ಬೆಂಗಳೂರು: ‘ರಾಜ್ಯ ಮತ್ತು ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನಗರದಲ್ಲಿ ಮೇ 27 ರಂದು ರೈತರ ಸಮಾವೇಶ ನಡೆಯಲಿದೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
‘ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶವನ್ನು ಮಹಾತ್ಮಾ ಗಾಂಧಿ ಅವರ ಮೊಮ್ಮಗಳು ತಾರಾ ಗಾಂಧಿ ಅವರು ಉದ್ಘಾಟಿಸಲಿದ್ದಾರೆ. ‘ಕಿಸಾನ್ ಏಕ್ತಾ’ ಸಂಘಟನೆ ಪ್ರಧಾನ ಸಂಚಾಲಕ ದೇವೇಂದ್ರ ಶರ್ಮಾ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.
‘ರೈತ ಸಾಲ ಮನ್ನಾ, ಬರಗಾಲ ತಡೆಗಟ್ಟುವ ಯೋಜನೆಗಳ ಜಾರಿ, ಕನಿಷ್ಠ ಬೆಂಬಲ ಬೆಲೆ, ಕಂದಾಯ ಮತ್ತು ವಿದ್ಯುತ್ ಬಿಲ್ ಬಾಕಿ ರದ್ದು, ಉದ್ಯೋಗ ಖಾತರಿ ಯೋಜನೆ, ಸಮಗ್ರ ನೀರಾವರಿ ಯೋಜನೆಗಳು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಮಾವೇಶದಲ್ಲಿ ಹಕ್ಕೊತ್ತಾಯ ಮಾಡಲಾಗುತ್ತದೆ’ ಎಂದರು.