ಸಂಸಾರ ಮತ್ತು ಕಚೇರಿಯ ದ್ವಿಮುಖ ಹೊರೆಯನ್ನು ಸರಿದೂಗಿಸಲಾಗದೆ ಮಹಿಳೆ ಅನುಭವಿಸುವ ತಪ್ಪಿತಸ್ಥ ಭಾವನೆಯ ಕುರಿತಾದ ಚರ್ಚೆಗೆ ಮತ್ತೊಮ್ಮೆ ಚಾಲನೆ ಸಿಕ್ಕಿದೆ.
ಜಾಗತಿಕ ಮಟ್ಟದಲ್ಲಿ ಮಹಿಳಾ ಚಳವಳಿ ಕುಡಿಯೊಡೆದು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಂದಿದೆ. ಈ ಚಳವಳಿ ತಂದ ಹೊಸ ಅರಿವು, ಪ್ರಜ್ಞೆಯಿಂದಾಗಿ ಇಂದು ಅನೇಕ ಮಹಿಳೆಯರು ವೃತ್ತಿ ಬದುಕುಗಳಲ್ಲಿ ಸಾಧನೆಗಳ ಶಿಖರಗಳೇರಿದ್ದಾರೆ. ಹೀಗಿದ್ದೂ ಆಕೆ ಸರ್ವ ಸಂತೃಪ್ತೆಯಲ್ಲ. ಪುರುಷರೂ ಈ ಸಂತೃಪ್ತ ಭಾವನೆ ಹೊಂದುವುದು ಸಾಧ್ಯವಿಲ್ಲ. ಆದರೆ ಸಂಸಾರದ ಕಾಳಜಿ, ತಾಯ್ತನದ ಜವಾಬ್ದಾರಿಗಳ ನಿರ್ವಹಣೆ ಕುರಿತಂತೆ ಮನದ ಮೂಲೆಯಲ್ಲೆಲ್ಲೋ ಕುಟುಕುವ ತಪ್ಪಿತಸ್ಥ ಪ್ರಜ್ಞೆ ಮಹಿಳೆಗೇ ಸೀಮಿತ. ಇಂತಹ ತಪ್ಪಿತಸ್ಥ ಪ್ರಜ್ಞೆಯಿಂದ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆ, ಪೆಪ್ಸಿಕೊ ಕಂಪೆನಿ ಸಿಇಓ ಇಂದ್ರಾ ನೂಯಿ ಕೂಡ ಹೊರಬರುವುದು ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿಯಾದರೂ ವಾಸ್ತವ.
‘ಕಚೇರಿ ಮತ್ತು ಕುಟುಂಬ ಎರಡರಲ್ಲೂ ಯಶಸ್ಸು ಸಾಧಿಸುವುದು ಕಷ್ಟ. ಸಾಧಿಸಿದ್ದೇವೆಂದು ನಟಿಸುತ್ತೇವಷ್ಟೇ. ತಾಯಿಯಾಗಿ ಕರ್ತವ್ಯವನ್ನು ಪೂರ್ಣಪ್ರಮಾಣದಲ್ಲಿ ಪಾಲಿಸಲಾಗಲಿಲ್ಲ ಎಂಬಂಥ ತಪ್ಪಿತಸ್ಥ ಭಾವನೆ ನನಗೆ ಕಾಡುತ್ತಲೇ ಇದೆ. ಆದರೆ ಆ ತಪ್ಪಿತಸ್ಥ ಭಾವನೆಯನ್ನು ಕಡಿಮೆ ಮಾಡಿಕೊಳ್ಳುವುದನ್ನು ಕಲಿತಿದ್ದೇನೆ’ ಎಂದು ಕೊಲರಾಡೊದಲ್ಲಿ ನಡೆದ ಆಸ್ಪೆನ್ ಐಡಿಯಾಸ್ ಫೆಸ್ಟಿವಲ್ ನಲ್ಲಿ ಡೇವಿಡ್ ಬ್ರಾಡ್ಲೆ ಅವರಿಗೆ ನೀಡಿದ ಸಂದರ್ಶನದಲ್ಲಿ ಇಬ್ಬರು ಹೆಣ್ಣುಮಕ್ಕಳ ತಾಯಿಯಾದ ಇಂದ್ರಾ ನೂಯಿ ಹೇಳಿ
ಕೊಂಡಿದ್ದಾರೆ.
ಪೆಪ್ಸಿಕೊ ಮುಖ್ಯಸ್ಥೆಯಾಗಿ ನೇಮಕಗೊಂಡ ಸಂದರ್ಭದಲ್ಲಿ ಆ ಸುದ್ದಿಯನ್ನು ಮನೆಯವರ ಜೊತೆ ಹಂಚಿಕೊಳ್ಳುವ ಕಾತುರತೆಯಲ್ಲಿ ರಾತ್ರಿ 10 ಗಂಟೆಗೆ ಮನೆಗೆ ಬಂದಾಗ ಅವರ ಅಮ್ಮ ತೋರಿದ ತಣ್ಣನೆಯ ಪ್ರತಿಕ್ರಿಯೆ ಬಗ್ಗೆಯಂತೂ ತೀವ್ರ ಚರ್ಚೆಗಳೇ ನಡೆದಿವೆ. ‘ನಿನ್ನ ಸುದ್ದಿ ಇರಲಿ, ಮನೆಯಲ್ಲಿ ಹಾಲು ಮುಗಿದಿದೆ. ಮೊದಲು ಹಾಲು ತೆಗೆದುಕೊಂಡು ಬಾ’ ಎಂಬುದು ಅಮ್ಮನ ಆದೇಶವಾಗಿತ್ತೆಂದು ಇಂದ್ರಾ ನೂಯಿ ಸ್ಮರಿಸಿಕೊಂಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಪತಿ ನೂಯಿ ಮನೆಗೆ ಬಂದಾಗಿರುತ್ತದೆ. ‘ಹಾಲು ತರಲು ಪತಿಗೆ ಏಕೆ ಹೇಳಲಿಲ್ಲ’ ಎಂದರೆ ‘ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ’ ಎಂಬುದು ಅಮ್ಮನ ಉತ್ತರವಾಗಿರುತ್ತದೆ.
‘ವೃತ್ತಿ ಬದುಕಿನ ಕಿರೀಟವನ್ನು ಗರಾಜ್ ನಲ್ಲೇ ಇಟ್ಟು ಬಾ. ಮನೆಯೊಳಗೆ ಪ್ರವೇಶಿಸಿದ ಕ್ಷಣ ನೀನೊಬ್ಬಳು ಪತ್ನಿ, ಸೊಸೆ, ಮಗಳು, ತಾಯಿ ಅಷ್ಟೆ. ಆ ಸ್ಥಾನವನ್ನು ಬೇರಾರೂ ಪಡೆದುಕೊಳ್ಳಲಾರರು’ ಎಂಬ ಅವರ ಬುದ್ಧಿವಾದ ತಲತಲಾಂತರಗಳಿಂದ ಹೆಣ್ಣುಮಕ್ಕಳು ಕೇಳಿಸಿಕೊಂಡು ಬಂದ ಸತಿಧರ್ಮದ ಮಾತುಗಳೇ ಆಗಿವೆ.
ದಶಕ ದಶಕಗಳಿಂದ ಮನೆ ಹೊರಗೆ ಮಹಿಳೆ ದುಡಿಯುತ್ತಿದ್ದರೂ ಮನೆಯೊಳಗೆ ಬದಲಾಗದ ಸಂಬಂಧಗಳ ಸಮೀಕರಣಗಳ ಸಮಸ್ಯೆ ಇದು. ಅನೇಕ ಯಶಸ್ವಿ ಮಹಿಳೆಯರು ಅವಿವಾಹಿತರಾಗಿಯೇ ಉಳಿಯಲು ಅಥವಾ ಮಕ್ಕಳನ್ನು ಹೊಂದಿಲ್ಲದಿರುವುದಕ್ಕೆ ಇದೂ ಒಂದು ಕಾರಣ.
ಮಹಿಳೆಯಾಗಿರುವ ಕಾರಣಕ್ಕಾಗಿಯೇ, ಕಚೇರಿಯಲ್ಲೂ ತನ್ನ ಸಾಮರ್ಥ್ಯವನ್ನು ಮಹಿಳೆ ಪದೇ ಪದೇ ಸಾಬೀತುಪಡಿಸುತ್ತಲೇ ಇರಬೇಕು. ವೃತ್ತಿಯಲ್ಲಿ ಮೇಲೇರಲು ಇದು ಅಗತ್ಯ. ಹಲವು ಪೂರ್ವಗ್ರಹಗಳ ಅಡ್ಡಿಗಳನ್ನು ದಾಟಿಬರುವ ಅನಿವಾರ್ಯತೆ ಇರುತ್ತದೆ ಎಂಬುದು ಅನೇಕ ಮಹಿಳೆಯರ ಅನುಭವ. ಇಂತಹ ಒತ್ತಡಗಳಲ್ಲಿ ಮಹಿಳೆಯ ಜೈವಿಕತೆಯೂ ಅವಳಿಗೆ ವಿರುದ್ಧವಾಗಿರುತ್ತದೆ. ತಾಯ್ತನವನ್ನು ಎಷ್ಟು ವರ್ಷಗಳವರೆಗೆ ತಾನೆ ಮುಂದೂಡಬಹುದು?
ಆದರೆ ಕಳೆದ ಮೂರು ದಶಕಗಳಲ್ಲಿ ಬಹು ದೊಡ್ಡ ಬದಲಾವಣೆಗೆ ಭಾರತ ಸಾಕ್ಷಿಯಾಗಿದೆ ಎಂಬುದನ್ನು ನಾವು ಮರೆಯುವಂತಿಲ್ಲ. ಔದ್ಯೋಗಿಕ ರಂಗಗಳಲ್ಲಿ ಮಹಿಳೆಯರು ಹೆಚ್ಚಿನ ಪ್ರಾಮುಖ್ಯ ಗಳಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸಾಮಾಜಿಕ ಸಂರಚನೆ, ಲಿಂಗತ್ವ ಸಂಬಂಧಗಳಲ್ಲಿ ಕೆಲವೊಂದು ಬದಲಾವಣೆಗಳೂ ಆಗಿವೆ. ಕಚೇರಿ–ಕುಟುಂಬದ ಸಮತೋಲನ ಸಾಧಿಸಲು ಏಕಕಾಲದಲ್ಲಿ ಬಹುಕಾರ್ಯಗಳನ್ನು ನಿಭಾಯಿಸುವ (ಮಲ್ಟಿ ಟಾಸ್ಕಿಂಗ್) ‘ಸೂಪರ್ ವುಮನ್’ ಪರಿಕಲ್ಪನೆ ಈ ಅವಧಿಯಲ್ಲಿ ದೊಡ್ಡದಾಗೇ ಬೆಳೆದಿದೆ. ಸೂಪರ್ ವುಮನ್, ಸೂಪರ್ ಮಾಮ್ ಪಾತ್ರಗಳನ್ನು ನಿಭಾಯಿಸುತ್ತಾ ಬಸವಳಿಯುವ ಅನೇಕ ಮಹಿಳೆಯರು, ಸಂಸಾರವನ್ನು ಬೆಚ್ಚಗಿಡುವ ‘ಪತ್ನಿ’ಯೊಬ್ಬಳು ತಮಗೂ ಇದ್ದಿದ್ದರೆ ಎಂದು ಎಷ್ಟೋ ಸಲ ತಮ್ಮತಮ್ಮಲ್ಲಿ ಮಾತಾಡಿಕೊಳ್ಳುವುದುಂಟು. ಇಂತಹ ಭಾವನೆಗಳಿಗೆ ಧ್ವನಿ ನೀಡಿಯೇ 1971ರಲ್ಲಿ ಜೂಡಿ ಬ್ರಾಡಿ ಅವರು ‘ನನಗೊಬ್ಬಳು ಹೆಂಡತಿ ಬೇಕು’ ಎಂಬಂಥ ವಿಡಂಬನೆಯೊಂದನ್ನು ಬರೆದಿದ್ದರು.
ಸಾಮಾನ್ಯವಾಗಿ ವೈವಾಹಿಕ ಬದುಕು ಪುರುಷನಿಗೆ ಉದ್ಯೋಗ ಹಾಗೂ ಸಾಂಸಾರಿಕ ಬದುಕಲ್ಲಿ ಒಂದು ನೆಲೆ ತಂದುಕೊಡುತ್ತದೆ. ಆದರೆ ಹೆಚ್ಚಿನ ಮಹಿಳೆಯರಿಗೆ, ವೈವಾಹಿಕ ಬದುಕು ಉದ್ಯೋಗ, ಸಂಸಾರ ನಿಭಾಯಿಸುವಂತಹ ಸಮತೋಲನದ ಕಸರತ್ತಾಗುತ್ತದೆ.
ಪತ್ನಿ ಜೀನ್ಸ್, ಕುರ್ತಾ ತೊಡುವುದನ್ನೂ ಆಕ್ಷೇಪಿಸುವ ಪತಿ ಇರುವಂತಹ ಕಹಿ ವಾಸ್ತವತೆ ನಮ್ಮದು. ಆದರೆ, ಪತ್ನಿಯ ಕೆರಿಯರ್ ಆಕಾಂಕ್ಷೆಗಳಿಗೆ ನೀರೆರೆಯುತ್ತಾ ಮನೆಗೆಲಸ, ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಗಳಿಗೆ ಹೆಗಲು ಕೊಡುವ ಸಂವೇದನಾಶೀಲ ಗಂಡಂದಿರೂ ನಮ್ಮ ನಡುವೆ ಇದ್ದಾರೆ. ತಂತ್ರಜ್ಞಾನದ ಬೆಳವಣಿಗೆಯಿಂದ ಮನೆಗೆಲಸಗಳ ಹೊರೆ ಹಗುರಗೊಳಿಸಿರುವ ಗೃಹೋಪಯೋಗಿ ಸಲಕರಣೆಗಳು, ಗೃಹಕೃತ್ಯಗಳಲ್ಲಿ ಪುರುಷರ ಸಹಭಾಗಿತ್ವಕ್ಕೆ ಸಹಕಾರಿಯಾಗಿವೆ. ಇಂತಹ ಕುಟುಂಬಗಳಲ್ಲಿ ನಂಬಿಕಸ್ಥ ಮನೆಗೆಲಸದ ಮಹಿಳೆಯರ ಕೊಡುಗೆ ಮರೆಯುವಂತಿಲ್ಲ. ಸದಾ ಕಾಲ ಮಕ್ಕಳ ಜತೆಗಿರುವುದು ಸಾಧ್ಯವಾಗದಿದ್ದರೂ ‘ಗುಣಮಟ್ಟದ ಸಮಯ’ ನೀಡುತ್ತಾ, ಸರಿಯಾದ ಜೀವನ ಮೌಲ್ಯಗಳನ್ನು ಮಕ್ಕಳಲ್ಲಿ ತುಂಬಿ ವಿಶಾಲ ಜಗತ್ತಿನೊಂದಿಗೆ ಸರಿಯಾದ ನೆಲೆಯಲ್ಲಿ ಬೆಸೆದುಕೊಳ್ಳುವ ಸ್ವತಂತ್ರ ಮನೋಭಾವದ ನಾಗರಿಕರನ್ನಾಗಿ ರೂಪಿಸಿದ ಸಂತೃಪ್ತಿ ಇಂತಹ ಕುಟುಂಬಗಳ ಅನೇಕ ಉದ್ಯೋಗಸ್ಥ ತಾಯಿಯರದ್ದಾಗಿರುತ್ತದೆ ಎಂಬುದು ವಾಸ್ತವದ ಇನ್ನೊಂದು ಮುಖ.
ಸಂಸಾರ ಸಾಗರವನ್ನು ಈಜುವಲ್ಲಿ ಪ್ರತಿಯೊಬ್ಬ ವೃತ್ತಿಪರ ಮಹಿಳೆಗೂ ಅವರವರದೇ ವಿಶಿಷ್ಟ ಅನುಭವಬುತ್ತಿಗಳಿರುತ್ತವೆ ಸರಿ. ಆದರೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಮಹಿಳೆಗಾಗುವ ಅಪಮಾನಕ್ಕೆ ವಿವರಣೆಯನ್ನು ಏನೆಂದು ನೀಡುವುದು? ಮಹಿಳೆಯರ ಪರವಾಗಿ ಅನೇಕ ಯೋಜನೆಗಳನ್ನು ಹೊಂದಿರುವ ಸರ್ಕಾರಿ ಕ್ಷೇತ್ರದ ಕೆನರಾ ಬ್ಯಾಂಕ್ ನಿಂದ ಕೆಟ್ಟ ಮುಜುಗರಕ್ಕೆ ಮಹಿಳೆಯರು ಒಳಗಾಗಬೇಕಾದ ವಿದ್ಯಮಾನ ಕಳೆದ ವಾರ ನಡೆಯಿತು. ಸುಮಾರು 1000 ಬ್ಯಾಂಕ್ ಗುಮಾಸ್ತರ ಹುದ್ದೆಗಳಿಗಾಗಿ ರಾಷ್ಟ್ರದಾದ್ಯಂತ ನೇಮಕಾತಿ ಪ್ರಕ್ರಿಯೆ ನಡೆದಿದೆ. ಕೇರಳದಲ್ಲೂ 300 ಹುದ್ದೆಗಳಿಗೆ ನೇಮಕಗಳಾಗಿವೆ. ಜುಲೈ 7ರಂದು ಉದ್ಯೋಗಕ್ಕೆ ಸೇರ್ಪಡೆಯಾಗಲು ಬಂದ ಹೊಸ ನೌಕರರಿಗೆ ಅವರ ವೈದ್ಯಕೀಯ ವರದಿಗಳನ್ನು ಒದಗಿಸಲು ಕೋರಲಾಯಿತು.
ಇದಕ್ಕಾಗಿ ನೀಡಿದ ಫಾರಂನಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಕಾಲಂಗಳಿದ್ದವು. ‘ನಿಮ್ಮ ಕಡೆಯ ಪೀರಿಯಡ್ ದಿನಾಂಕ ಯಾವುದು’ ಎಂಬಂತಹ ಪ್ರಶ್ನೆ ಈ ಫಾರಂನಲ್ಲಿತ್ತು. ಋತು ಚಕ್ರದ ಚರಿತ್ರೆ ಕುರಿತ ಇಂತಹ ಪ್ರಶ್ನೆಯಲ್ಲದೆ ಗರ್ಭಕೋಶ, ಗರ್ಭಗೊರಳು, ಹಾಗೂ ಸ್ತನದ ಯಾವುದಾದರೂ ಕಾಯಿಲೆಯಿಂದ ಬಳಲುತ್ತಿರುವಿರಾ? ಎಚ್ಐವಿಗಾಗಿ ಪರೀಕ್ಷೆಗೊಳಗಾಗಿರುವಿರಾ? ಅಥವಾ ಗರ್ಭಿಣಿಯರಾಗಿರುವಿರಾ ಎಂಬಂತಹ ಪ್ರಶ್ನೆಗಳೂ ಇದ್ದವು. ಹಾಗೇನಾದರೂ ಗರ್ಭಿಣಿಯರಾಗಿದ್ದಲ್ಲಿ ತಕ್ಷಣದ ನೇಮಕಕ್ಕೆ ತಡೆ ನೀಡಲಾಗುವುದೆಂಬ ಅಂಶವೂ ಇತ್ತು. ಈ ಪ್ರಶ್ನಾವಳಿಗಳ ವಿರುದ್ಧ ಕೇರಳದ ಹಲವೆಡೆ ಪ್ರತಿಭಟನೆಗಳು ನಡೆದವು.
ನಂತರ, ‘ಹೌದು. ಇಂತಹ ಮಾಹಿತಿಗಳನ್ನು ಕೇಳಲಾಗಿತ್ತು. ಅನೇಕ ಬ್ಯಾಂಕ್ ಗಳು ಈ ಪ್ರಕ್ರಿಯೆ ಅನುಸರಿಸುತ್ತವೆ. ಆದರೆ ಈ ಬಗೆಯ ವೈಯಕ್ತಿಕ ವಿವರಗಳನ್ನೇಕೆ ನೀಡಬೇಕೆಂಬ ಬಗ್ಗೆ ಆಕ್ಷೇಪ ವ್ಯಕ್ತವಾದ್ದರಿಂದ ಇದನ್ನು ಹಿಂತೆಗೆದುಕೊಳ್ಳಲಾಗಿದೆ’ ಎಂದು ಕೆನರಾ ಬ್ಯಾಂಕ್ ಪ್ರಕಟಿಸಿದೆ.
ವಾಸ್ತವವಾಗಿ ಲಿಂಗ, ಪ್ರಜನನ ಸಾಮರ್ಥ್ಯ ಅಥವಾ ಎಚ್ಐವಿ ಸೋಂಕಿತರು ಎಂದು ಯಾವುದೇ ರೀತಿಯಲ್ಲಿ ಮಹಿಳೆ ವಿರುದ್ಧ ತಾರತಮ್ಯ ನಡೆಸುವುದು ಸಾಧ್ಯವಿಲ್ಲ. ಇದು ಸಂವಿಧಾನದ 14, 16ನೇ ವಿಧಿಗಳ ಉಲ್ಲಂಘನೆ. ಮಹಿಳೆಯ ಗರ್ಭಕೋಶ, ಋತುಚಕ್ರಗಳ ಕುರಿತಂತಹ ಭೀತಿ ಲಾಗಾಯ್ತಿನಿಂದಲೂ ಇದೆ. ಸೇನೆ, ವಾಯುಪಡೆ ಇತ್ಯಾದಿ ವಲಯಗಳಲ್ಲಂತೂ ಮಹಿಳೆ ವಿರುದ್ಧದ ತಾರತಮ್ಯಗಳಿಗೆ ಇದು ನೆಪವಾಗಿರುವುದೂ ಉಂಟು. ನಮ್ಮ ರಾಷ್ಟ್ರದಲ್ಲಿ ಫೈಟರ್ ಜೆಟ್ಗಳನ್ನು ಮಹಿಳೆಯರು ಏಕೆ ಓಡಿಸಲಾಗದು ಎಂಬ ಬಗ್ಗೆ ಐ ಎ ಎಫ್ ಮುಖ್ಯಸ್ಥ ಅರುಪ್ ರಾಹಾ ಈ ಮಾರ್ಚ್ ನಲ್ಲಷ್ಟೇ ವಿವರಣೆ ನೀಡಿದ್ದರು.
‘ಯುದ್ಧ ವಿಮಾನಗಳನ್ನು ಹಾರಿಸುವಂತಹದ್ದು ಸವಾಲಿನ ಕೆಲಸ. ಸುದೀರ್ಘ ಕಾಲ ಈ ಯುದ್ಧ ವಿಮಾನಗಳನ್ನು ಹಾರಿಸಲು ಮಹಿಳೆಯರು ದೈಹಿಕವಾಗಿ ಸಮರ್ಥರಲ್ಲ. ಅದೂ ಗರ್ಭಿಣಿಯರಾಗಿದ್ದಾಗ ಅಥವಾ ಇತರ ಆರೋಗ್ಯ ಸಮಸ್ಯೆಗಳಿದ್ದಾಗ’ ಎಂದು ಅವರು ಹೇಳಿದ್ದರು. ಆರೋಗ್ಯ ಸಮಸ್ಯೆಗಳೆಂದರೆ ಋತು ಚಕ್ರವೆಂಬುದು ಇಲ್ಲಿ ಸ್ಪಷ್ಟ. ಆದರೆ ಈಗಾಗಲೇ ಅಮೆರಿಕ, ರಷ್ಯಾ ಹಾಗೂ ಪಾಕಿಸ್ತಾನದಲ್ಲೂ ಮಹಿಳೆಯರು ಯುದ್ಧ ವಿಮಾನಗಳನ್ನು ಹಾರಿಸುತ್ತಿದ್ದಾರೆಂಬುದು ಬೇರೆ ವಿಷಯ.
ಮಾಸಿಕ ಋತುಚಕ್ರದ ಸಂದರ್ಭದಲ್ಲಿ ಮಹಿಳೆಯನ್ನು ಮುಟ್ಟಿಸಿಕೊಳ್ಳದಿರುವ ಆಚರಣೆ, ಸಂಪ್ರದಾಯಗಳು ಈಗಲೂ ಚಾಲ್ತಿಯಲ್ಲಿವೆ. ಕನಿಷ್ಠ ನಗರಗಳಲ್ಲಿ ಇಂತಹ ಕಂದಾಚಾರಗಳು ಕಡಿಮೆಯಾಗುತ್ತಾ ಬರುತ್ತಿವೆ. ಆದರೆ ಈಗ ಕೆನರಾ ಬ್ಯಾಂಕ್ ಪ್ರಕರಣ ನೋಡಿದರೆ ಆ ಕಂದಾಚಾರಗಳು ಹೊಸ ರೂಪಗಳಲ್ಲಿ ಮರುಕಳಿಸುತ್ತಿವೆಯೇ ಎಂಬ ಅನುಮಾನ ಮೂಡುತ್ತದೆ.
ಹಾಗೆಯೇ ಸಾರ್ವಜನಿಕ ಸ್ಮೃತಿ ಎಷ್ಟು ಕಡಿಮೆ ಎಂಬ ಅಂಶವೂ ವ್ಯಕ್ತವಾಗುತ್ತದೆ. ಏಕೆಂದರೆ ಏಳು ವರ್ಷಗಳ ಹಿಂದಷ್ಟೇ, ಮಹಿಳಾ ಅಧಿಕಾರಿಗಳ ಋತುಚಕ್ರ ವಿವರಗಳನ್ನು ಕೇಳಿದ್ದ ಕೇಂದ್ರ ಸರ್ಕಾರ ವಿವಾದದಲ್ಲಿ ಸಿಲುಕಿತ್ತು. ಐ ಎ ಎಸ್ ಅಧಿಕಾರಿಗಳಿಗೆ ನೂತನ ಅಖಿಲ ಭಾರತ ಸೇವಾ ನಿರ್ವಹಣಾ ಮೌಲ್ಯಮಾಪನ (ಆಲ್ ಇಂಡಿಯಾ ಸರ್ವೀಸಸ್ ಪರ್ಫಾರ್ಮೆನ್ಸ್ ಅಪ್ರೈಸಲ್ ರೂಲ್ಸ್) ನಿಯಮಗಳ ಅಧಿಸೂಚನೆಯನ್ನು ಕೇಂದ್ರ ಸರ್ಕಾರ 2007ರ ಮಾರ್ಚ್ 14ರಂದು ಹೊರಡಿಸಿತ್ತು. ಆ ಪ್ರಕಾರ, ನಮೂನೆ 4ರಲ್ಲಿ ಋತುಚಕ್ರ ಚರಿತ್ರೆ ಮತ್ತು ಕೊನೆಯ ಬಾರಿ ಗರ್ಭಿಣಿಯಾದ ದಿನಾಂಕ ಮುಂತಾದ ವಿವರಗಳ ಸಹಿತ ಆರೋಗ್ಯ ತಪಾಸಣಾ ವಿವರಗಳನ್ನು ಮಹಿಳಾ ಅಧಿಕಾರಿಗಳು ನೀಡಬೇಕಾಗುತ್ತದೆ ಎಂದು ಕೇಂದ್ರ ಸಿಬ್ಬಂದಿ ಸಹಾಯಕ ಸಚಿವ ಸುರೇಶ್ ಪಚೌರಿ ರಾಜ್ಯಸಭೆಗೆ ತಿಳಿಸಿದ್ದರು.
ಆದರೆ ಮಹಿಳೆಯ ಕಾರ್ಯ ನಿರ್ವಹಣೆಗೂ ಈ ಬಗೆಯ ವಿವರಗಳಿಗೂ ಏನು ಸಂಬಂಧ? ಹಿಂದೆಲ್ಲಾ ಈ ಕ್ಷೇತ್ರ ಪುರುಷಾಧಿಪತ್ಯದ ಕೋಟೆಗಳಾಗಿದ್ದವು. ಈಗ ಮಹಿಳೆಯರೂ ಇಲ್ಲಿ ತಮ್ಮ ಛಾಪು ಮೂಡಿಸುತ್ತಿರುವಾಗ ಮಹಿಳೆ ವಿರುದ್ಧದ ಪೂರ್ವಗ್ರಹಗಳನ್ನು ಹೊಸ ರೂಪದಲ್ಲಿ ಹೊರ ಹಾಕುವ ಯತ್ನ ಇದು ಎಂಬಂತಹ ಆಕ್ರೋಶ ಮಹಿಳಾ ಅಧಿಕಾರಿಗಳಿಂದ ಆಗ ವ್ಯಕ್ತವಾಗಿತ್ತು.
