ಹೆಣ್ಣು ಭ್ರೂಣಕ್ಕೆ ತಾಯಿಯ ಗರ್ಭ ಇಂದು ಸುರಕ್ಷತೆಯ ಚೀಲವಾಗಿಲ್ಲ. ಇದಕ್ಕೆ ಕಾರಣ, ಗಂಡುಮಗುವನ್ನೇ ಬಯಸುವ ನಮ್ಮ ಸಂಸ್ಕೃತಿಗೆ ತಂತ್ರಜ್ಞಾನ ನೆರವಾಗುತ್ತಿದೆ. ಹೆಣ್ಣುಮಗು ಇಳೆಗಿಳಿಯದಂತೆ ಹೊಟ್ಟೆಯೊಳಗೇ ಹೊಸಕಿಹಾಕಲು ಅಥವಾ ಅಂಕುರವಾಗದಂತೇ ತಡೆಯಲು ತಂತ್ರಜ್ಞಾನ ದುರ್ಬಳಕೆಯಾಗುತ್ತಿದೆ. ಲಿಂಗಾನುಪಾತ ಕುಸಿಯುತ್ತಿರುವುದೇ ಇದಕ್ಕೆ ಸಾಕ್ಷಿ.
ಇಂತಹ ಸಾಮಾಜಿಕ, ಸಾಂಸ್ಕೃತಿಕ ಪರಿಸರದಲ್ಲಿ ಎರಡನೇ ದರ್ಜೆ ಪ್ರಜೆಯಾಗಿರುವ ಮಹಿಳೆಗೆ ತನ್ನ ಲೈಂಗಿಕತೆ ಅಥವಾ ದೇಹದ ಹಕ್ಕುಗಳ ಬಗ್ಗೆ ಇನ್ನು ಯಾವ ತರಹದ ಆಯ್ಕೆಗಳಿರುವುದು ಸಾಧ್ಯ? ರಾಷ್ಟ್ರದ ಜನಸಂಖ್ಯಾ ನಿಯಂತ್ರಣ ನೀತಿಗಳ ಅನುಷ್ಠಾನಕ್ಕೂ ಹೆಣ್ಣಿನ ದೇಹ ಎಗ್ಗಿಲ್ಲದೆ ಬಳಕೆಯಾಗುತ್ತದೆ. ಸಾರ್ವಜನಿಕ ಆರೋಗ್ಯ ಅಥವಾ ಜನಸಂಖ್ಯಾ ನೀತಿಗಳ ಅನುಷ್ಠಾನಕ್ಕಾಗಿ ಹೆಣ್ಣಿನ ದೇಹ ನಿರ್ದಾಕ್ಷಿಣ್ಯವಾಗಿ ಪ್ರಯೋಗ ಪಶುವಾಗುತ್ತದೆ. ಇದು ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ಪ್ರಕ್ರಿಯೆ.
ಈ ಪ್ರಕ್ರಿಯೆಯ ಭಾಗವಾಗಿ ಛತ್ತೀಸಗಡದ ಬಿಲಾಸಪುರ ಜಿಲ್ಲೆಯಲ್ಲಿ ಕಳೆದವಾರ ನಡೆಸಲಾದ ಸಂತಾನಶಕ್ತಿ ಹರಣ ಸಾಮೂಹಿಕ ಶಿಬಿರದಲ್ಲಿ 13 ಮಹಿಳೆಯರು ಸಾವನ್ನಪ್ಪಿರುವುದು ಆಘಾತಕಾರಿ. ರಾಷ್ಟ್ರದ ಸಾಕ್ಷಿ ಪ್ರಜ್ಞೆಯನ್ನು ಕಲಕುವಂತಹ ಘಟನೆ ಇದು. ಸರಳವಾದ ಲ್ಯಾಪ್ರೊಸ್ಕೊಪಿಕ್ ವಿಧಾನದ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಹಿಳೆಯರ ಸಾವಿನಲ್ಲಿ ಅಂತ್ಯವಾಯಿತು ಎಂಬುದು ಭಾರತದ ಸಾರ್ವಜನಿಕ ಆರೋಗ್ಯ ಸೌಲಭ್ಯಗಳ ದುರವಸ್ಥೆ ಕುರಿತಾಗಿ ದೊಡ್ಡ ಕತೆಯನ್ನೇ ಹೇಳುತ್ತದೆ.
