ಆ ಸೊಳ್ಳೆಯ ಹೆಸರೇ ಮಂದವಿಸರ್ಪಿಣಿ. ಹೆಸರು ಕೇಳಲು ಚೆಂದವೆನ್ನಿಸಿದರೂ ಅದು ಮಾಡುವ ಕೆಲಸ ಒಂದೇ ರಕ್ತ ಹೀರುವುದು. ಅದಕ್ಕೊಂದು ಸುಂದರವಾದ ಆಸರೆ ದೊರಕಿತ್ತು. ಅದರ ವಾಸ ಒಂದು ಬಹುದೊಡ್ಡ ಕಂಪನಿಯ ಚೇರ್ಮನ್ನರ ಮಲಗುವ ಕೋಣೆ. ಅದೆಂಥ ಕೋಣೆ! ಅತ್ಯಂತ ಸುಂದರವಾಗಿ ಅಲಂಕೃತವಾದ ಮೆತ್ತನೆಯ ಹಾಸಿಗೆ, ಅದರ ಮೇಲೆ ಬಿಳೀ ರೇಷ್ಮೆಯ ಹಾಸು. ಯಾವಾಗಲೂ ತಂಪಾಗಿರುವಂತೆ ನೋಡಿಕೊಳ್ಳುವ ವಾತಾನುಕೂಲಿ ಯಂತ್ರಗಳು. ಸದಾ ಸುಗಂಧವನ್ನೇ ಬೀರುವ ಹೂದಾನಿಗಳು. ಈ ಆಕರ್ಷಕವಾದ ವಾತಾವರಣದಲ್ಲಿ ಮಂದವಿಸರ್ಪಿಣಿ ಸಂತೋಷವಾಗಿದ್ದಳು. ಆಕೆಯ ದಿನನಿತ್ಯದ ಬದುಕಿಗೆ ಯಾವ ಕೊರಗೂ ಇರಲಿಲ್ಲ. ಮಂಚದ ಕೆಳಗೆ ಒಂದು ಪುಟ್ಟ ಮನೆಯನ್ನು ಕಟ್ಟಿಕೊಂಡಿದ್ದಳು.
ರಾತ್ರಿ ಚೇರ್ಮನ್ ಮಲಗಿದ ಮೇಲೆ, ಆತ ಗಾಢವಾದ ನಿದ್ರೆಗೆ ಸರಿದ ಮೇಲೆ, ಒಮ್ಮೆ ಆಳವಾಗಿ ಕಚ್ಚಿ, ದೀರ್ಘವಾಗಿ ರಕ್ತ ಎಳೆದರೆ ಸಾಕು, ಮರುದಿನದವರೆಗೆ ಯಾವ ಚಿಂತೆಗೂ ಅವಕಾಶವಿರಲಿಲ್ಲ, ಕೋಣೆಯಲ್ಲಿ ಮತ್ತಾವ ಸೊಳ್ಳೆಯೂ ಇರದಿದ್ದುದರಿಂದ ಯಾರಿಗೂ ಮಂದವಿಸರ್ಪಿಣಿಯಿಂದ ಹಾನಿ ಆದಂತೆ ಕಾಣಲಿಲ್ಲ. ಹೀಗಿರುವಾಗ ಒಂದು ದಿನ ಸಂಜೆ ಕೋಣೆಯಲ್ಲಿ ಅದೆಲ್ಲಿಂದಲೋ ಒಂದು ತಿಗಣೆ ಬಂದಿತು. ಅದನ್ನು ನೋಡಿದೊಡನೆ ಮಂದವಿಸರ್ಪಿಣಿಯ ಎದೆ ಬಿರಿಯಿತು. ಯಾಕೆಂದರೆ ಆಕೆಗೆ ಈ ತಿಗಣಿಗಳ ಸ್ವಭಾವ ಕೇಳಿ ಗೊತ್ತು. ಅವು ಆಸೆಬರುಕ ಪ್ರಾಣಿಗಳು. ಸ್ವಲ್ಪಕ್ಕೇ ಸಂತೋಷಪಡುವಂಥವಲ್ಲ. ಮೈ ಬಿರಿಯುವವರೆಗೂ ರಕ್ತ ಹೀರುತ್ತವೆ. ಅದಲ್ಲದೇ ಸ್ವಲ್ಪ ಕಾಲದಲ್ಲೇ ಬಹುದೊಡ್ಡ ಪರಿವಾರವನ್ನು ಕಟ್ಟಿಕೊಳ್ಳುತ್ತವೆ.
ಆ ಮಂದವಿಸರ್ಪಿಣಿ ತುಂಬ ದಾಕ್ಷಿಣ್ಯದ ಹೆಣ್ಣು. ಬಿರುಸಾಗಿ ಮಾತನಾಡುವುದು, ಮತ್ತೊಬ್ಬರ ಮನಸ್ಸನ್ನು ನೋಯಿಸುವುದು ಆಕೆಗೆ ಇಷ್ಟವಿಲ್ಲ. ಆಕೆ ಮೃದುವಾಗಿಯೇ ಕೇಳಿದಳು. ‘ಯಾರು ತಾವು? ಎಲ್ಲಿಂದ ಬಂದಿರಿ?’ ಛೇ, ಅದೇನು ಒರಟು ಆ ತಿಗಣೆಯ ಧ್ವನಿ? ‘ನಾನೇ? ನನ್ನ ಹೆಸರು ಅಗ್ನಿಮುಖ. ಈ ಕೋಣೆಯ ವಿಷಯವನ್ನು ಬಹಳ ಕೇಳಿ ನೋಡಿ ಹೋಗಲು ಬಂದಿದ್ದೇನೆ’ ಎಂದಿತು ತಿಗಣೆ. ‘ಅಯ್ಯೋ ಇಲ್ಲಿಗೇಕಪ್ಪ ಬಂದೆ ನೀನು? ಇದು ಚೇರ್ಮನ್ನರು ಮಲಗುವ ಕೋಣೆ. ಆತ ತುಂಬ ಸೂಕ್ಷ್ಮ ಸ್ವಭಾವದವನು.
