ತಿರುವನಂತಪುರ: ರಾಷ್ಟ್ರದ ಕೃಷಿ ಚಟುವಟಿಕೆಗಳ ಜೀವಾಧಾರವಾದ ನೈರುತ್ಯ ಮುಂಗಾರು ಕೇರಳ ರಾಜ್ಯವನ್ನು ನಾಲ್ಕು ದಿನಗಳಷ್ಟು ತಡವಾಗಿ, ಅಂದರೆ ಜೂನ್ 5ರಂದು ಪ್ರವೇಶಿಸುವ ನಿರೀಕ್ಷೆ ಇದೆ. ಇದನ್ನು ಅಂದಾಜಿಸಿರುವ ಹವಾಮಾನ ಇಲಾಖೆಯು, ಈ ಲೆಕ್ಕಾಚಾರದಲ್ಲಿ ನಾಲ್ಕು ದಿನಗಳಷ್ಟು ಹೆಚ್ಚು ಅಥವಾ ಕಡಿಮೆ ಆಗಬಹುದು ಎಂದಿದೆ.
ಮುಂಗಾರು ಕೇರಳಕ್ಕೆ ಸಾಮಾನ್ಯವಾಗಿ ಜೂನ್ 1ರಂದು ಕಾಲಿಡುತ್ತದೆ. ಈ ಬಾರಿ ಸ್ವಲ್ಪ ತಡವಾಗಬಹುದು ಎಂಬುದು ತಜ್ಞರ ಊಹೆ.
ಮುಂಗಾರು ಮಾರುತಗಳು ಮುಂದಿನ ಕೆಲವೇ ದಿನಗಳಲ್ಲಿ ಮಾಲ್ಡೀವ್್ಸ, ಶ್ರೀಲಂಕಾ ಹಾಗೂ ಬಂಗಾಳ ಕೊಲ್ಲಿಯ ನೈರುತ್ಯ ಭಾಗಗಳೆಡೆಗೆ ಚಲಿಸಲು ಪೂರಕವಾದ ಸನ್ನಿವೇಶ ಕಂಡುಬರುತ್ತಿದೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಊಹಿಸಿರುವಂತೆ ಮುಂಗಾರು ಮಳೆ ಜೂನ್ 5ರಂದು ರಾಜ್ಯಕ್ಕೆ ಕಾಲಿಡಲಿದೆ ಎಂದು ಇಲ್ಲಿನ ಹವಾಮಾನ ಕೇಂದ್ರದ ನಿರ್ದೇಶಕ ಕೆ.ಸಂತೋಷ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಮಧ್ಯೆ ಕೇರಳದ ಕೋಯಿಕ್ಕೋಡ್, ಕಾಂಜಿರಪಳ್ಳಿ, ಕಣ್ಣೂರು, ವಯನಾಡ್, ಅಲೆಪ್ಪಿ ಜಿಲ್ಲೆಗಳ ಹಲವೆಡೆ ಭಾನುವಾರ ಸಾಧಾರಣ ಮಳೆ ಸುರಿಯಿತು.