ನವದೆಹಲಿ (ಪಿಟಿಐ): ಸ್ವಿಟ್ಜರ್ಲೆಂಡ್ನ ಜಿನೀವಾ ಎಚ್ಎಸ್ಬಿಸಿ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ೬೨೭ ಭಾರತೀಯರ ಹೆಸರುಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂಕೋರ್ಟ್ ಮುಂದಿರಿಸಿತು. ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಪಟ್ಟಿಯನ್ನು ತೆರೆಯದ ಸುಪ್ರೀಂಕೋರ್ಟ್, ಈ ಖಾತೆದಾರರ ಮೇಲೆ ಕಾನೂನು ಕ್ರಮ ಕೈ ಗೊಳ್ಳಲು ರಚಿಸಿರುವ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಸೂಚಿಸಿತು.
ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರ ನೇತೃತ್ವದ ನ್ಯಾಯಪೀಠವು ಮುಚ್ಚಿದ ಲಕೋಟೆಯನ್ನು ತೆರೆಯಲಿಲ್ಲ. ಎಸ್ಐಟಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮಾತ್ರ ಈ ಲಕೋಟೆ ತೆರೆಯುತ್ತಾರೆ ಎಂದು ಸ್ಪಷ್ಟಪಡಿಸಿದ ಪೀಠ, ತನಿಖೆ ಕುರಿತ ವಸ್ತುಸ್ಥಿತಿ ವರದಿನವೆಂಬರ್ ಕೊನೆಯ ವೇಳೆಗೆ ಸಲ್ಲಿಸಬೇಕೆಂದು ಎಸ್ಐಟಿಗೆ ಗಡುವು ನೀಡಿತು. ಪಟ್ಟಿಯನ್ನು ಕೋರ್ಟ್ಗೆ ಸಲ್ಲಿಸಿದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ಈ ಪಟ್ಟಿಯಲ್ಲಿ ಇರುವವರೆಲ್ಲರೂ ೨೦೦೬ರಲ್ಲಿ ಖಾತೆದಾರರಾಗಿದ್ದಾರೆ. ಫ್ರಾನ್್ಸ ಸರ್ಕಾರವು ೨೦೧೧ರಲ್ಲಿ ಈ ಮಾಹಿತಿಯನ್ನು ಭಾರತ ಸರ್ಕಾರಕ್ಕೆ ಒದಗಿಸಿತ್ತು ಎಂದರು.
ಜಿನೀವಾದ ಎಚ್ಎಸ್ಬಿಸಿ ಬ್ಯಾಂಕ್ನ ಭಾರತದ ಖಾತೆದಾರರ ಈ ವಿವರವು ಮೊದಲು ಫ್ರಾನ್್ಸ ಸರ್ಕಾರಕ್ಕೆ ಲಭ್ಯವಾಗಿತ್ತು. ಅಲ್ಲಿಂದ ಈ ಮಾಹಿತಿ ನಮ್ಮ ಸರ್ಕಾರಕ್ಕೆ ಸಿಕ್ಕಿತು. ಈ ಪಟ್ಟಿಯಲ್ಲಿರುವ ಕೆಲವರು, ವಿದೇಶಿ ಬ್ಯಾಂಕ್ನಲ್ಲಿ ತಾವು ಖಾತೆ ಹೊಂದಿರುವುದನ್ನು ಒಪ್ಪಿಕೊಂಡು ಸಂಬಂಧಿಸಿದ ತೆರಿಗೆ ಕಟ್ಟಿದ್ದಾರೆ. ಫ್ರಾನ್್ಸ ಸರ್ಕಾರದೊಂದಿಗೆ ಕೇಂದ್ರ ಸರ್ಕಾರ ನಡೆಸಿದ ಮಾತುಕತೆಯ ವಿವರ, ಖಾತೆದಾರರ ಪಟ್ಟಿ ಹಾಗೂ ವಸ್ತುಸ್ಥಿತಿ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಇರಿಸಲಾಗಿದೆ ಎಂದು ರೋಹಟಗಿ ಹೇಳಿದರು.
