ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಲದ ಬಲ

Last Updated 18 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ನಾನು ಮುಂಬೈಗೆ ಹೋದಾಗ ಪ್ರೇಮ್ ಗಣಪತಿ ಎಂಬ ವ್ಯಕ್ತಿಯನ್ನು ಸ್ನೇಹಿತ­ರೊಬ್ಬರು ಪರಿಚಯಿಸಿದರು. ಆತ ತನ್ನ ಕಥೆ ಹೇಳಿದಾಗ ನಾನು ಬೆರಗಾದೆ. ಈತ ತಮಿಳುನಾಡಿನ ತೂತುಕುಡಿ ಜಿಲ್ಲೆಯ ನಾಗಲಾಪುರ ಗ್ರಾಮದ ಅತ್ಯಂತ ಬಡ­ಕುಟುಂಬಕ್ಕೆ ಸೇರಿದವರು. ಹತ್ತನೇ ತರಗತಿಯ ಪರೀಕ್ಷೆ ಮುಗಿದ ಮೇಲೆ ಮದ್ರಾಸಿಗೆ ಹೋಗಿ ಜೀವನ ಅರಸಿದರು.

ಅಲ್ಲಲ್ಲಿ ಕೆಲಸ ಮಾಡಿದಾಗ ದೊರೆತ ಹಣ­ದಲ್ಲಿ ತನ್ನ ಬದುಕೇ ಕಷ್ಟದ್ದೆನಿಸಿತು, ಮನೆಗೆ ಹಣ ಕಳಿಸು­ವುದಂತೂ ದೂರದ ಮಾತು. ಯಾರೋ ಪರಿಚಯದವರು ಮುಂಬೈನಲ್ಲಿ ಒಂದು ಕೆಲಸವಿದೆ, ಅಲ್ಲಿ ನಿನಗೆ ತಿಂಗಳಿಗೆ ಸಾವಿರ ರೂಪಾಯಿ ಸಂಬಳ ಕೊಡುತ್ತಾರೆಂದು ನಂಬಿಸಿ ಕಳುಹಿಸಿ­ದರು. ಈತ ಬಂದು ಮುಂಬೈನಲ್ಲಿ ಇಳಿದಾಗ ಇವರನ್ನು ಕರೆದೊಯ್ಯಲು ಬಂದ ವ್ಯಕ್ತಿ ಪ್ರೇಮ್ ಬಳಿಯಿದ್ದ ಇನ್ನೊಂದು ರೂಪಾಯಿ­ಯನ್ನು ಇಸಿದುಕೊಂಡು ಈಗ ಬರು­ತ್ತೇನೆಂದು ಹೇಳಿ ಮಾಯವಾದ.

ಕೈಯಲ್ಲಿ ಒಂದು ಕಾಸೂ ಇಲ್ಲ. ಮನೆಗೆ ಮರ­ಳು­ವು­ದೆಂತು? ಮನೆಗೆ ಹೋಗಿ ಯಾವ ಮುಖ ತೋರಿಸುವುದು.? ಹದಿ­ನೇಳರ ತರುಣ ಅಲ್ಲಿಯೇ ಇದ್ದು ಬದುಕು ಕಟ್ಟಲು ತೀರ್ಮಾನಿಸಿದ. ಒಂದು ಬೇಕರಿ­ಯಲ್ಲಿ ಪಾತ್ರೆ ತೊಳೆಯುವ, ನೆಲ ಒರೆಸುವ ಕೆಲಸ ಒಪ್ಪಿಕೊಂಡ. ಆತನಿಗೆ ಅಲ್ಲಿಯೇ ರಾತ್ರಿ ಮಲಗಲು ಅವಕಾಶ ಕೊಟ್ಟದ್ದು ದೊಡ್ಡದೆನಿಸಿತು. ಎರಡು ವರ್ಷ ಬೇಕರಿಯಲ್ಲಿಯ ಚಾಕರಿಯೊಂದಿಗೆ ಮತ್ತು ಅಲ್ಲಲ್ಲಿ ಕೆಲಸ ಮಾಡಿ ಹೋಟೆ­ಲ್ಲಿನ ಕೆಲಸವನ್ನು ಕಲಿತ.

ನಂತರ ತಾನು ಕೂಡಿಸಿಟ್ಟಿದ್ದ ಸಾವಿರ ರೂಪಾ­ಯಿ­ಯಲ್ಲಿ ಒಂದಿಷ್ಟು ಪಾತ್ರೆ, ಸ್ಟವ್, ಹಂಚುಗಳನ್ನು ಕೊಂಡು ಒಂದು ತಳ್ಳುವ ಗಾಡಿ­ಯನ್ನು ಬಾಡಿಗೆ ತೆಗೆದುಕೊಂಡು ಮುಂಬೈನ ವಾಶಿ ರೇಲ್ವೆ ನಿಲ್ದಾಣದ ಮುಂದೆ ದೋಸೆ ಮಾಡಿ ಮಾರಲು ತೊಡಗಿದ. ನಿಧಾನವಾಗಿ ಅದು ಜನಪ್ರಿಯತೆ ಪಡೆಯಿತು. ತನ್ನ ಮನೆಗೆ ಫೋನ್ ಮಾಡಿ ತನ್ನಿಬ್ಬರು ತಮ್ಮಂದಿರನ್ನು ಕರೆಸಿ­ಕೊಂಡ. ಅವರೂ ಕೆಲಸಕ್ಕೆ ಆಸರೆಯಾದರು. ತಾನು ಉಳಿದ ರಸ್ತೆಯಲ್ಲಿ ಆಹಾರ ಮಾಡು­ವವರಿಗಿಂತ ಭಿನ್ನವಾಗಬೇಕೆಂದು ನಿರ್ಧರಿಸಿದ.

ಮೂವರೂ ಒಂದು ಯೂನಿ­ಫಾರಂ ಮಾಡಿಕೊಂಡರು. ತಲೆಗೆ ಟೊಪ್ಪಿಗೆ ಹಾಕಿಕೊಂಡರು, ಕೈಗೆ ಕೈಚೀಲ­ಗಳು ಬಂದವು. ಪಾತ್ರೆ, ಪ್ಲೇಟುಗಳನ್ನು ಸೋಪು ಹಾಕಿ ತೊಳೆದು ಶುಭ್ರ­ವಾಗಿ ಒರೆಸಿದರು. ಯಾವಾಗ ಶುದ್ಧತೆ ಕಾಣತೊಡಗಿತೋ ಗಿರಾಕಿಗಳು ಹೆಚ್ಚಿ­ದರು. ತಿಂಗಳಿಗೆ ಇಪ್ಪತ್ತು ಸಾವಿರ ರೂಪಾಯಿಗಳ ಆದಾಯ ಕಾಣತೊಡಗಿತು. ಮರು­ವರ್ಷ ವಾಶಿಯಲ್ಲಿಯೇ ಒಂದು ಕೋಣೆಯನ್ನು ಬಾಡಿಗೆಗೆ ತೆಗೆದು­ಕೊಂಡು ಅಲ್ಲಿ ದೋಸೆಯ ಹೋಟೆಲ್‌ ಆರಂಭಿಸಿದರು. ಅದಕ್ಕೆ ಪ್ರೇಮಸಾಗರ ದೋಸಾ ಪ್ಲಾಜಾ ಎಂದು ಹೆಸರಿಟ್ಟರು.

ಹತ್ತಿರದ ಕಾಲೇಜಿನ ವಿದ್ಯಾರ್ಥಿಗಳು ಇದಕ್ಕೆ ಲಗ್ಗೆ ಇಟ್ಟರು. ಕೈಕೆಳಗೆ ಮೂವರು ಕೆಲಸಗಾರರನ್ನಿಟ್ಟುಕೊಂಡರೂ ನಿಭಾ­ಯಿಸುವುದು ಕಷ್ಟವಾಯಿತು. ಕಾಲೇಜು ಹುಡುಗರು ಪ್ರೇಮ್‌ಗೆ ಇಂಟರನೆಟ್ ಬಳಸುವುದನ್ನು ಕಲಿಸಿಕೊಟ್ಟರು. ಪ್ರೇಮ್ ಹಾಗೂ ಸಹೋದರರು ಅದನ್ನು ಬಳಸಿ ತರತರಹದ ದೋಸೆಗಳನ್ನು ಮಾಡು­ವುದನ್ನು ಪ್ರಾರಂಭಿಸಿದರು. ೨೦೦೨ ರ ಹೊತ್ತಿ­ಗೆ ಹೋಟೆಲ್ಲಿನಲ್ಲಿ ನೂರಾ ಐದು ತರಹದ ದೋಸೆಗಳನ್ನು ಮಾಡುತ್ತಿ­ದ್ದರಂತೆ.

ಮರುವರ್ಷ ಸೆಂಟರ್ ಒನ್ ಮಾಲ್‌ನಲ್ಲಿ ಇವರ ದೊಡ್ಡ ದೋಸೆ ಅಂಗಡಿ ಪ್ರಾರಂಭವಾಯಿತು. ಬೇರೆ ಬೇರೆ ಜನ ಇವರ ಸಹಯೋಗವನ್ನು ಬಯಸಿ ಬಂದರು. ಇದೇ ಹೆಸರಿನ ಹೋಟೆಲ್ಲುಗಳು ಸಹಯೋಗದಲ್ಲಿ ಪ್ರಾರಂಭವಾದವು. ಪರದೇಶದಿಂದಲೂ ಬೇಡಿಕೆ ಬಂತು. ಇಂದು ಪ್ರೇಮ್ ಗಣಪತಿ ಅವರ ನಲವ­ತ್ಮೂರು ಹೋಟೆಲ್ಲುಗಳು ಭಾರತದ ಹನ್ನೊಂದು ರಾಜ್ಯಗಳಲ್ಲಿವೆ. ಇದರೊಂದಿಗೆ ನ್ಯೂಜಿ­ಲೆಂಡಿನಲ್ಲಿ ಮೂರು, ದುಬೈನಲ್ಲಿ ಎರಡು, ಮಸ್ಕತ್‌ನಲ್ಲಿ ಒಂದು ಹೋಟೆಲ್‌ ಇದೆ.

ಕೇವಲ ಸಾವಿರ ರೂಪಾಯಿ ಬಂಡವಾಳ ಹಾಕಿ ಪ್ರಾರಂಭಿಸಿದ್ದು ಇಂದು ಮೂವತ್ತು ಕೋಟಿ ರೂಪಾಯಿಯ ಕಂಪನಿಯಾಗಿ ಬೆಳೆದಿದೆ. ಇಷ್ಟರಲ್ಲೇ ಐವತ್ತು ಕೋಟಿ ವ್ಯವಹಾರವನ್ನು ತಲುಪುವ ನಂಬಿಕೆ ಪ್ರೇಮ ಗಣಪತಿಯವರಿ­ಗಿದೆ. ನಮ್ಮ ಬಳಿ ಏನೂ ಇಲ್ಲ, ನಾವೇನು ಮಾಡಬಲ್ಲೆವು ಎಂದು ಕೇಳುವವರಿಗೆ ಪ್ರೇಮ್ ಗಣಪತಿ ಉತ್ತರವಾಗಿ ನಿಂತಿದ್ದಾರೆ. ಹಣವಿಲ್ಲ­ದಿದ್ದರೆ ತೊಂದರೆಯಿಲ್ಲ. ಆದರೆ, ಹೃದಯದಲ್ಲಿ ಸಾಧನೆಯ ಛಲವಿಲ್ಲ­ದಿದ್ದರೆ ಏನೂ ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT