ಬೆಂಗಳೂರು: ನಗರದ ಯಲಹಂಕ ಹೋಬಳಿಯ ರಾಮಗೊಂಡಹಳ್ಳಿಯಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹೊರಡಿಸಿದ್ದ 5.5 ಎಕರೆಯ ಮೇಲಿನ ಅಧಿಸೂಚನೆಯನ್ನು ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.
ಭೂಸ್ವಾಧೀನ ಅಧಿಸೂಚನೆ ಪ್ರಶ್ನಿಸಿ ಎಸ್.ರಾಮರೆಡ್ಡಿ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ನೀಡಿದೆ.
‘ಬಡಾವಣೆ ನಿರ್ಮಾಣಕ್ಕೆ ೨೦೦೮ರಲ್ಲೇ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಈ ತನಕ ಬಡಾವಣೆ ನಿರ್ಮಾಣದ ಯೋಜನೆಯನ್ನು ತಯಾರಿಸಿಲ್ಲ. ಈಗಾಗಲೇ ಪ್ರಾಥಮಿಕ ಅಧಿಸೂಚನೆ ಅವಧಿ ಅಂತ್ಯಗೊಂಡಿದೆ’ ಎಂಬ ಕಾರಣ ನೀಡಿ ನ್ಯಾಯಪೀಠವು ಅಧಿಸೂಚನೆಯನ್ನು ರದ್ದುಗೊಳಿಸಿದೆ.
ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ೨೦೦೮ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ವೇಳೆ ಸುಮಾರು ೩ ಸಾವಿರ ಎಕರೆ ಜಮೀನಿನಲ್ಲಿ ಅಭಿವೃದ್ಧಿಗೊಳಿಸಲು ಯೋಜಿಸಲಾಗಿದ್ದ ಈ ಬಡಾವಣೆಗೆ ರಾಮಗೊಂಡಹಳ್ಳಿಯ ಸರ್ವೆ ನಂ. ೮ರಲ್ಲಿನ ಅರ್ಜಿದಾರರ ೫.೫ ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ ವಶಪಡಿಸಿಕೊಂಡ ಭೂಮಿಯನ್ನು ಬಡಾವಣೆ ಯೋಜನೆಗೆ ಬಳಸುವ ದಿಸೆಯಲ್ಲಿ ಯಾವುದೇ ಪ್ರಗತಿ ಆಗಿರಲಿಲ್ಲ. ಇದನ್ನು ಅರ್ಜಿದಾರರು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು.