ಶಾಲೆಯಲ್ಲಿ ಗೋದಾ ಮನಸ್ಸಿಟ್ಟು ತನ್ನ ಶಿಕ್ಷಕಿ ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದಳು. ಅವರು ಹೇಳುತ್ತಿದ್ದ ವಿಷಯವೇ ಹಾಗಿತ್ತು. ತನ್ನ ಶಿಕ್ಷಕಿ ಅಷ್ಟೊಂದು ವಿಷಯಗಳನ್ನು ಹೇಗೆ ತಿಳಿದುಕೊಂಡಿದ್ದಾರೆ ಎಂದು ಆಕೆಗೆ ಆಶ್ಚರ್ಯವಾಗುತ್ತಿತ್ತು. ತರಗತಿ ಮುಗಿದ ಮೇಲೆ ಅವರನ್ನು ಕೇಳಿಯೇ ಬಿಟ್ಟಳು, ‘ಮಿಸ್, ನಿಮಗೆ ಇಷ್ಟೊಂದು ವಿಷಯ ಹೇಗೆ ತಿಳಿದಿದೆ?’ ಆಕೆ ನಕ್ಕು ಹೇಳಿದರು, ‘ಗೋದಾ, ನನಗೆ ತಿಳಿದದ್ದು ತುಂಬ ಕಡಿಮೆ. ನನ್ನ ಪ್ರೊಫೆಸರ್ ಒಬ್ಬರಿದ್ದಾರೆ.
ಅವರ ಜ್ಞಾನ ಬಹಳ ದೊಡ್ಡದು.’ ‘ಜ್ಞಾನ ಎಂದರೆ ಏನು ಮಿಸ್?’ ಕೇಳಿದಳು ಗೋದಾ. ‘ಜ್ಞಾನ ಅಂದರೆ ಬಹಳ ತಿಳಿವಳಿಕೆ. ತುಂಬ ವಿಷಯ ತಿಳಿದಿರಬೇಕು. ಆ ವಿಷಯದ ಸಮಗ್ರ ಅರ್ಥ ಗೊತ್ತಾಗಿರಬೇಕು. ಅದನ್ನು ಬೇಕಾದಾಗ ಬಳಸಲು ಬರುವಂತಿರಬೇಕು...’ ಮಿಸ್ ಹೇಳುತ್ತಲೇ ಇದ್ದರು. ಗೋದಾಗೆ ಯಾವುದೂ ಅರ್ಥವಾಗಲಿಲ್ಲ. ಆದರೆ ತಾನು ಜ್ಞಾನವನ್ನು ಪಡೆಯಬೇಕೆಂಬ ವಿಚಾರ ಆಕೆಯಲ್ಲಿ ಗಟ್ಟಿಯಾಯಿತು.
ಮನೆಗೆ ಬಂದವಳೇ ತಾಯಿಯನ್ನು ಕೇಳಿದಳು ಗೋದಾ, ‘ಅಮ್ಮಾ ಜ್ಞಾನ ಎಂದರೇನು? ಅದು ಹೇಗೆ ಆಗುತ್ತದೆ? ನಮ್ಮ ಮಿಸ್ ಏನೇನೋ ಹೇಳಿದರು, ನನಗೆ ತಿಳಿಯಲೇ ಇಲ್ಲ’. ಅಮ್ಮ ಒಂದು ಕ್ಷಣ ಚಿಂತಿಸಿದರು. ಈ ಪುಟ್ಟ ಹುಡುಗಿಗೆ ಜ್ಞಾನ ಎಂಬುದನ್ನು ಹೇಗೆ ತಿಳಿಸುವುದು? ಗೋದಾಳ ಕೈ ಹಿಡಿದು ನಿಧಾನವಾಗಿ ಕರೆದುಕೊಂಡು ಮನೆಯ ಮುಂದಿನ ಮರದ ಬಳಿಗೆ ಹೋದರು. ಇಬ್ಬರೂ ಮರದ ಕೆಳಗೆ ಕುಳಿತರು. ತಾಯಿ ಕೇಳಿದರು, ‘ಗೋದಾ ನಿನಗೆ
ನಾಲ್ಕು ಒಣಗಿದ ಕೊಬ್ಬರಿ ಬಟ್ಟಲನ್ನು ಬರಿಬಾಯಿಯಿಂದ ತಿನ್ನಲಾಗುತ್ತದೆಯೇ?’ ‘ಇಲ್ಲಮ್ಮ ಬರೀ ಒಣಗಿದ ಕೊಬ್ಬರಿ ಹೇಗೆ ತಿನ್ನುವುದು?’. ‘ಹೋಗಲಿ ಬಿಡು, ಎರಡು ಬಟ್ಟಲು ಸಕ್ಕರೆ ಹಾಗೇ ತಿನ್ನುತ್ತೀಯಾ?’. ‘ಸಾಧ್ಯವೇ ಇಲ್ಲ. ಬರೀ ಸಕ್ಕರೆ ಹೇಗೆ ತಿನ್ನುವುದು?’ ಕೇಳಿದಳು ಗೋದಾ. ‘ಹಾಗಾದರೆ ಒಂದು ಬಟ್ಟಲು ಯಾಲಕ್ಕಿ ಪುಡಿ ತಿನ್ನಬಹುದೇ?’, ‘ಏನಮ್ಮಾ ಇದು? ನಾನು ಕೇಳಿದ್ದೇನು, ನೀನು ಹೇಳುವುದೇನು?’ ಗೊಣಗಿದಳು ಗೋದಾ. ‘ಇರಲಿ ಹೇಳೇ. ನಾಲ್ಕು ಬಟ್ಟಲು ಗೋಡಂಬಿ ತಿನ್ನುತ್ತೀಯಾ?’. ಇಲ್ಲವೇ ಎರಡು ಚಮಚೆ ಆಹಾರಕ್ಕೆ ಹಾಕುವ ಸುವಾಸನೆ ಅದೇ ಎಸೆನ್ಸ್ ಕುಡಿಯುತ್ತೀಯಾ?’ ಮತ್ತೆ ಕೇಳಿದರು ತಾಯಿ. ‘ಇಲ್ಲ, ಇಲ್ಲ, ಇಲ್ಲ. ಇದಾವುದೂ ಸಾಧ್ಯವಿಲ್ಲ’. ಖಡಾಖಂಡಿತವಾಗಿ ಹೇಳಿದಳು ಗೋದಾ. ತಾಯಿ ಗೋದಾಳ ಬೆನ್ನು ತಟ್ಟಿ, ನಕ್ಕು ಹೇಳಿದರು, ‘ಈಗ ಹೇಳು ಪುಟ್ಟಾ, ಮೇಲೆ ಹೇಳಿದ ಎಲ್ಲ ವಸ್ತುಗಳನ್ನು ಸರಿಯಾದ ಪ್ರಮಾಣದಲ್ಲಿ ಹಾಕಿ ಅದರೊಂದಿಗೆ ನನ್ನ ಪ್ರೀತಿಯನ್ನು ತುಂಬಿ ಮಾಡಿದ ಕೊಬ್ಬರಿ ಮಿಠಾಯಿ ತಿನ್ನುತ್ತೀಯಾ?’. ‘
ಓಹೋ, ಖಂಡಿತ ತಿನ್ನುತ್ತೇನೆ. ನನಗದು ಬಹಳ ಇಷ್ಟ’ ಎಂದು ಅದನ್ನು ನೆನೆದು ಬಾಯಿ ಚಪ್ಪರಿಸಿದಳು ಗೋದಾ. ತಾಯಿ ಮುಂದುವರೆಸಿದರು. ‘ಮಗೂ ಈ ಕೊಬ್ಬರಿ ಮಿಠಾಯಿಯೇ ಜ್ಞಾನ. ಅದು ಯಾವುದೇ ಒಂದರಿಂದ ಆಗುವುದಿಲ್ಲ. ಕೊಬ್ಬರಿ ಎಂದರೆ ವಿಷಯ ಸಂಗ್ರಹಣೆ ಇದ್ದ ಹಾಗೆ. ಸಂಗ್ರಹಿಸಿದ ವಿಷಯದೊಂದಿಗೆ ನಮ್ಮ ಬುದ್ಧಿಮತ್ತೆ ಎಂಬ ಸಕ್ಕರೆ ಸೇರಬೇಕು. ಅದಕ್ಕೆ ಏಲಕ್ಕಿ ಎಂಬ ಅನುಭವ ಸೇರಬೇಕು. ಇಷ್ಟೆ ಸಾಲದು, ಸೃಜನಶೀಲತೆ ಎಂಬ ಗೋಡಂಬಿ ಹಾಕಬೇಕು. ಇದರೊಂದಿಗೆ ಸಾಮಾನ್ಯ ಜ್ಞಾನವೆಂಬ ಸರಿಯಾದ ಪ್ರಮಾಣದಲ್ಲಿ ಮಿಶ್ರಣಮಾಡಿ, ಜೀವನೋತ್ಸಾಹವೆಂಬ ಹದದಲ್ಲಿ ಪಾಕಮಾಡಿ, ಮಿತವಾದ ಮಾತು ಎಂಬ ಆಕಾರದಲ್ಲಿ ಕತ್ತರಿಸಿ ಇಟ್ಟರೆ ಅದು ತಿನ್ನಲು ತುಂಬ ರುಚಿಯಾಗಿರುತ್ತದೆ.
ಒಂದೊಂದು ವಸ್ತುವಿಗೆ ಒಂದೊಂದು ರೂಪ, ಆಕಾರ ಮತ್ತು ರುಚಿ. ಆದರೆ, ಅವೆಲ್ಲವೂ ಸರಿಯಾದ ರೀತಿಯಲ್ಲಿ ಬೆರೆತಾಗ ಜ್ಞಾನ ನಮ್ಮ ಬದುಕಿನಲ್ಲಿ ತುಂಬುತ್ತದೆ’. ಗೋದಾಳಿಗೆ ಈ ಮಾತು ಎಷ್ಟು ಅರ್ಥವಾಯಿತೋ ತಿಳಿಯದು. ಆದರೆ ಈ ಮಾತು ನಮಗೆಲ್ಲ ತುಂಬ ಪ್ರಯೋಜನಕಾರಿಯಾದದ್ದು. ವಿಷಯ ಸಂಗ್ರಹಣೆ, ಬುದ್ಧಿಮತ್ತೆ, ಅನುಭವ, ಜೀವನೋತ್ಸಾಹ ಸೃಜನಶೀಲತೆ, ಸಾಮಾನ್ಯ ಜ್ಞಾನಗಳೊಂದಿಗೆ ಸೊಗಸಾಗಿ ಮಾತನಾಡುವ ಕಲೆ ಎಲ್ಲವೂ ಹದವಾಗಿ ಬೆರೆತಾಗ ನಮಗೆ ಜ್ಞಾನದ ಅನುಭವವಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.