ಮನುಷ್ಯನಲ್ಲಿ ಆಸೆ ಎನ್ನುವುದು ಬಲು ಕೆಟ್ಟದ್ದು. ಅತಿಯಾಸೆ ಕೆಲವೊಮ್ಮೆ ತನ್ನವರನ್ನೇ ಮೋಸಮಾಡುವಂತೆ ಪ್ರಚೋದಿಸುತ್ತದೆ. ಇದನ್ನು ವಿಶದಪಡಿಸುವ ಒಂದು ಬುದ್ಧನ ಜಾತಕ ಕಥೆ ಹೀಗಿದೆ.
ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯವಾಳುತ್ತಿದ್ದಾಗ ಬೋಧಿಸತ್ವ ಒಬ್ಬ ಬ್ರಾಹ್ಮಣನ ಮಗನಾಗಿ ಹುಟ್ಟಿದ. ಅವನು ಶಾಸ್ತ್ರಗಳನ್ನು ಕಲಿತು ಜ್ಞಾನಿಯಾಗಿ ಸುಖವಾಗಿದ್ದ. ಅವನಿಗೆ ಮತ್ತೊಂದು ಶ್ರೀಮಂತ ಮನೆಯ ಹುಡುಗಿಯನ್ನು ತಂದು ಮದುವೆ ಮಾಡಿದರು. ಆಕೆಗೆ ಆಸೆಬರುಕತನ ಹೆಚ್ಚು. ಬೋಧಿಸತ್ವನಿಗೆ ಆಕೆಯಿಂದ ಮೂರು ಹೆಣ್ಣುಮಕ್ಕಳು ಜನಿಸಿದರು. ಅವರಿಗೆ ನಂದಾ, ನಂದಮತಿ ಮತ್ತು ನಂದಸುಂದರಿ ಎಂದು ಹೆಸರಿಟ್ಟರು. ಮಕ್ಕಳಿಗೆ ಮದುವೆಯಾಗುವ ಮೊದಲೇ ಪ್ರಾಯದಲ್ಲೇ ಬೋಧಿಸತ್ವ ತೀರಿಹೋದ. ಮರುಜನ್ಮದಲ್ಲಿ ಆತ ಒಂದು ಸುಂದರ ಸ್ವರ್ಣಹಂಸವಾಗಿ ಜನಿಸಿದ. ಪೂರ್ವ ಪುಣ್ಯ ವಿಶೇಷದಿಂದ ಹಂಸಕ್ಕೆ ಹಿಂದಿನ ಜನ್ಮದ ಸ್ಮರಣೆ ಇದ್ದಿತು. ಅದನ್ನು ಸ್ವಲ್ಪ ಚಿಂತಿಸಿ ತನ್ನ ಹೆಂಡತಿ ಹಾಗೂ ಮಕ್ಕಳು ಎಲ್ಲಿದ್ದಾರೆ ಎಂದು ತಿಳಿದುಕೊಂಡಿತು. ತನ್ನ ಮರಣದ ನಂತರ ಅವರೆಲ್ಲ ಕಷ್ಟದಲ್ಲಿರಬೇಕು ಮತ್ತು ಅವರಿಗೆ ಸ್ವಲ್ಪ ಸಹಾಯ ಮಾಡಬೇಕೆಂದು ತೀರ್ಮಾನಿಸಿತು. ಅವರಿರುವ ನಗರಕ್ಕೆ ಹಾರಿ ಹೋಯಿತು.
ಒಂದು ದಿನ ಬೆಳಿಗ್ಗೆ ಅವರಿರುವ ಮನೆಯ ಮುಂದೆ ಬಂದು ಇಳಿಯಿತು. ಹೆಂಡತಿ ಮತ್ತು ಮೂವರೂ ಮಕ್ಕಳು ಹೊರಬಂದು ಈ ಸ್ವರ್ಣಹಂಸವನ್ನು ನೋಡಿ ಆಶ್ಚರ್ಯಪಟ್ಟರು. ಚಿಕ್ಕ ಮಗಳು ತಾಯಿಗೆ ಕೇಳಿದಳು, ‘ಅಮ್ಮಾ, ಈ ತರಹದ ಬಂಗಾರದ ಹಂಸ ಇರುವುದನ್ನು ನಾವು ಕೇಳಿಯೇ ಇರಲಿಲ್ಲ. ಅಂತಹದರಲ್ಲಿ ಅದು ಬಂದು ನಮ್ಮ ಮನೆಯ ಅಂಗಳದಲ್ಲೇ ಇಳಿದಿದೆ. ಅದು ಎಲ್ಲಿಂದ ಬಂತೋ?’. ತಕ್ಷಣ ಹಂಸ ಮಾತನಾಡಿತು, ‘ಮಕ್ಕಳೇ ಆಶ್ಚರ್ಯಪಡಬೇಡಿ. ನಾನು ನಿಮ್ಮ ತಂದೆ. ಮರಣದ ನಂತರ ಈ ಜನ್ಮ ಬಂದಿದೆ. ನಿಮಗಿರುವ ಕಷ್ಟದಲ್ಲಿ ಸಹಾಯ ಮಾಡಲೆಂದು ಬಂದಿದ್ದೇನೆ. ನೀವು ಬಂದು ನನ್ನ ಮೈಮೇಲಿರುವ ಬಂಗಾರದ ಗರಿಗಳಲ್ಲಿ ಒಂದನ್ನು ಕಿತ್ತುಕೊಳ್ಳಿ. ಅದನ್ನು ಮಾರಿ ಬದುಕನ್ನು ಹಗುರಮಾಡಿಕೊಳ್ಳಿ. ನಾನು ವಾರಕ್ಕೊಮ್ಮೆ ಬರುತ್ತೇನೆ. ಬಂದಾಗಲೆಲ್ಲ ಒಂದು ಗರಿ ಕೊಟ್ಟು ಹೋಗುತ್ತೇನೆ’. ಹಂಸ ಹೇಳಿದಂತೆ ಮಗಳು ಒಂದು ಗರಿ ಕಿತ್ತಿಕೊಂಡಳು.
