ನಾವು ನಮ್ಮ ನಮ್ಮ ಕಚೇರಿಗಳ ಸಭೆಗಳಲ್ಲಿ ಭಾಗವಹಿಸುತ್ತೇವೆ. ಕಚೇರಿಯ ಮುಖ್ಯಸ್ಥರು ತಮ್ಮ ಚಿಂತನೆಗಳನ್ನು ಎಲ್ಲರ ಮುಂದಿರಿಸಿ ಸಭೆಯಲ್ಲಿದ್ದ ಸದಸ್ಯರ ಅಭಿಪ್ರಾಯಗಳನ್ನು ಕೇಳುತ್ತಾರೆ. ಎಷ್ಟು ಜನ ಪ್ರಾಮಾಣಿಕವಾದ ಸಲಹೆಗಳನ್ನು ಕೊಡುತ್ತಾರೆಂಬುದನ್ನು ಗಮನಿಸಿ.
ಬಹಳಷ್ಟು ಸದಸ್ಯರು ಯಾವ ಮಾತನ್ನೂ ಆಡುವುದಿಲ್ಲ. ಕೋಲೆ ಬಸವನ ತರಹ ತಲೆ ಅಲ್ಲಾಡಿಸುತ್ತ ಯಾವ ಅಭಿಪ್ರಾಯವನ್ನು ಕೊಡುವುದಿಲ್ಲ. ಆದರೆ, ಹೊರಗೆ ಬಂದೊಡನೆ, ‘ನನಗೆ ಸಾಹೇಬರು ಹೇಳಿದ್ದು ಒಂದಿಷ್ಟೂ ಸರಿ ಕಾಣಲಿಲ್ಲ, ಸರಿಯಾಗಿ ಹೇಳಬೇಕೆಂದಿದ್ದೆ. ಆದರೇನು ಮಾಡುವುದು? ನಾನೊಬ್ಬನೇ ಮಾತನಾಡಿದರೆ ಏನು ಪ್ರಯೋಜನ?
ಎಲ್ಲರೂ ಸುಮ್ಮನೆ ಕುಳಿತಿದ್ದರಲ್ಲ’ ಎಂದು ಸ್ನೇಹಿತರಿಗೆ ಹೇಳುತ್ತಾರೆ. ಇನ್ನು ಕೆಲವರು, ‘ಮಾತನಾಡಿದರೆ ಏನು ಬಂತು? ನಮ್ಮ ಬಾಸ್ ತಮ್ಮ ತಲೆಯಲ್ಲಿದ್ದದ್ದನ್ನೆ ಮಾಡುತ್ತಾರೆ. ನಾವು ಹೇಳಿದ್ರೆ ಕೇಳುತ್ತಾರಾ? ಅದಕ್ಕೇ ನಾನು ಮಾತನಾಡಲೇ ಇಲ್ಲ’ ಎನ್ನುತ್ತಾರೆ. ಇದು ಸಾಮಾನ್ಯವಾಗಿ ನಡೆಯುತ್ತದೆ. ಎಲ್ಲರ ಮನಸ್ಸಿನಲ್ಲಿ ಏಕಾಭಿಪ್ರಾಯ ಇಲ್ಲದೇ ಹೋದರೂ ಸಭೆಯಲ್ಲಿ ತೀರ್ಮಾನ ಆಗಿ ಹೋಗುತ್ತದೆ. ಇದು ಗುಂಪಿನಲ್ಲಿ ಆಗುವ ತೀರ್ಮಾನದ ಹಣೆ ಬರಹ. ಈ ತರಹ ನಡೆಯುವುದು ಸಣ್ಣ ಸಭೆಗಳಲ್ಲಿ ಮಾತ್ರವಲ್ಲ.