ಸಂತಾನಶಕ್ತಿಹರಣ ಸಾಮೂಹಿಕ ಶಿಬಿರಗಳ ಆಯೋಜನೆಗೆ ಕೆಲವೊಂದು ನೀತಿ ನಿಯಮಗಳಿವೆ. ಒಂದು ಲ್ಯಾಪ್ರೊಸ್ಕೊಪಿಕ್ ಸಾಧನವನ್ನು 10ಕ್ಕೂ ಹೆಚ್ಚು ಟ್ಯೂಬೆಕ್ಟಮಿಗಳಿಗೆ (ಮಹಿಳೆಯರಿಗೆ ಮಾಡಲಾಗುವ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ) ಬಳಸುವಂತಿಲ್ಲ. ದಿನವೊಂದಕ್ಕೆ ಒಬ್ಬ ವೈದ್ಯರು ಕೇವಲ 30 ಶಸ್ತ್ರಚಿಕಿತ್ಸೆಗಳನ್ನು ನಡೆಸಬಹುದು. ಆದರೆ ಒಂದೇ ಸಾಧನದಿಂದ ಐದು ಗಂಟೆಗಳ ಅವಧಿಯಲ್ಲಿ 83 ಶಸ್ತ್ರಚಿಕಿತ್ಸೆಗಳನ್ನು ಬಿಲಾಸಪುರ ಜಿಲ್ಲೆಯಲ್ಲಿ ವೈದ್ಯರು ನಡೆಸಿದ್ದಾರೆ ಎಂಬ ದಾಖಲೆ ಎದೆ ನಡುಗಿಸುತ್ತದೆ.
ಒಬ್ಬರಿಗೆ 4 ನಿಮಿಷಕ್ಕೂ ಕಡಿಮೆ ಸಮಯ ವಿನಿಯೋಗಿಸಲಾಗಿದೆ. ಈ ಬಡಪಾಯಿ ಮಹಿಳೆಯರು ಆಡಳಿತಯಂತ್ರಕ್ಕೆ ಕೇವಲ ಅಂಕೆಸಂಖ್ಯೆಯಾಗಿದ್ದಾರೆ ಅಷ್ಟೆ ಎಂಬುದು ಅಭಿವೃದ್ಧಿಪಥದ ಹೃದಯಹೀನತೆಯನ್ನು ಬಯಲುಮಾಡುತ್ತದೆ. ಲೈಂಗಿಕ ಸಂಬಂಧಗಳು, ಗರ್ಭನಿರೋಧ ಹಾಗೂ ಮಗು ಪಡೆಯುವಂತಹ ವಿಚಾರಗಳಲ್ಲಿ ಮಹಿಳೆಗೆ ಆಯ್ಕೆಗಳಿವೆಯೇ? ಎಂಬಂಥ ಪ್ರಶ್ನೆಗಳನ್ನು ಎಲ್ಲರೂ ಕೇಳಿಕೊಳ್ಳಬೇಕಾಗಿದೆ.
ಲೋಕಸಭೆಯಲ್ಲಿ ಮಂಡನೆಯಾಗಿರುವ ಅಂಕಿಸಂಖ್ಯೆ ಪ್ರಕಾರ, 2009ರಿಂದ 2012ರ ಅವಧಿಯಲ್ಲಿ 707 ಮಹಿಳೆಯರು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳ ನಂತರ ಸಾವನ್ನಪ್ಪಿದ್ದಾರೆ. ಅಂದರೆ ಪ್ರತಿವರ್ಷ 176 ಸಾವುಗಳು. ಪ್ರತಿ ತಿಂಗಳು 15 ಮಹಿಳೆಯರು ಸಾಯುತ್ತಿದ್ದಾರೆ. ಹೀಗಿದ್ದೂ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳಿಗೆ ಸರ್ಕಾರ ಆದ್ಯತೆ ನೀಡುತ್ತಿರುವುದು ವಿಪರ್ಯಾಸ. ಪ್ರಜನನ ಆರೋಗ್ಯ ಹಾಗೂ ತಾಯಿ, ಮಗು, ಹದಿಹರೆಯದ ಮಕ್ಕಳ ಆರೋಗ್ಯ ಕುರಿತಾದ ಸಹಸ್ರಮಾನದ ಅಭಿವೃದ್ಧಿ ಗುರಿಯನ್ನು 2020ರೊಳಗೆ ಸಾಧಿಸುವುದಕ್ಕಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಆದ್ಯತೆ ನೀಡಲು ಸರ್ಕಾರ ಮುಂದಾಗಿದೆ.