ಪ್ರತಿವಾರ ದೊರೆತ ಒಂದೊಂದು ಬಂಗಾರದ ಗರಿಯಿಂದಾಗಿ ತಾಯಿ ಮಕ್ಕಳು ಚೆನ್ನಾಗಿ ಬದುಕಿದರು. ಒಮ್ಮೆ ತಾಯಿ, ಮಕ್ಕಳನ್ನು ಕರೆದು ಹೇಳಿದಳು. ‘ಮಕ್ಕಳೇ, ಈ ಹಂಸವೇನೋ ಹಿಂದಿನ ಜನ್ಮದ ವಿಷಯದ ಬಗ್ಗೆ ಮಾತನಾಡುತ್ತದೆ. ಅಲ್ಲದೇ ವಾರಕ್ಕೊಮ್ಮೆ ಬಂದು ಒಂದೇ ಗರಿ ಕೊಡುತ್ತದೆ. ಈ ಹಂಸಗಳ ಆಯಸ್ಸು ಕಡಿಮೆ. ಅದು ಯಾವಾಗ ಸತ್ತು ಹೋಗುತ್ತದೋ ತಿಳಿಯದು. ಅದಕ್ಕೇ ಮುಂದಿನ ವಾರ ಅದು ಬಂದಾಗ ಎಲ್ಲ ಗರಿಗಳನ್ನೂ ಕಿತ್ತುಕೊಂಡು ಬಿಡೋಣ’. ಮಕ್ಕಳು ‘ಅದು ಬೇಡ, ಅದರಿಂದ ಹಂಸಕ್ಕೆ ತೊಂದರೆಯಾಗುತ್ತದೆ’ ಎಂದರು. ಆದರೆ ತಾಯಿ ನಿರ್ಧಾರ ಮಾಡಿ ಬಿಟ್ಟಿದ್ದಳು.
ಮರುವಾರ ಸ್ವರ್ಣಹಂಸ ಬಂದಾಗ ಅದನ್ನು ಹಿಡಿದು ಎಲ್ಲ ಗರಿಗಳನ್ನು ಕಿತ್ತಿಬಿಟ್ಟಳು. ಬಲವಂತವಾಗಿ ಕಿತ್ತುಕೊಂಡಿದ್ದರಿಂದ ಅವು ಬಂಗಾರದ್ದಾಗಿ ಉಳಿಯದೇ ಸಾಮಾನ್ಯ ಗರಿಗಳಾದವು. ಎಲ್ಲ ಗರಿಗಳನ್ನು ಕಳೆದುಕೊಂಡ ಹಂಸಕ್ಕೆ ಹಾರಲಸಾಧ್ಯವಾಯಿತು. ಆದರೂ ತುಂಬ ನೋವಿನಲ್ಲೇ ಕುಪ್ಪಳಿಸುತ್ತ ದೂರ ಹೋಗಿ ಮರದ ಕೆಳಗೆ ಕುಳಿತುಕೊಂಡಿತು. ನಾಲ್ಕಾರು ವಾರ ಅಲ್ಲಿಯೇ ಇದ್ದು ಗರಿಗಳು ಬೆಳೆದ ಮೇಲೆ ಹಾರಿಹೋಯಿತು. ಮರಳಿ ಮತ್ತೆ ತಾಯಿ-ಮಕ್ಕಳ ಬಳಿಗೆ ಸುಳಿಯಲಿಲ್ಲ. ಬಂಗಾರದ ಮೊಟ್ಟೆ ಇಡುವ ಕೋಳಿಯನ್ನೇ ಕೊಯ್ದ ಮೂರ್ಖರಂತೆ ಈ ತಾಯಿ ಮಕ್ಕಳೂ ದೊರೆಯುತ್ತಿದ್ದ ಭಾಗ್ಯವನ್ನು ಕಳೆದುಕೊಂಡರು. ತಮಗೇ ಸಹಾಯ ಮಾಡಲು ಬಂದ, ತಮ್ಮವರಿಗೇ ಮೋಸ ಮಾಡಬಯಸಿದ್ದು ಈ ದುರಾಸೆಯಿಂದಲೇ. ಬಹುದೊಡ್ಡ ಆಶ್ಚರ್ಯವೆಂದರೆ, ದುರಾಸೆ ಎಂದಿಗೂ, ಯಾರಿಗೂ ಒಳ್ಳೆಯದು ಮಾಡಿಲ್ಲ ಎಂಬುದು ತಿಳಿದೂ, ಮನುಷ್ಯರ ಮನಸ್ಸು ಆ ದುರಾಸೆಯೆಡೆಗೇ ತುಡಿಯುತ್ತದಲ್ಲವೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.