ಮಹಿಳೆ ಎಂದರೆ ಬರೀ ಗರ್ಭಕೋಶವೇ? ಆಕೆಗೆ ಬೇರಿನ್ನೇನೂ ಆರೋಗ್ಯ ಸಮಸ್ಯೆಗಳಿರುವುದು ಸಾಧ್ಯವಿಲ್ಲವೆ? ಈ ಫಾರಂಗಳು ಪುರುಷ, ಮಹಿಳೆ ಅಧಿಕಾರಿಗಳಿಬ್ಬರಿಗೂ ಸಂಬಂಧಿಸಿದ್ದಾಗಿದ್ದರೆ ಕ್ಲಿನಿಕಲ್ ಹಿಸ್ಟರಿ ಎಂಬ ಕಾಲಂ ಇದ್ದಿದ್ದರಷ್ಟೇ ಸಾಕಾಗುತ್ತಿರಲಿಲ್ಲವೆ? ‘ವುಮನ್ ಆಫೀಸರ್ಸ್’ ಅಲ್ಲ...... ‘ಫೀಮೇಲ್ ಆಫೀಸರ್ಸ್’ ಎಂಬಂತಹ ಪದ ಪ್ರಯೋಗದಡಿ ಬೇರೆಯೇ ಕಾಲಂ ಅಗತ್ಯವಿತ್ತೆ ಎಂಬೆಲ್ಲಾ ಪ್ರಶ್ನೆಗಳನ್ನು ಎತ್ತಲಾಗಿತ್ತು.
ಮಹಿಳಾ ನಿರ್ದಿಷ್ಟ ಆರೋಗ್ಯ ಸಮಸ್ಯೆಗಳನ್ನು ಹೆಸರಿಸುವುದು ಅಗತ್ಯವಾದರೆ ಸಿಗರೇಟ್ ಹಾಗೂ ಮದ್ಯ ಸಂಬಂಧಿ ಪುರುಷ ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿಗೇಕೆ ವಿನಾಯಿತಿ ಎಂಬಂತಹ ಪ್ರಶ್ನೆಗಳನ್ನೂ ಆಗ ಕೇಳಲಾಗಿತ್ತು.
ಈ ಪರಿಯ ಸಂವೇದನಾಶೂನ್ಯ ವಾತಾವರಣದಲ್ಲೂ ಹಿಂದಕ್ಕೆ ಸರಿಯದೆ ಮುಂದಡಿ ಇಟ್ಟು (ಲೀನ್ ಇನ್) ಅಧಿಕಾರ ಗೆದ್ದುಕೊಳ್ಳಬೇಕು ಎಂದು ಫೇಸ್ ಬುಕ್ ಸಿಓಓ ಹಾಗೂ ಇಬ್ಬರು ಪುತ್ರರ ತಾಯಿಯಾದ ಶೆರಿಲ್ ಸ್ಯಾಂಡ್ ಬರ್ಗ್ ಹೇಳುವ ಮಾತುಗಳನ್ನಿಲ್ಲಿ ಪ್ರಸ್ತಾಪಿಸಬಹುದು. 2013ರ ಆರಂಭದಲ್ಲಿ ‘ಲೀನಿಂಗ್ ಇನ್’ ಪದ ಪ್ರಯೋಗ ಫೇಸ್ ಬುಕ್ ಪುಟಗಳಲ್ಲಿ ಕಾಣಿಸಿಕೊಳ್ಳತೊಡಗಿತು. ಇದಕ್ಕೆ ಆ ವರ್ಷವಷ್ಟೇ ಪ್ರಕಟವಾಗಿದ್ದ ಶೆರಿಲ್ ಸ್ಯಾಂಡ್ ಬರ್ಗ್ ಅವರ ‘ಲೀನ್ ಇನ್: ವಿಮೆನ್, ವರ್ಕ್ ಅಂಡ್ ದಿ ವಿಲ್ ಟು ಲೀಡ್’ ಪುಸ್ತಕವೇ ಮೂಲ. ಸಂಸಾರ, ಕೆರಿಯರ್ ಎರಡನ್ನೂ ಒಟ್ಟಿಗೆ ಹೊಂದಲಾಗದೆಂಬ ನೆಪ ಹೇಳದೆ ಮುಂದಡಿ ಇಡಿ ಎಂಬುದು ಶೆರಿಲ್ ಕರೆ. ಹೀಗಾಗಿ ಆಯ್ಕೆಗಳನ್ನು ನಾವೇ ಮಾಡಿಕೊಳ್ಳಬೇಕು. ಸಂಸಾರ, ಕಚೇರಿಯ ಸಂಘರ್ಷಗಳನ್ನು ದಾಟಿ ‘ಮುಂದಡಿ’ ಇಡಬಹುದೇ ಯೋಚಿಸಿ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.