ನೀನೋ ಬಲೆ ಆಸೆಬುರುಕ. ಅವನಿಗೆ ನಿದ್ರೆ ಹತ್ತುವುದನ್ನು ಕಾಯಲಾರೆ. ಆಗ ಕಚ್ಚಿಬಿಟ್ಟರೆ ಆತ ನಿನ್ನನ್ನು ಹೊಸಕಿ ಸಾಯಿಸಿಬಿಡುತ್ತಾನೆ’ ಎಂದಿತು ಸೊಳ್ಳೆ ಕಳವಳದಿಂದ. ‘ಮಂದವಿಸರ್ಪಿಣಿ, ನೀನು ಯಾವ ಚಿಂತೆಯನ್ನೂ ಮಾಡಬೇಡ. ನಾನು ಇದುವರೆಗೂ ಒಂದು ಧ್ಯಾನ ಮಂದಿರದಲ್ಲಿದ್ದೆ. ಹೀಗಾಗಿ ಮನೋನಿಗ್ರಹ ಸಾಧ್ಯವಾಗಿದೆ. ಚೇರ್ಮನ್ ನಿದ್ರೆಯ ಆಳಕ್ಕೆ ಜಾರುವವರೆಗೂ ಸುಮ್ಮನಿರುತ್ತೇನೆ. ಅನಂತರ ಒಮ್ಮೆ ಕಚ್ಚಿ ಹೊರಟು ಹೋಗುತ್ತೇನೆ, ಅದೂ ನೀನು ನಿನ್ನ ಊಟ ಮುಗಿಸಿದ ಮೇಲೆ. ನನಗೂ ಈ ಚೇರ್ಮನ್ಗಳ ಸತ್ವಪೂರ್ಣ ರಕ್ತದ ರುಚಿ ನೋಡಬೇಕೆನ್ನಿಸಿದೆ’ ಎಂದಿತು ತಿಗಣೆ.
ಸೊಳ್ಳೆ ದಾಕ್ಷಿಣ್ಯದಿಂದ ಸುಮ್ಮನಾಯಿತು. ಇನ್ನೇನು ಮಾಡೀತು ಪಾಪ! ಚೇರ್ಮನ್ ಬಂದು ಹಾಸಿಗೆಯ ಮೇಲೆ ಕುಳಿತು ಮಗ್ಗುಲಾದ. ತಿಗಣೆಯ ಬಾಯಲ್ಲಿ ನೀರೂರಿತು, ಮನೋನಿಗ್ರಹ ಮರೆತು ಹೋಯಿತು. ತಕ್ಷಣ ಅವನ ತೋಳಿನಲ್ಲಿ ತನ್ನ ಚೂಪಾದ ಕೊಂಡಿಯನ್ನೂರಿ ಸರ್ರೆಂದು ರಕ್ತ ಎಳೆಯಿತು. ಅದರ ಕಚ್ಚುವಿಕೆ ದೀರ್ಘ. ಚೇರ್ಮನ್ ಥಟ್ಟನೇ ಎದ್ದು ಕುಳಿತ, ತೋಳು ಕೆರೆದುಕೊಂಡ. ನಂತರ ದೀಪ ಹಚ್ಚಿ ನೋಡಿದ ಅಷ್ಟರಲ್ಲಿ ಅಗ್ನಿಮುಖ ತಲೆದಿಂಬಿನ ಕೆಳಗೆ ಸೇರಿಕೊಂಡಿದ್ದ. ಚೇರ್ಮನ್ ಸೊಳ್ಳೆ ಕೊಲ್ಲುವ ವಿಷವನ್ನು ಹಾಸಿಗೆಯ ಕೆಳಗೆಲ್ಲ ಸಿಂಪಡಿಸಿದ. ಮಂದವಿಸರ್ಪಿಣಿ ಸತ್ತು ಬಿತ್ತು. ಆದರೆ ಅಗ್ನಿಮುಖ ಆರಾಮವಾಗಿ ಕುಳಿತಿದ್ದ. ನಮ್ಮ ಬದುಕಿನಲ್ಲೂ ಅಗ್ನಿಮುಖರು ಬರುತ್ತಾರೆ. ಅವರ ಉದ್ದೇಶ, ಸ್ವಭಾವಗಳನ್ನು ತಿಳಿಯದೇ ನಾವು ಅವರಿಗೆ ಅವಕಾಶ ಮಾಡಿಕೊಡುತ್ತೇವೆ, ದಾಕ್ಷಿಣ್ಯದಿಂದ ಸಾಕುತ್ತೇವೆ. ಆದರೆ, ಅವರೊಂದು ದಿನ ನಮ್ಮನ್ನು ಮುಗಿಸಿ ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಾರೆ. ಜೊತೆಗೆ ಬಂದವರು ಅಗ್ನಿಮುಖರಂಥವರು ಎಂದು ಗೊತ್ತಾದೊಡನೆ ದಾಕ್ಷಿಣ್ಯಬೇಡ, ಅವರ ಸಹವಾಸವೂ ಬೇಡ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.