೧೯೬೧ ರ ಜನವರಿಯಲ್ಲಿ ಅಧ್ಯಕ್ಷ ಜಾನ್ ಕೆನೆಡಿಯವರಿಗೆ ಒಂದು ವಿಷಯ ತಿಳಿಸಲಾಯಿತು. ಅವರು ಅಧಿಕಾರ ವಹಿಸಿ ಎರಡು ದಿನ ಮಾತ್ರ ಆಗಿತ್ತು. ಅವರಿಗೆ ತಿಳಿಸಿದ ವಿಷಯ ಅತ್ಯಂತ ರಹಸ್ಯವಾಗಿ ನಡೆಯಬೇಕಾಗಿದ್ದ ಕ್ಯೂಬಾದ ಮೇಲಿನ ದಾಳಿ. ಮರು ತಿಂಗಳು ಒಂದು ರಹಸ್ಯ ಸಭೆ ಅಧ್ಯಕ್ಷರ ಮನೆಯಲ್ಲಿ ನಡೆಯಿತು. ಅದರಲ್ಲಿ ಭಾಗವಹಿಸಿದವರೆಲ್ಲ ಉನ್ನತ ಅಧಿಕಾರಿಗಳೇ. ಎಲ್ಲರೂ ದಾಳಿ ಮಾಡುವುದು ಸರಿಯೆಂದೇ ಒಪ್ಪಿಕೊಂಡರು.
ಏಪ್ರಿಲ್ ಹದಿನೇಳರಂದು ಸಾವಿರದ ನಾಲ್ಕು ನೂರು ಅಮೆರಿಕದ ಸೈನಿಕರು ಕ್ಯೂಬಾದ ದಕ್ಷಿಣ ತೀರಕ್ಕೆ ಬಂದಿಳಿದರು. ಅವರ ಸಹಾಯಕ್ಕಾಗಿ ಅಮೆರಿಕೆಯ ನೌಕಾಪಡೆ, ವಾಯುಪಡೆ ಹಾಗೂ ಸಿ.ಐ.ಎ ಗಳೆಲ್ಲ ಸಹಾಯಕ್ಕೆ ನಿಲ್ಲಬೇಕಿತ್ತು. ಈ ರಹಸ್ಯ ದಾಳಿಯ ಉದ್ದೇಶ ಫಿಡೆಲ್ ಕ್ಯಾಸ್ಟ್ರೋ ಅವರ ಸರ್ಕಾರ ಉರುಳಿಸುವುದಾಗಿತ್ತು. ಆದರೆ, ಅವರ ಯೋಜನೆಯ ಒಂದು ತೀರ್ಮಾನವೂ ಸಫಲವಾಗಲಿಲ್ಲ. ಇವರ ಸೈನಿಕರಿಗೆ ಸರಬರಾಜು ಮಾಡಲು ಬರಬೇಕಿದ್ದ ಒಂದು ಹಡಗೂ ಬಂದು ತೀರ ಸೇರಲಿಲ್ಲ. ಕ್ಯೂಬಾದ ವಾಯುಪಡೆ ನಂತರ ಬಂದ ಎರಡು ಹಡಗುಗಳನ್ನು ಹೊಡೆದು ಹಾಕಿತು. ಇನ್ನೆರಡು ಹಡಗುಗಳು ಭಯಪಟ್ಟು ಮರಳಿ ಹೋದವು.
ಮರುದಿನ ಕ್ಯೂಬಾದ ಸೈನ್ಯ ಈ ಅಮೆರಿಕದ ಸೈನಿಕರನ್ನು ಸುತ್ತುವರೆದು ಬಂಧಿಸಿತು. ಈ ವಿಫಲ ದಾಳಿ ಜಾನ್ ಕೆನೆಡಿಯವರ ತೀರ್ಮಾನಗಳಲ್ಲಿ ಅತ್ಯಂತ ಕೆಟ್ಟದೆಂದು ಹೆಸರು ಪಡೆಯಿತು. ಇದು ಹೇಗಾಯಿತು? ಅತ್ಯಂತ ಬುದ್ಧಿವಂತರಿದ್ದ ಸಭೆಯ ತೀರ್ಮಾನ ಹೀಗೇಕೆ ತಪ್ಪಾಯಿತು?. ನಂತರ ಕೆನೆಡಿ ಹೇಳಿದರು, ‘ನಾನು ಕರೆದ ಸಭೆಯಲ್ಲಿ ಒಬ್ಬರೂ ಕೂಡ ಈ ಯೋಜನೆ ತಪ್ಪು, ಇದರಲ್ಲಿ ತುಂಬ ಅಪಾಯವಿದೆ ಎಂದು ಹೇಳಲಿಲ್ಲ.’ ಸಭೆಯಲ್ಲಿದ್ದವರೆಲ್ಲ ಕೆನಡಿಯ ವ್ಯಕ್ತಿತ್ವದ ವರ್ಚಸ್ಸಿಗೆ ಮೆಚ್ಚಿದವರೇ. ಅಧ್ಯಕ್ಷರೇ ತೀರ್ಮಾನ ಮಾಡಿದ ಮೇಲೆ ಯಶಸ್ಸು ಖಂಡಿತ ಎಂದು ಕಾರಣವಿಲ್ಲದೆ ನಂಬಿದವರು.
೧೯೯೦ ರ ಸುಮಾರಿಗೆ ಸ್ವಿಟ್ಜರ್ಲೆಂಡ್ನ ವಾಯುಯಾನ ಸಂಸ್ಥೆ ಸ್ವಿಸ್ ಏರ್ ಕಂಪನಿ ತುಂಬ ಲಾಭ ಗಳಿಸುತ್ತಿತ್ತು. ಸಂಸ್ಥೆಯ ಸೇವೆಯ ಬಗ್ಗೆ ಎಲ್ಲೆಡೆ ಮೆಚ್ಚುಗೆ ಇತ್ತು. ಈ ಸಮಯದಲ್ಲಿ ಕಂಪನಿಯ ಮುಖ್ಯಸ್ಥರು ಅತ್ಯಂತ ಉನ್ನತ ಮಟ್ಟದ ಸದಸ್ಯರ ಸಭೆ ಕರೆದರು. ಕಂಪನಿಯನ್ನು ಇನ್ನೂ ವಿಸ್ತರಿಸುವುದು ಹೇಗೆ ಎಂದು ಚರ್ಚಿಸಿದರು. ಆಗ ಸದಸ್ಯರೆಲ್ಲ ತುಂಬ ಉತ್ಸಾಹದಿಂದ ತಮ್ಮ ಕಂಪನಿ ಏನು ಮಾಡಿದರೂ ಯಶಸ್ಸೇ ಆಗುತ್ತದೆಂದು ತೀರ್ಮಾನಿಸಿ ಬೇರೆ ಯುರೋಪಿಯನ್ ವಿಮಾನಯಾನ ಸಂಸ್ಥೆಗಳನ್ನು ಕೊಂಡುಕೊಳ್ಳಲು ಏಕಮತದಿಂದ ತೀರ್ಮಾನಿಸಿದರು. ಯಶಸ್ಸಿನ ಶಿಖರದಲ್ಲಿದ್ದವರಿಗೆ ಸೋಲಿನ ಕಂದಕ ಕಾಣಲಿಲ್ಲ.
ತಮ್ಮ ಸಂಪನ್ಮೂಲಗಳನ್ನು ಕ್ರೋಡೀಕರಿಸಿ, ಅಸಾಧ್ಯ ಮಟ್ಟದ ಸಾಲ ಪಡೆದು ವಿಸ್ತರಣೆ ಮಾಡಿದರು. ಆದರೆ, ಈ ದಿಢೀರ್ ವಿಸ್ತರಣೆಯ ಹಿಂದೆ ತಾಳ್ಮೆಯ, ತಿಳುವಳಿಕೆಯ ಯೋಜನೆ ಕಾಣದ್ದರಿಂದ ೨೦೦೧ ರಲ್ಲಿ ಕಂಪನಿಗೆ ಮುಚ್ಚುವ ಸ್ಥಿತಿ ಬಂದಿತು. ಆದ್ದರಿಂದ ಸಭೆಯಲ್ಲಿ ಯಾರಾದರೂ ವಿರೋಧದ ಮಾತನ್ನಾಡಿದರೆ ಬೇಜಾರು ಬೇಡ. ಅವರ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಬೇಕು. ಅದರ ಹಿಂದಿನ ವಿಚಾರವನ್ನು ಪರೀಕ್ಷಿಸಿ ನೋಡಬೇಕು. ಅದರಲ್ಲಿ ಸತ್ಯವಿದ್ದರೆ ಒಪ್ಪಿಕೊಳ್ಳಬೇಕು. ಅದಕ್ಕೇ ಅಧಿಕಾರದಲ್ಲಿರುವವರು ತಮ್ಮ ಅಭಿಪ್ರಾಯಗಳನ್ನು ಸದಾಕಾಲ ಒಪ್ಪದೇ ಇರುವವರನ್ನೂ ಸಭೆಗಳಿಗೆ ಸೇರಿಸಿಕೊಳ್ಳಬೇಕು. ಅವರು ನಿಮ್ಮನ್ನು ಯಾವಾಗಲೂ ಜಾಗರೂಕರಾಗಿ ಕಾಯುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.