ನವದೆಹಲಿ (ಪಿಟಿಐ): ‘ಇರಾಕ್ನಲ್ಲಿ ಐಎಸ್ಐಎಸ್ ಉಗ್ರರು ಅಪಹರಿಸಿರುವ 39 ಮಂದಿ ಭಾರತೀಯರು ಇನ್ನೂ ಜೀವಂತವಾಗಿದ್ದಾರೆ’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭರವಸೆ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಮಾತನಾಡಿದ ಸುಷ್ಮಾ, ‘ಐಎಸ್ಐಎಸ್ ಉಗ್ರರ ಒತ್ತೆಯಲ್ಲಿದ್ದ ಭಾರತೀಯರನ್ನು ಉಗ್ರರು ಕೊಂದಿದ್ದಾರೆ ಎಂಬ ಸುದ್ದಿಯಲ್ಲಿ ವೈರುಧ್ಯವಿದೆ. ಆರು ಮೂಲಗಳಿಂದ ತರಿಸಿಕೊಂಡಿರುವ ಅಧಿಕೃತ ಮಾಹಿತಿಯ ಪ್ರಕಾರ ಒತ್ತೆಯಾಳುಗಳನ್ನು ಕೊಲ್ಲಲಾಗಿಲ್ಲ’ ಎಂದು ತಿಳಿಸಿದ್ದಾರೆ.
‘ಮಾಧ್ಯಮಗಳಲ್ಲಿ ವರದಿಯಾಗಿರುವ ಸುದ್ದಿಯಲ್ಲಿ ಹುರುಳಿಲ್ಲ. ಒತ್ತೆಯಾಳುಗಳನ್ನು ಉಗ್ರರು ಕೊಂದಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಬಾಂಗ್ಲಾ ಪ್ರಜೆಯೊಬ್ಬರ ಮಾತನ್ನು ಉಲ್ಲೇಖಿಸಿರುವ ಆ ವರದಿಗೆ ನಿಖರವಾದ ಆಧಾರವಿಲ್ಲ’ ಎಂದು ಸುಷ್ಮಾ ಹೇಳಿದ್ದಾರೆ.
‘ಒತ್ತೆಯಾಳುಗಳ ಹತ್ಯೆಯ ವರದಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಉಗ್ರರ ಕಪಿಮುಷ್ಠಿಯಲ್ಲಿರುವ ಭಾರತೀಯ ಒತ್ತೆಯಾಳುಗಳು ಸುರಕ್ಷಿತವಾಗಿದ್ದಾರೆಂಬುದೇ ನಮ್ಮ ನಂಬಿಕೆ ಇದೆ. ಅವರ ಸುರಕ್ಷತೆ ಹಾಗೂ ಬಿಡುಗಡೆಗಾಗಿ ಪ್ರಯತ್ನ ನಡೆದಿದೆ’ ಎಂದು ಅವರು ತಿಳಿಸಿದ್ದಾರೆ.