ಮುಂಬೈ (ಪಿಟಿಐ): ಕೇಂದ್ರ ಸರ್ಕಾರದ ‘ಜನ ಧನ’ ಯೋಜನೆಯಡಿ ಸೆ.25ರವರೆಗೆ ಒಟ್ಟಾರೆ 5 ಕೋಟಿ ಖಾತೆಗಳನ್ನು ತೆರೆಯಲಾಗಿದ್ದು, 3,500 ಕೋಟಿ ಠೇವಣಿ ಸಂಗ್ರಹಿಸಲಾಗಿದೆ ಎಂದು ಕೇಂದ್ರ ಹಣಕಾಸು ಸೇವೆಗಳ ಕಾರ್ಯದರ್ಶಿ ಜಿ.ಎಸ್. ಸಂಧು ಹೇಳಿದರು.
ಇಲ್ಲಿ ಸೋಮವಾರ ನಡೆದ ಭಾರತ–ಅಮೆರಿಕ ವಾಣಿಜ್ಯೋದ್ಯಮಿಗಳ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಆ.28ರಿಂದ ಸೆ.25ರವರೆಗೆ 5 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಒಟ್ಟಾರೆ 7.5 ಕೋಟಿ ಖಾತೆಗಳನ್ನು ತೆರೆಯುವುದು ಯೋಜನೆಯ ಉದ್ದೇಶಿತ ಗುರಿ. ಅದರಲ್ಲಿ ಶೇ70ರಷ್ಟನ್ನು ಈಗಾಗಲೇ ಸಾಧಿಸಿದ್ದೇವೆ. ಈ ಮುನ್ಸೂಚನೆ ಅರಿತುಕೊಂಡೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ರಘುರಾಂ ರಾಜನ್ ಅವರು ಖಾತೆ ತೆರೆಯಲು ಬ್ಯಾಂಕುಗಳು ತೋರುತ್ತಿರುವ ಆತುರದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಎಂದು ಸುದ್ದಿಗಾರರಿಗೆ ತಿಳಿಸಿದರು.
ಯೋಜನೆಯ ಉದ್ದೇಶಿತ ಗುರಿ ಮೀರದಂತೆ ಎಚ್ಚರಿಕೆ ವಹಿಸುವ ಕುರಿತಾಗಿ ಆರ್ಬಿಐ ಜತೆ ಚರ್ಚೆ ನಡೆಸಿದ್ದೇವೆ. ಈ ಸಂಬಂಧ ರಾಜನ್ ಅವರು ಬ್ಯಾಂಕುಗಳ ಜತೆಯೂ ಮಾತುಕತೆ ನಡೆಸಿದ್ದಾರೆ ಎಂದು ಹೇಳಿದರು. ಖಾತೆ ನಕಲು ಆಗುವುದನ್ನು ತಡೆಯಲು ಖಾತೆದಾರರ ಬಯೋಮೆಟ್ರಿಕ್ ಮಾಹಿತಿ ಪಡೆಯುವ ವ್ಯವಸ್ಥೆ ಮಾಡಲಾಗಿದೆ.