ಈ ಬಗ್ಗೆ ಕಳೆದ ಅ. 11ರಂದು ಕೆಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕ್ಷೇಮಾಭಿವೃದ್ಧಿ ಸಚಿವಾಲಯ ಬರೆದಿರುವ ಪತ್ರದಲ್ಲಿ ಇದು ಸುವ್ಯಕ್ತ. ಈ ಪತ್ರದ ಪ್ರಕಾರ, ಸಂತಾನಶಕ್ತಿ ಹರಣ ಪ್ರಕ್ರಿಯೆಯಲ್ಲಿ ಒಳಗೊಳ್ಳುವ ಎಲ್ಲರಿಗೂ ಪರಿಹಾರ ಮೊತ್ತವನ್ನು ಹೆಚ್ಚಿಸಲಾಗಿದೆ. ಕುಟುಂಬ ಯೋಜನೆಯ ಇತರ ಕ್ರಮಗಳ ಬಳಕೆಗಿಂತ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳಿಗೇ ಹೆಚ್ಚು ಒತ್ತು ನೀಡಿರುವುದು ಸ್ಪಷ್ಟ. ಅನೇಕ ಆರೋಗ್ಯ ಕಾರ್ಯಕರ್ತರು, ವೈದ್ಯರಿಗೆ ಹೇಗಾದರಾಗಲಿ ಸರ್ಕಾರ ನಿಗದಿ ಪಡಿಸಿದ ಗುರಿಗಳನ್ನು ಮುಟ್ಟುವ ತವಕ.
ಈ ಧಾವಂತದಲ್ಲಿ ಸುರಕ್ಷತೆಯ ವಿಚಾರ ಗೌಣವಾಗಿ ಬಿಡುತ್ತದೆ. ಶಸ್ತ್ರಕ್ರಿಯೆಗೊಳಗಾಗುವ ಬಡ ಮಹಿಳೆಯರಿಗೆ ಪ್ರೋತ್ಸಾಹಧನ ರೂಪದಲ್ಲಿ ಹಣ ನೀಡಿ ಕೈತೊಳೆದುಕೊಳ್ಳಲಾಗುತ್ತದೆ ಎಂಬುದು ಈ ದುರಂತದ ವ್ಯಂಗ್ಯ. ಛತ್ತೀಸಗಡದ ಶಿಬಿರಗಳಲ್ಲಿ ಪಾಲ್ಗೊಂಡಿದ್ದವರಿಗೂ ₨ 1,400 ನೀಡಲಾಗಿತ್ತು. ಸಾಮಾನ್ಯವಾಗಿ ಸಂತಾನಶಕ್ತಿ ಹರಣ ಶಸ್ತ್ರ ಕ್ರಿಯೆಗಳಿಗಾಗಿ ರಾಜ್ಯ ಸರ್ಕಾರಗಳಿಗೆ ಗುರಿ ನಿಗದಿಪಡಿಸಲಾಗುತ್ತದೆ. ಇದಕ್ಕಾಗಿ ಸಾರ್ವಜನಿಕ ಶಿಬಿರದ ಪರಿಕಲ್ಪನೆ ಸೃಷ್ಟಿಯಾಗಿದೆ. ಇದರಲ್ಲಿ ಕೆಲವೇ ಗಂಟೆಗಳಲ್ಲಿ ಡಜನ್ಗಟ್ಟಲೆ ಶಸ್ತ್ರಕ್ರಿಯೆಗಳನ್ನು ವೈದ್ಯರು ಮಾಡಿಮುಗಿಸುವುದು ಮಾಮೂಲು. ಆದರೆ ಈ ಕ್ರಮ ಎಷ್ಟು ಸರಿ? 1990ರ ದಶಕದಲ್ಲೇ ಈ ವಿಚಾರವನ್ನು ಪ್ರಶ್ನೆಗೆ ಒಳಪಡಿಸಲಾಗಿತ್ತು. ವಾಸ್ತವವಾಗಿ ಜನಸಂಖ್ಯೆ ನಿಯಂತ್ರಣ ಕುರಿತ ಚರ್ಚೆಯ ಗತಿ ಪೂರ್ಣ ಬದಲಾದದ್ದೇ ಆಗ.
1994ರಲ್ಲಿ ಕೈರೊದಲ್ಲಿ ನಡೆದ ಜನಸಂಖ್ಯೆ ಹಾಗೂ ಅಭಿವೃದ್ಧಿ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ (ಐಸಿಪಿಡಿ) ಇದಕ್ಕೆ ಕಾರಣ. ಜನಸಂಖ್ಯೆ ಕುರಿತ ಯಾವುದೇ ಕಾರ್ಯಕ್ರಮದಲ್ಲಿ ಮಹಿಳಾ ಹಕ್ಕುಗಳು ಅಗತ್ಯವಾದ ಅಂಶ ಎಂಬುದನ್ನು ಇದು ಎತ್ತಿ ಹಿಡಿದಿತ್ತು. ‘ಜನಸಂಖ್ಯೆಯ ನಿಯಂತ್ರಣ’ ನುಡಿಗಟ್ಟಿಗೆ ಬದಲಾಗಿ ಕುಟುಂಬ ಕಲ್ಯಾಣ, ಪ್ರಜನನ ಆರೋಗ್ಯ ಹಾಗೂ ಹಕ್ಕುಗಳು ಎಂಬಂತಹ ಮಾತುಗಳು ಆಗ ಚಾಲ್ತಿಗೆ ಬಂದವು. ಐಸಿಪಿಡಿ ನಿರ್ಣಯಗಳಿಗೆ ಭಾರತವೂ ಸಹಿ ಹಾಕಿದೆ. ಹೀಗಿದ್ದೂ ರಾಷ್ಟ್ರದ ಹಲವು ರಾಜ್ಯಗಳಲ್ಲಿ ಅಸ್ತಿತ್ವಕ್ಕೆ ಬಂದಿರುವ ಜನಸಂಖ್ಯಾ ನೀತಿಗಳು, ಐಸಿಪಿಡಿಗೆ ಭಾರತ ಹೊಂದಿರುವ ಬದ್ಧತೆಗಳಿಗೆ ವ್ಯತಿರಿಕ್ತವಾಗಿಯೇ ಇವೆ ಎಂಬುದು ವಿಪರ್ಯಾಸ.
ಪ್ರತಿವರ್ಷ ಭಾರತದಲ್ಲಿ 46 ಲಕ್ಷ ಮಹಿಳೆಯರು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಡುತ್ತಾರೆ.
ಉಚಿತ ವೈದ್ಯಕೀಯ ಶಿಬಿರಗಳಿಂದಾಗಿ ಭಾರತದ ಬಡ ಮಹಿಳೆಯರಿಗೆ ಇದು ತಕ್ಷಣದ ಹಾಗೂ ಸುಲಭದ ವಿಧಾನ ಎಂಬುದೇನೊ ಸರಿ. ಆದರೆ ಎಷ್ಟು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಯಿತು ಎಂದು ಲೆಕ್ಕಹಾಕುತ್ತಾ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೂ ಬಹುಮಾನ ನೀಡುವ ಪದ್ಧತಿ ನಿರ್ಲಕ್ಷ್ಯಗಳಿಗೆ ಕಾರಣವಾಗುತ್ತಿದೆ. ನೈತಿಕತೆಯನ್ನೂ ಕುಗ್ಗಿಸುತ್ತಿದೆ. ಹೆಚ್ಚಿನ ಸಂಖ್ಯೆಗಳ ಗುರಿ ಸಾಧನೆಯ ಭರದಲ್ಲಿ ಆರೈಕೆಯ ಗುಣಮಟ್ಟ ತೀವ್ರತರದಲ್ಲಿ ತಗ್ಗುತ್ತದೆ. ಬೇರೆ ಆಯ್ಕೆಗಳಿಲ್ಲದಿದ್ದಲ್ಲಿ ಸಂತಾನಶಕ್ತಿಹರಣಕ್ಕೆ ಒಳಪಡುವುದು ಅನಿವಾರ್ಯ ಆಯ್ಕೆಯಾಗುತ್ತದೆ. ಇನ್ನೇನು ಗತಿ ಇಲ್ಲದಿದ್ದಾಗ ಮಹಿಳೆಗದು ಬಲವಂತದ ಅನಿವಾರ್ಯ ಆಯ್ಕೆಯಾಗುತ್ತದೆ.
2001ರ ವಿಶ್ವಸಂಸ್ಥೆ ವರದಿಯ ಪ್ರಕಾರ, ವಿಶ್ವದಲ್ಲಿ ನಡೆಯುವ ಮಹಿಳೆಯರ ಸಂತಾನಶಕ್ತಿ ಹರಣ ಚಿಕಿತ್ಸೆಗಳಲ್ಲಿ ಸುಮಾರು ಶೇ 37ರಷ್ಟು ಭಾರತದಲ್ಲೇ ನಡೆಯುತ್ತದೆ. ವಿಶ್ವದಲ್ಲೇ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಈ ಪ್ರಮಾಣ ಶೇ 28ರಷ್ಟಿದೆ.
ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿ ದೊಡ್ಡ ಕೋಲಾಹಲದ ಇತಿಹಾಸವೇ ಇದೆ. ಕುಟುಂಬ ಯೋಜನೆಯ ಅಧಿಕೃತ ಕಾರ್ಯಕ್ರಮ ವಿಶ್ವದಲ್ಲೇ ಮೊದಲ ಬಾರಿಗೆ ₨65 ಲಕ್ಷದ ಸಾಧಾರಣ ಬಜೆಟ್ನೊಂದಿಗೆ ಭಾರತದಲ್ಲಿ ಆರಂಭವಾದದ್ದು 1952ರಲ್ಲಿ. ಇದನ್ನು ಶುರು ಮಾಡಿದವರು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ.
ನಂತರ 60ರ ದಶಕದ ಉತ್ತರಾರ್ಧದಲ್ಲಿ ಆರೋಗ್ಯ ಸಚಿವಾಲಯದ ಅಡಿ ಪೂರ್ಣ ಪ್ರಮಾಣದ ಕುಟುಂಬ ಯೋಜನೆ ಇಲಾಖೆಯನ್ನು ಇಂದಿರಾ ಗಾಂಧಿ ರೂಪಿಸಿದರು. ಕಡೆಗೆ ಜನಸಂಖ್ಯೆ ನಿಯಂತ್ರಣ ಗುರಿಗಳನ್ನು ನಿಗದಿ ಪಡಿಸಿದ್ದು ಸಂಜಯ್ ಗಾಂಧಿ. ಜನನ ಪ್ರಮಾಣ ನಿಯಂತ್ರಣಕ್ಕೆ ಮೂಲಭೂತ ಹಕ್ಕುಗಳನ್ನು ಬಲಿಕೊಡಲೂ ಇಂದಿರಾ ಗಾಂಧಿ ಆಗ ಸಿದ್ಧರಾಗಿದ್ದರು. ಆ ಪರಿ ಭಾರತದ ಬೆಳೆಯುತ್ತಿರುವ ಜನಸಂಖ್ಯೆಯ ಬಗ್ಗೆ ಅವರು ಆತಂಕಗೊಂಡಿದ್ದರು.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರು ಮಾಡಿದ ಪ್ರಸಿದ್ಧ ಭಾಷಣದ ತುಣುಕುಗಳಿವು: “ನಾವೀಗ ನಿರ್ಣಾಯಕವಾಗಿ ಕ್ರಮ ಕೈಗೊಂಡು ಜನನ ಪ್ರಮಾಣವನ್ನು ತ್ವರಿತವಾಗಿ ಇಳಿಸಬೇಕಾಗಿದೆ. ತೀವ್ರತರ ಎಂದು ವಿವರಿಸಬಹುದಾದ ಕ್ರಮಗಳನ್ನು ಕೈಗೊಳ್ಳಲು ನಾವು ಹಿಂಜರಿಯಬಾರದು. ರಾಷ್ಟ್ರದ ಮಾನವ ಹಕ್ಕಗಳಿಗಾಗಿ ಕೆಲವೊಂದು ವೈಯಕ್ತಿಕ ಹಕ್ಕುಗಳನ್ನು ತಡೆ ಹಿಡಿಯಬೇಕಾಗುತ್ತದೆ ’’.
ಈ ಬಲವಾದ ಮಾತುಗಳ ನಂತರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಅವರ ಪುತ್ರ ಸಂಜಯ್ ಸಂತಾನಶಕ್ತಿಹರಣ ಕಾರ್ಯಕ್ರಮಗಳಲ್ಲಿ ಅಳವಡಿಸಿದ ಬಲಪ್ರಯೋಗ ದೊಡ್ಡ ವಿವಾದವಾಯಿತು. ಅವಿವಾಹಿತ ಪುರುಷ ಮತ್ತು ಮಹಿಳೆಯರೂ ಈ ಬಲಪ್ರಯೋಗದ ಕಾರ್ಯಕ್ರಮಕ್ಕೆ ಬಲಿಪಶುಗಳಾಗಬೇಕಾಯಿತು.
ನಂತರ ಈ ಕಹಿ ನೆನಪನ್ನು ವಿಸ್ಮೃತಿಗೆ ತಳ್ಳಲು ಕುಟುಂಬ ಯೋಜನೆ ಇಲಾಖೆಯ ಹೆಸರನ್ನು ಕುಟುಂಬ ಕ್ಷೇಮಾಭಿವೃದ್ಧಿ ಇಲಾಖೆ ಎಂದು ಬದಲಿಸಲಾಯಿತು. 2000ದ ಫೆಬ್ರುವರಿಯಲ್ಲಿ ಭಾರತ ಸರ್ಕಾರ ಬಿಡುಗಡೆ ಮಾಡಿದ ರಾಷ್ಟ್ರೀಯ ಜನಸಂಖ್ಯಾ ನೀತಿಯೂ (ಎನ್ಸಿಪಿ ) ಪ್ರಜನನ ಹಾಗೂ ಮಕ್ಕಳ ಆರೋಗ್ಯ (ಆರ್ಸಿಎಚ್) ನೀತಿಯನ್ನು ಒಳಗೊಂಡಿದೆ. ಸರ್ಕಾರ ನಿಗದಿಪಡಿಸಿದ ಜನಸಂಖ್ಯಾ ಗುರಿ ತಲುಪಲು ಯಾವುದೇ ಬಲಾತ್ಕಾರ ಕ್ರಮಗಳ ಬಳಕೆಯನ್ನು ಈ ನೀತಿಯೂ ನಿಷೇಧಿಸುತ್ತದೆ ಎಂಬುದನ್ನು ನಾವು ಗಮನಿಸಬೇಕು.
ಭಾರತದ ಜನಸಂಖ್ಯೆ 126 ಕೋಟಿ. ಈ ಜನಸಂಖ್ಯೆಗೆ ಪ್ರತಿ ತಿಂಗಳೂ ಸುಮಾರು 15 ಲಕ್ಷ ಶಿಶುಗಳು ಸೇರ್ಪಡೆಯಾಗುತ್ತಿವೆ. ಭಾರತದ ಒಟ್ಟು ಹೆರಿಗೆಯ ಪ್ರಮಾಣ (ಟೋಟಲ್ ಫರ್ಟಿಲಿಟಿ ರೇಟ್) ಈಗ ಶೇ 2.3ಕ್ಕೆ ತೀವ್ರತರವಾಗಿ ಇಳಿಮುಖವಾಗಿದೆ. ಹೀಗಿದ್ದೂ ಇದು ವಿಶ್ವದಲ್ಲಿ ಅತ್ಯಂತ ಹೆಚ್ಚಿನದು. ಜತೆಗೆ ಉತ್ತಮ ವೈದ್ಯಕೀಯ ಸೌಲಭ್ಯ ಹಾಗೂ ಆರೋಗ್ಯ ಕುರಿತ ಅರಿವಿನಿಂದ ಸಾವಿನ ಪ್ರಮಾಣ ಇಳಿಮುಖವಾಗಿದೆ. ಹೀಗೇ ಇದು ಮುಂದುವರಿದಲ್ಲಿ ಇನ್ನು 15 ವರ್ಷಗಳಿಗೂ ಕಡಿಮೆ ವರ್ಷದಲ್ಲಿ ಚೀನಾದ ಜನಸಂಖ್ಯೆಗಿಂತ ನಮ್ಮದೇ ಹೆಚ್ಚಾಗಲಿದೆ. ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ತಾನ, ಬಿಹಾರ ಹಾಗೂ ಛತ್ತೀಸಗಡದ ಜನಸಂಖ್ಯೆ ಭಾರತದ ಜನಸಂಖ್ಯೆಯ ಅರ್ಧದಷ್ಟಿದೆ.
‘ಡಿಜಿಟಲ್ ಇಂಡಿಯಾ’ದ ಕನಸು ಕಾಣುತ್ತಿರುವ ಭಾರತದ ಕಹಿ ವಾಸ್ತವಗಳಿವು. ಆದರೆ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಅನೇಕ ಮುಂದುವರಿದ ರಾಜ್ಯಗಳಲ್ಲಿ ಹೆರಿಗೆ ಪ್ರಮಾಣ ಕಡಿಮೆಯಾಗಿದೆ. ಇದರಿಂದಲೇ ವ್ಯಕ್ತವಾಗುತ್ತದೆ ಜನಸಂಖ್ಯಾ ನಿಯಂತ್ರಣಕ್ಕೂ ಕುಟುಂಬ ಯೋಜನೆಗೂ ಸಂಬಂಧವಿಲ್ಲ.
ಮಹಿಳಾ ಶಿಕ್ಷಣ ಹಾಗೂ ಮಹಿಳೆಯರ ಸಾಮಾಜಿಕ ಸ್ಥಾನಮಾನಗಳ ಸೂಚ್ಯಂಕಗಳಲ್ಲಿ ಪ್ರಗತಿ ತೋರಿರುವ ರಾಜ್ಯಗಳಲ್ಲಿ ಜನಸಂಖ್ಯೆ ತಾನಾಗೇ ಇಳಿಮುಖವಾಗುತ್ತದೆ. ಹೀಗಿದ್ದೂ ಮಹಿಳೆಯರ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗಳಿಗೆ ಸರ್ಕಾರ ಆದ್ಯತೆ ನೀಡುತ್ತಿರುವುದು ವಿಪರ್ಯಾಸ. ಅದರಲ್ಲೂ ಶೇ 99ರಷ್ಟು ಪ್ರಕರಣಗಳಲ್ಲಿ ಮಹಿಳೆಯರೇ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಗಿರುವುದು ನಮ್ಮ ನೀತಿಗಳ ಆದ್ಯತೆಯ ಅಸಮತೋಲನವನ್ನು ಸೂಚಿಸುತ್ತದೆ.
ಪುರುಷರ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ‘ವ್ಯಾಸೆಕ್ಟಮಿ’ ಸರಳವಾಗಿದ್ದರೂ ಆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸರ್ಕಾರದ ನೀತಿಗಳು ವಿಫಲವಾಗಿವೆ. ಜನಸಂಖ್ಯಾ ನಿಯಂತ್ರಣದ ಹೊಣೆಯನ್ನು ಪುರುಷರೂ ಹೊರಬೇಕೆಂದು ಸರ್ಕಾರದ ನೀತಿಗಳು ಒತ್ತಡ ಹೇರುವುದು ಕಡಿಮೆ. ಬೇಡದ ಮಗು ತೆಗೆಸಲು ಗರ್ಭಪಾತ ಮಾಡಿಸಿಕೊಳ್ಳಬೇಕಾದವಳು ಮಹಿಳೆ. ಹಾಗೆಯೇ ಮಕ್ಕಳ ಜನನದ ನಡುವೆ ಅಂತರ ಇಡಲು ವಂಕಿ, ಮಾತ್ರೆ ಅಥವಾ ಚುಚ್ಚುಮದ್ದುಗಳಂತಹ ತಾತ್ಕಾಲಿಕ ವಿಧಾನಗಳಿಗೂ ಹೆಣ್ಣಿನ ದೇಹವೇ ಗುರಿ. ಆದರೆ ಈ ಯಾವ ಆಯ್ಕೆಗಳೂ ಅವಳವಾಗಿರುವುದಿಲ್ಲ.
ಆಕೆಯ ಕುಟುಂಬ, ಸಮಾಜ ಅಥವಾ ಸರ್ಕಾರ ಸೃಷ್ಟಿಸುವ ಒತ್ತಡಗಳಿಂದಾಗಿ ಈ ಆಯ್ಕೆಗಳನ್ನು ಅವಳ ಮೇಲೆ ಹೇರಲಾಗುತ್ತದೆ. ಕಾಂಡೊಂ ಬಳಕೆ ಬಗ್ಗೆ ಪುರುಷನಿಗೆ ಒತ್ತಾಯಿಸುವ ಅಧಿಕಾರಯುತ ಸಂಬಂಧ ಮಹಿಳೆಗೆ ಇರುವುದಿಲ್ಲ. ಆದರೆ ಮಹಿಳೆಯ ಆಯ್ಕೆ ಹಕ್ಕುಗಳನ್ನು ನಿರಾಕರಿಸುವ ಸರ್ಕಾರದ ಒತ್ತಡದ ನೀತಿಗಳು ಪರಿಣಾಮಕಾರಿಯಾಗುವುದು ಸಾಧ್ಯವಿಲ್ಲ. ಇವು ಲಿಂಗ ಆಯ್ಕೆ, ಲಿಂಗ ಆಯ್ಕೆಯ ಗರ್ಭಪಾತಗಳಿಗೆ ಉತ್ತೇಜನ ನೀಡುವಂತಾಗಬಹುದು. ಏಕೆಂದರೆ ಇಬ್ಬರೇ ಮಕ್ಕಳನ್ನು ಹೊಂದಬೇಕು ಎಂದಾದಲ್ಲಿ ಇಬ್ಬರು ಮಕ್ಕಳೂ ಹೆಣ್ಣಾಗಿರುವುದನ್ನು ಬಹುತೇಕ ಭಾರತೀಯರು ಬಯಸುವುದಿಲ್ಲ.
ಸಹಜವಾಗಿಯೇ ಲಿಂಗ ಆಯ್ಕೆಯ ಗರ್ಭಪಾತ ಹೆಚ್ಚಾಗುತ್ತದೆ. ಜೊತೆಗೆ ಹುಟ್ಟಿದ ಮಕ್ಕಳೆಲ್ಲಾ ಬದುಕುತ್ತವೆಯೇ ಎಂಬುದೂ ಇಲ್ಲಿ ಮುಖ್ಯವಾದ ಸಂಗತಿ. ಏಕೆಂದರೆ ಈಗಲೂ ಅನೇಕ ಹೆರಿಗೆಗಳು ಮನೆಗಳಲ್ಲೇ ಆಗುತ್ತವೆ. ಹೆರಿಗೆಗಳಲ್ಲಿ ಮಹಿಳೆಯರು ಸಾಯುವುದನ್ನು ಇನ್ನೂ ತಪ್ಪಿಸಲಾಗಿಲ್ಲ. ಇವೆಲ್ಲವನ್ನು ಬದಲಾಯಿಸಲು ಕುಟುಂಬದೊಳಗೆ ಪರಸ್ಪರ ಸಂಬಂಧಗಳ ರೀತಿ ಬದಲಾಗಬೇಕು. ಇದು ಸಾಧ್ಯವಾಗಬೇಕಾದರೆ ಮಹಿಳೆಯರ ಅಭಿವೃದ್ಧಿ, ಸಬಲೀಕರಣ ಸಾಧ್ಯವಾಗಬೇಕು. ಇಂತಹ ದೃಷ್ಟಿಯನ್ನು ಸರ್ಕಾರ ತನ್ನ ನೀತಿಗಳಲ್ಲಿ ಅಳವಡಿಸಿಕೊಂಡಲ್ಲಿ ಚಿಕ್ಕ ಕುಟುಂಬದ ಆಶಯ ತಾನಾಗೇ ಈಡೇರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ನೀತಿಗಳನ್ನು ರೂಪಿಸಲಿ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.