ಹುಣಸೂರು: ಕರ್ನಾಟಕ, ಮಹಾರಾಷ್ಟ್ರ ಮತ್ತು ಚೆನ್ನೈಗಳಲ್ಲಿ ನವ್ಯ ದಿಶ ಟ್ರಸ್ಟ್ 2005ರಿಂದ ನೈರ್ಮಲ್ಯ ಜಾಗೃತಿ ಮೂಡಿಸುವ ಕೆಲಸ ನಿರ್ವಹಿಸುತ್ತಿದೆ. ಈ ಮೂರು ರಾಜ್ಯಗಳಲ್ಲಿ ಒಂದು ಲಕ್ಷ ಶೌಚಾಲಯಗಳನ್ನು ಜನರ ಸಹಭಾಗಿತ್ವದಲ್ಲಿ ನಿರ್ಮಿಸುವ ಕೆಲಸಕ್ಕೆ ಕೈ ಹಾಕಿದೆ ಎಂದು ಸಂಸ್ಥೆಯ ಕಾರ್ಯನಿರ್ವಹಣಾ ನಿರ್ದೇಶಕ ಆನಂದ್ ಯಾದವತ್ ಹೇಳಿದರು.
ಪಟ್ಟಣದಲ್ಲಿ ತಾಲ್ಲೂಕುಮಟ್ಟದ ಜಾಗೃತಿ ಶಿಬಿರದಲ್ಲಿ ಭಾಗವಹಿಸಿದ್ದ 88 ಗ್ರಾಮಗಳ ಸದಸ್ಯರಿಗೆ ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಭಾನುವಾರ ಅವರು ಮಾತನಾಡಿದರು.
ಹುಣಸೂರು ತಾಲ್ಲೂಕಿನಲ್ಲಿ ಈಗಾಗಲೇ 800 ಕುಟುಂಬಗಳನ್ನು ಗುರುತಿಸಿ, ಶೌಚಾಲಯ ನಿರ್ಮಿಸಿಕೊಳ್ಳಲು ಪ್ರೇರಣೆ ನೀಡಲಾಗಿದೆ. ಶೌಚಾಲಯ ನಿರ್ಮಿಸಿಕೊಳ್ಳುವ ಫಲಾನುಭವಿಗೆ ಸರ್ಕಾರ ನೀಡುವ ರಿಯಾಯಿತಿ ಹಣ ರೂ 10 ಸಾವಿರ ನೀಡಲಾಗುವುದು. ಶುದ್ಧ ಕುಡಿಯುವ ನೀರು ಬಳಕೆಯಿಂದಾಗುವ ಲಾಭ ಹಾಗು ನಲ್ಲಿ ಸುತ್ತಲೂ ಕಾಪಾಡುವ ಬಗ್ಗೆ ಅರಿವು ಮೂಡಿಸಿ, ನೀರಿನ ಸಂಪರ್ಕ ನೀಡಲಾಗುತ್ತಿದೆ. ಫಲಾನುಭವಿಗೆ ಈ ಯೋಜನೆಯಲ್ಲಿ ರೂ 5 ಸಾವಿರ ಅನುದಾನ ನೀಡಲಾಗುತ್ತಿದೆ ಎಂದರು.
ನವ್ಯ ದಿಶ ಟ್ರಸ್ಟ್ ಮತ್ತು ಟಿ. ಮುನಿಸ್ವಾಮಪ್ಪ ಟ್ರಸ್ಟ್ ಸಂಸ್ಥೆ ಆಶ್ರಯದಲ್ಲಿ ರಾಜ್ಯದಲ್ಲಿ 24 ಜಿಲ್ಲೆ, ಮಹಾರಾಷ್ಟ್ರದಲ್ಲಿ 14 ಮತ್ತು ತಮಿಳಿನಾಡಿನಲ್ಲಿ 3 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು, ನೀರು ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಮಹಿಳೆಯರಿಗೆ ಅರಿವು ಮೂಡಿಸುವ ಮೂಲಕ ಶುಚಿತ್ವ ಹಾಗೂ ನೈರ್ಮಲ್ಯ ವೃದ್ಧಿಸುವ ಜತೆಗೆ ಮೈಕ್ರೋ ಫೈನಾನ್ಸ್ ಯೋಜನೆಯನ್ನು ಜಾರಿಗೆ ತಂದು ಮೂರು ರಾಜ್ಯಗಳಿಂದ ಒಟ್ಟು ರೂ 100 ಕೋಟಿ ಹಣಕಾಸು ವ್ಯವಹಾರ ನಡೆಸಿದೆ ಎಂದರು.
ಕಾರ್ಯಾಗಾರದಲ್ಲಿ ಸದಸ್ಯರಿಗೆ ಬೀದಿ ನಾಟಕ, ಜನಪದ ಹಾಡುಗಳ, ಭಿತ್ತಿಪತ್ರಗಳ ಮೂಲಕ ಅರಿವು ಮೂಡಿಸಲಾಯಿತು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರೇಮ್ಕುಮಾರ್, ಶಿವಕುಮಾರ್, ಉಮೇಶ್ ಮತ್ತು ಇತರರು ಮಾತನಾಡಿದರು.