ಬೆಂಗಳೂರು: ಮೂರನೇ ಮದುವೆ ಮಾಡಿಕೊಳ್ಳಲು ಮುಂದಾಗಿದ್ದ ಕ್ಯಾಬ್ ಚಾಲಕ ವಜ್ರೇಶ್್ (28) ಎಂಬಾತನನ್ನು ಆತನ ಇಬ್ಬರು ಪತ್ನಿಯರೇ ಥಳಿಸಿ, ಜ್ಞಾನಭಾರತಿ ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.
ಕಗ್ಗಲೀಪುರದ ವಜ್ರೇಶ್, ಸ್ವಂತ ಕಾರು ಇಟ್ಟುಕೊಂಡು ಬಾಡಿಗೆ ಓಡಿಸು ತ್ತಿದ್ದ. 2014ರಲ್ಲಿ ದೊಡ್ಡಬಳ್ಳಾಪುರದ 20 ವರ್ಷದ ಯುವತಿಯನ್ನು ವಿವಾಹ ವಾದ ಆತ, ರಾಜರಾಜೇಶ್ವರಿನಗರದಲ್ಲಿ ನೆಲೆಸಿದ್ದ. ಅವರಿಗೆ 4 ತಿಂಗಳ ಮಗು ಇದೆ.
ಮೊದಲ ಮದುವೆ ವಿಷಯ ಮುಚ್ಚಿಟ್ಟ ವಜ್ರೇಶ್, ಹೊಸಕೋಟೆಯ 20 ವರ್ಷದ ಯುವತಿಯನ್ನು ಎರಡನೇ ಮದುವೆಯಾದ. ಆಕೆಗೆ ಜ್ಞಾನಭಾರತಿ ಸಮೀಪದ ನಾಗರಬಾವಿಯಲ್ಲಿ ಬಾಡಿಗೆ ಮನೆ ಮಾಡಿಕೊಟ್ಟಿದ್ದ. ಈಗ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ವಜ್ರೇಶ್ಗೆ ಕಗ್ಗಲೀಪುರದ 19 ವರ್ಷದ ಯುವತಿಯ ಪರಿಚಯವಾ ಗಿತ್ತು. ಮದುವೆಯಾಗುವುದಾಗಿ ವಂಚಿಸಿದ ಸಂಬಂಧ ಆಕೆ, ಈತನ ವಿರುದ್ಧ ತಲಘಟ್ಟಪುರ ಠಾಣೆಗೆ ದೂರು ಕೊಟ್ಟಿದ್ದಳು. ಆ ಪ್ರಕರಣದಲ್ಲಿ ವಜ್ರೇಶ್, ಜೈಲಿಗೂ ಹೋಗಿ ಬಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.
ಎರಡು ಸಂಸಾರಗಳ ನಿರ್ವಹಣೆ ಕಷ್ಟವಾಗಿದ್ದರಿಂದ, ಇತ್ತೀಚೆಗೆ ಇಬ್ಬರು ಪತ್ನಿಯರನ್ನೂ ಒಂದೇ ಮನೆಯಲ್ಲಿರಿಸಿದ್ದ. ಅವರಿಬ್ಬರೂ ನಿತ್ಯ ಜಗಳ ಮಾಡುತ್ತಿದ್ದರು. ಕಗ್ಗಲಿಪುರದ ಯುವತಿ ಸಹ ಮನೆಗೆ ಬಂದು, ಮದುವೆಯಾಗುವಂತೆ ಗಲಾಟೆ ಮಾಡುತ್ತಿದ್ದಳು. ಅದಕ್ಕೆ ಆತ ಒಪ್ಪಿಗೆ ಸೂಚಿಸಿದ್ದ. ಇದರಿಂದ ಸಿಟ್ಟಿಗೆದ್ದ ಪತ್ನಿಯರು, ನಾಗರಬಾವಿ ಮನೆಯಲ್ಲಿದ್ದ ವಜ್ರೇಶ್ನನ್ನು ಥಳಿಸಿ ಆತನ ಕಾರನ್ನು ಜಖಂಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.
‘ಮೊದಲ ಪತ್ನಿಗೆ ತನ್ನ ಹೆಸರು ವಜ್ರೇಶ್ ಎಂದು ಹೇಳಿಕೊಂಡಿದ್ದ ಆರೋಪಿ, ಎರಡನೇ ಹೆಂಡತಿ ಬಳಿ ಧನಂಜಯ್ ಎಂದು ಹೇಳಿಕೊಂಡಿದ್ದ. ಮೂರನೇ ಮದುವೆ ವಿಷಯ ಗೊತ್ತಾಗಿದ್ದರಿಂದ ಪತ್ನಿಯ ಸಂಬಂಧಿಕರು ಮನೆಗೆ ಬಂದಿದ್ದರು. ಆಗ ಆರೋಪಿ ವಜ್ರೇಶ್, ನಾಯಿ ಬಿಟ್ಟು ಹೆದರಿಸುತ್ತಿದ್ದ’ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.