ಚಂಡೀಗಡ: 98 ವರ್ಷಗಳ ಹಿಂದೆ ಪ್ಯಾಲೆಸ್ಟೀನ್ನ ಯುದ್ಧಭೂಮಿಯಲ್ಲಿ ಹುತಾತ್ಮರಾದ ವೀರಯೋಧನನ್ನು ಸ್ಮರಿಸಲು ಹರಿಯಾಣದ ಧಕ್ಲಾ ಗ್ರಾಮದ ಜನರು ಸಿದ್ಧತೆ ನಡೆಸಿದ್ದಾರೆ.
ಈ ಗ್ರಾಮಕ್ಕೆ ಸೇರಿದ ಬದ್ಲೂ ಸಿಂಗ್ ಎಂಬ ಯೋಧ ಮೊದಲ ವಿಶ್ವಯುದ್ಧದ ವೇಳೆ ಮೃತಪಟ್ಟಿದ್ದರು. ಅವರ ಸಮಾಧಿ ಈಜಿಪ್ಟ್ನ ಕೈರೊದಲ್ಲಿದೆ.
ಇದೀಗ ಅವರ ಸಮಾಧಿಯಿರುವ ಸ್ಥಳದಿಂದ ಮಣ್ಣನ್ನು ಹುಟ್ಟೂರು ಧಕ್ಲಾಗೆ ತರಲಾಗುತ್ತಿದ್ದು, ಮೇ 3 ರಂದು ತಲುಪಲಿದೆ. ವೀರ ಯೋಧನನ್ನು ಸ್ಮರಿಸಲು ಗ್ರಾಮದ ಜನರು ಕಾರ್ಯಕ್ರಮ ಏರ್ಪಡಿಸಿದ್ದಾರೆ.
ಹರಿಯಾಣ ಸಚಿವ ಓಂ ಪ್ರಕಾಶ್ ಧನ್ಖಡ್ ಅವರ ಪ್ರಯತ್ನದಿಂದಾಗಿ ಮಣ್ಣು ಇಲ್ಲಿಗೆ ತಲುಪಲಿದೆ. ಧನ್ಖಡ್ ನೇತೃತ್ವದಲ್ಲಿ ಹರಿಯಾಣ ಸರ್ಕಾರದ ನಿಯೋಗವೊಂದು ಜಲ ಸಂರಕ್ಷಣೆ ಕುರಿತ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಈಜಿಪ್ಟ್ಗೆ ತೆರಳಿದೆ.
ಧನ್ಖಡ್ ಹಾಗೂ ಈಜಿಪ್ಟ್ನಲ್ಲಿರುವ ಭಾರತದ ರಾಯಭಾರಿ ಸಂಜಯ್ ಭಟ್ಟಾಚಾರ್ಯ ಅವರು ಶನಿವಾರ ಕೈರೊದ ಹೆಲಿಪೊಲಿಸ್ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧನಿಗೆ ಗೌರವ ನಮನ ಸಲ್ಲಿಸಿದ್ದಾರೆ.