶನ ಮಳಿಗೆ ಏರ್ಪಡಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಕೃಷಿ ಉತ್ಸವದ ಕರೆಯೋಲೆ ಬಿಡುಗಡೆಗೊಳಿಸಲಾಯಿತು.
ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಪ್ರಗತಿ ನಿಧಿ ನಿರ್ದೇಶಕ ಸಂಪತ್ ಕುಮಾರ್, ಯೋಜನಾಧಿಕಾರಿ ಸಂಧ್ಯಾ ವಿ.ಶೆಟ್ಟಿ , ಜಿಲ್ಲಾ ಜನಜಾಗತಿ ವೇದಿಕೆ ಅಧ್ಯಕ್ಷ ಗೋಪಾಲಶೆಟ್ಟಿ ಅರಿಬೈಲು, ಯೋಜನೆ ಮಂಗಳೂರು ತಾಲೂಕು ಕೃಷಿ ಅಧಿಕಾರಿ ಜನಾರ್ದನ, ಉಪಸಮಿತಿಗಳ ಅಧ್ಯಕ್ಷ ರಾದ ಮಂಜುನಾಥ ಆಳ್ವ ಮಡ್ವ (ಆರ್ಥಿಕ), ಬಿ.ಪಿ. ಶೇಣಿ (ಆರ್ಥಿಕ), ಶಿವರಾಮ ಭಟ್ ಹಳೆಮನೆ (ಆಹಾರ ಮತ್ತು ಹೊರೆ ಕಾಣಿಕೆ), ಪ್ರೊ.ಶ್ರೀನಾಥ್ (ವಿಚಾರಗೋಷ್ಠಿ), ಮಧುಸೂದನ್ (ಚಪ್ಪರ, ವಸ್ತು ಪ್ರದರ್ಶನ), ರಾಧಾಕಷ್ಣ ಆಳ್ವ ಮಡ್ವ (ಜಾನುವಾರು ಪ್ರದರ್ಶನ) ಅಲ್ಲದೆ ಸಮಿತಿ ಖಜಾಂಚಿ ಕರುಣಾಕರ ಮಾಸ್ತರ್ ಅನಂತಪುರ, ಸರೋಜ ಆರ್. ಬಳ್ಳಾಲ್, ಮುರಳೀಧರ ಯಾದವ್, ರಮೇಶ್ ಭಟ್ ಕುಂಬಳೆ, ಸಂಕಪ್ಪ ಭಂಡಾರಿ ಮುಂತಾದವರು ಹಾಗೂ ವಿವಿಧ ಯೋಜನೆ ಮೇಲ್ವಿಚಾರಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಪೆರ್ಲ ವಲಯ ಮೇಲ್ವಿಚಾರಕ ರಮೇಶ್ ಸ್ವಾಗತಿಸಿದರು. ಕಾಸರಗೋಡು ವಲಯ ಮೇಲ್ವಿಚಾರಕ ರವಿಶಂಕರ್ ವಂದಿಸಿದರು. ಕೃಷಿ ಅಧಿಕಾರಿ ಚಿದಾನಂದ ಹಾಗೂ ಕುಂಬಳೆ ವಲಯ ಮೇಲ್ವಿಚಾರಕ ಸತೀಶ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.