ಬೆಂಗಳೂರು: ರಾಜ್ಯದಲ್ಲಿ 3,000 ಅವೈಜ್ಞಾನಿಕ ರಸ್ತೆ ಉಬ್ಬುಗಳಿದ್ದು (ಹಂಪ್ಸ್), 3 ತಿಂಗಳಲ್ಲಿ ಈ ರಸ್ತೆ ಉಬ್ಬುಗಳನ್ನು ವೈಜ್ಞಾನಿಕ ರಸ್ತೆ ಉಬ್ಬುಗಳನ್ನಾಗಿ ಮಾರ್ಪಡಿಸ ಲಾಗುವುದು ಎಂದು ಲೋಕೋಪಯೋಗಿ ಸಚಿವ ಡಾ.ಎಚ್್.ಸಿ. ಮಹದೇವಪ್ಪ ತಿಳಿಸಿದರು.
ವಿಧಾನ ಪರಿಷತ್ನಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ನ ವೀರಕುಮಾರ್ ಅಪ್ಪಾಸೊ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿ, ‘ರಾಜ್ಯದಲ್ಲಿ 9,000ಕ್ಕೂ ಹೆಚ್ಚು ರಸ್ತೆ ಉಬ್ಬುಗಳಿವೆ. ಅವೈಜ್ಞಾನಿಕ ರಸ್ತೆ ಉಬ್ಬುಗಳಿಂದ ವಾಹನ ಸವಾರರಿಗೆ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಇವುಗಳನ್ನು ಸರಿಪಡಿಸಿ ವೈಜ್ಞಾನಿಕ ರಸ್ತೆ ಉಬ್ಬುಗಳನ್ನು ಅಳವಡಿಸಲಾಗುವುದು’ ಎಂದರು.
ಮೈಸೂರು–ಬೆಂಗಳೂರು ಹೆದ್ದಾರಿಯಲ್ಲಿ 137 ರಸ್ತೆ ಉಬ್ಬುಗಳಿವೆ. ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶದಿಂದ ಶಾಲೆಗಳು, ದೇವಸ್ಥಾನಗಳ ಪಕ್ಕದಲ್ಲಿ ಜನರೇ ರಸ್ತೆ ಉಬ್ಬು ನಿರ್ಮಿಸಿದ್ದಾರೆ. ಕಳೆದ ವಾರ ಮೈಸೂರು ಹಾಗೂ ಬೆಂಗಳೂರಿನ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಅವೈಜ್ಞಾನಿಕ ಉಬ್ಬು ತೆಗೆಯಲು ಸೂಚನೆ ನೀಡಲಾಗಿದೆ ಎಂದರು.
ರಾಜ್ಯದಲ್ಲಿ ತರಹೇವಾರಿ ರಸ್ತೆ ಉಬ್ಬುಗಳು ಇವೆ. ಇವುಗಳಿಂದ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಸಂಬಂಧ ತುರ್ತು ಕ್ರಮ ಕೈಗೊಳ್ಳಿ ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ವಿನಂತಿ ಮಾಡಿದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉಬ್ಬುಇರಬಾರದು ಎಂದು ಭಾರತೀಯ ರೋಡ್ ಕಾಂಗ್ರೆಸ್ ಮಾರ್ಗಸೂಚಿ ಹೊರಡಿಸಿದೆ. ಆದರೆ, ರಾಜ್ಯದ ಹೆದ್ದಾರಿಳಲ್ಲಿ ಉಬ್ಬುಗಳಿವೆ ಎಂದು ಬಿಜೆಪಿಯ ಗಣೇಶ್ ಕಾರ್ಣಿಕ್ ದೂರಿದರು.