ವಿದೇಶಿ ಬ್ಯಾಂಕುಗಳ ಖಾತೆದಾರರ ಮಾಹಿತಿಗಳನ್ನು ಹಂಚಿಕೊಳ್ಳುವ ಸಲುವಾಗಿ ಅನ್ಯದೇಶಗಳೊಡನೆ ಮಾಡಿಕೊಂಡಿರುವ ಒಪ್ಪಂದಗಳಿಗೆ ಸಂಬಂಧಿಸಿದಂತೆ ಏನೇ ಅಹವಾಲು ಇದ್ದರೂ ಅದನ್ನು ಎಸ್ಐಟಿ ಮುಂದೆ ಹೇಳಿಕೊಳ್ಳುವಂತೆ ನ್ಯಾಯಮೂರ್ತಿಗಳಾದ ರಂಜನಾ ಪ್ರಕಾಶ್ ದೇಸಾಯಿ ಮತ್ತು ಮದನ್ ಬಿ.ಲೋಕೂರ್ ಅವರನ್ನು ಒಳಗೊಂಡ ಪೀಠ ಸರ್ಕಾರಕ್ಕೆ ಸೂಚಿಸಿತು.
ಎಸ್ಐಟಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸಾಧಾರಣ ವ್ಯಕ್ತಿಗಳೇ-ನಲ್ಲ. ಕಪ್ಪುಹಣದ ತನಿಖೆಯಿಂದ ಏನೇನು ಬಿಕ್ಕಟ್ಟುಗಳು ಹುಟ್ಟುತ್ತವೆ ಎಂಬುದು ಅವರಿಗೆ ಗೊತ್ತಾಗುತ್ತದೆ. ಅದೆಲ್ಲವನ್ನೂ ಮನಸ್ಸಿನಲ್ಲಿ ಇರಿಸಿಕೊಂಡೇ ಎಸ್ಐಟಿ ತನ್ನ ಕಾರ್ಯ ಮಾಡುತ್ತದೆ ಎಂದರು. ಎಸ್ಐಟಿಗೆ ಹೆಚ್ಚುವರಿ ಮಾಹಿತಿ ಒದಗಿಸಬೇಕೆಂದು ಕೋರಿ ಆಮ್ ಆದ್ಮಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹಾಕಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿಲ್ಲ. ಇದರ ವಿಚಾರಣೆಯನ್ನು ಡಿ.೩ರಂದು ನಡೆಸುವುದಾಗಿ ತಿಳಿಸಿತು.
‘ಮಾರ್ಚ್ 31ರೊಳಗೆ ಆದಾಯ ತೆರಿಗೆ ತನಿಖೆ’
ನವದೆಹಲಿ: ಸ್ವಿಟ್ಜರ್ಲೆಂಡ್ ಜಿನೀವಾ ಎಚ್ಎಸ್ಬಿಸಿ ಬ್ಯಾಂಕ್ನಲ್ಲಿ ಖಾತೆ ಹೊಂದಿರುವವರ ಬಗ್ಗೆ ಆದಾಯ ತೆರಿಗೆ ಕಾಯ್ದೆ ಅನ್ವಯ ಬರುವ ಮಾರ್ಚ್ ೩೧ರೊಳಗೆ ತನಿಖೆ ಮುಗಿಸುವುದಾಗಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ತಿಳಿಸಿದರು.
ಈ ಪಟ್ಟಿಯಲ್ಲಿರುವ ಅರ್ಧದಷ್ಟು ಖಾತೆದಾರರು ಭಾರತೀಯರಾದರೆ, ಉಳಿದ ಅರ್ಧದಷ್ಟು ಖಾತೆದಾರರು ಅನಿವಾಸಿ ಭಾರತೀಯರಾಗಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. ವಿದೇಶಿ ಬ್ಯಾಂಕುಗಳ ಖಾತೆದಾರರಿಗೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳಲು ಅನ್ಯ ದೇಶಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳ ಕುರಿತ ಅಹವಾಲು ಗಳನ್ನು ಎಸ್ಐಟಿ ಮುಂದೆ ಹೇಳಿಕೊಳ್ಳಲು ನ್ಯಾಯಾಲಯ ಸೂಚಿಸಿದೆ ಎಂದು ಅವರು ಸಮಾಧಾನ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.