ರಾಮನಗರ: ತಾಲ್ಲೂಕಿನ ಚಿಕೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಚಿರತೆಯ ಮರಿಯೊಂದು ವಾಹನಕ್ಕೆ ಸಿಲುಕಿ ಮೃತಪಟ್ಟಿದೆ. ಬೆಳಿಗ್ಗೆ 6.30ರ ಸುಮಾರಿಗೆ ಚಿರತೆಯು ಗ್ರಾಮದ ಅರಳಿಮರದ ಬಳಿ ರಸ್ತೆ ದಾಟುತ್ತಿದ್ದಾಗ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿತು ಎಂದು ಸ್ಥಳೀಯರು ತಿಳಿಸಿದರು. ಚಿಕೇನಹಳ್ಳಿ ಗ್ರಾಮವು ನಗರದಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿದೆ.
ಗ್ರಾಮಕ್ಕೆ ಹೊಂದಿ ಕೊಂಡಂತೆ ಇರುವ ಗುಡ್ಡಗಳಲ್ಲಿ ಚಿರತೆಗಳು ವಾಸವಿದ್ದು, ಈ ಭಾಗದಲ್ಲಿ ಅವುಗಳ ಓಡಾಟ ಸಾಮಾನ್ಯವಾಗಿದೆ. ಗ್ರಾಮದ ಸಮೀಪದಲ್ಲೇ ಹೆಣ್ಣು ಚಿರತೆಯೊಂದು ಮೂರು ಮರಿಗಳೊಂದಿಗೆ ಓಡಾಡಿಕೊಂಡಿದೆ. ಇದು ಅದರದ್ದೇ ಮರಿಯಾಗಿರಬಹುದು ಎಂದು ಸ್ಥಳೀಯರಾದ ಮಹಾದೇವ ಎಂಬುವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಆರರಿಂದ ಎಂಟು ತಿಂಗಳ ವಯಸ್ಸಿನ ಹೆಣ್ಣು ಚಿರತೆ ಇದಾಗಿದೆ. ಅಪಘಾತದಿಂದ ಮಾರಣಾಂತಿಕ ಗಾಯವಾಗಿ, ಶ್ವಾಸ ಕೋಶದ ಬಳಿ ರಕ್ತ ಹೆಪ್ಪುಗಟ್ಟಿ ಮೃತಪಟ್ಟಿದೆ’ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಾದ ನಜೀರ್ ಹಾಗೂ ಕೃತಿಕಾ ‘ಪ್ರಜಾವಾಣಿ’ಗೆ ತಿಳಿಸಿದರು. ಮರಣೋತ್ತರ ಪರೀಕ್ಷೆ ಬಳಿಕ ಚಿರತೆ ದೇಹವನ್ನು ಅರಣ್ಯ ಪ್ರದೇಶದಲ್ಲೇ ಸುಡಲಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.