‘ಹೊರಗೆ ಎಲ್ಲಿಗೆ ಹೋಗುತ್ತಿದ್ದೀ ಎಂದು ನಿಮ್ಮ ಹೆಣ್ಣು- ಮಕ್ಕಳನ್ನು ಪ್ರಶ್ನಿಸಿ ಕಟ್ಟುಪಾಡು ವಿಧಿಸುವಂತೆ ನಿಮ್ಮ ಗಂಡುಮಕ್ಕಳನ್ನೂ ಪ್ರಶ್ನಿಸಿ’.
ಇದು 68ನೇ ಸ್ವಾತಂತ್ರ್ಯ ದಿನದಂದು ದೆಹಲಿಯ ಐತಿಹಾಸಿಕ ಕೆಂಪುಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆ.
ಚುನಾವಣಾ ಪ್ರಚಾರಾಂದೋಲನದ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಮಹಿಳೆಯ ಸುರಕ್ಷತೆಯ ವಿಚಾರವನ್ನು ವಿಸ್ತೃತವಾಗಿಯೇ ಪ್ರಸ್ತಾಪಿಸಿದ್ದರು. ಆದರೆ ಮೇ ತಿಂಗಳಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಈ ಬಗ್ಗೆ ಅವರು ಮೌನ ವಹಿಸಿದ್ದರು.
ಮೊದಲ ಬಾರಿಗೆ ಕೆಂಪುಕೋಟೆಯ ಮೇಲಿಂದ ಮಾಡಿದ ಸ್ವಾತ್ರಂತ್ರ್ಯೋತ್ಸವದ ಭಾಷಣದಲ್ಲಿ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ಬಗ್ಗೆ ಮೋದಿಯವರು ಮೌನ ಮುರಿದು ಗಮನ ಸೆಳೆದಿದ್ದಾರೆ.
ಕಠಿಣ ಕಾನೂನುಗಳು ಮಹಿಳೆ ವಿರುದ್ಧದ ಅಪರಾಧಗಳ ವಿರುದ್ಧ ಕ್ರಮ ಕೈಗೊಳ್ಳುತ್ತವೆ. ಆದರೆ ಅಷ್ಟೇ ಸಾಕಾಗದು. ಗಂಡುಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸಬೇಕಾದ ಜವಾಬ್ದಾರಿ ಕುಟುಂಬದ್ದೂ ಆಗಿದೆ ಎಂಬುದನ್ನು ಅವರು ಜನರಿಗೆ ನೆನಪಿಸಿದ್ದಾರೆ.
‘ಅತ್ಯಾಚಾರದ ಘಟನೆಗಳನ್ನು ಕುರಿತು ಕೇಳುವಾಗ ನಾಚಿಕೆಯಿಂದ ನಾವು ತಲೆ ತಗ್ಗಿಸಬೇಕಾಗುತ್ತದೆ’ ಎಂದು ಸಮಾಜದ ಹೊಣೆಗಾರಿಕೆಯತ್ತ ಪ್ರಧಾನಿ ಬೆರಳು ಮಾಡಿದ್ದಾರೆ.
ಮಗಳಿಗೆ 10 ಅಥವಾ 12 ವರ್ಷವಾದಾಗ, ‘ಎಲ್ಲಿ ಹೋಗುತ್ತಿ, ಯಾವಾಗ ವಾಪಸಾಗುತ್ತಿ’ ಎಂದು ಪ್ರಶ್ನೆಗಳನ್ನು ಕೇಳಲು ಅಪ್ಪ–ಅಮ್ಮ ಶುರು ಮಾಡುತ್ತಾರೆ. ಇವೇ ಪ್ರಶ್ನೆಗಳನ್ನು ಗಂಡು ಮಕ್ಕಳಿಗೂ ಕೇಳುವ ಧೈರ್ಯವನ್ನು ಅಪ್ಪ ಅಮ್ಮ ತೋರುತ್ತಾರೆಯೆ?’ ಎಂದು ಅವರು ಪ್ರಶ್ನಿಸಿದ್ದಾರೆ. ‘ಎಲ್ಲಿಗೆ ಹೋಗುತ್ತಿ? ಯಾಕೆ ಹೋಗುತ್ತಿ? ನಿನ್ನ ಸ್ನೇಹಿತರು ಯಾರು?’ ಎಂಬ ಪ್ರಶ್ನೆಗಳನ್ನು ಗಂಡುಮಕ್ಕಳಿಗೂ ಅಪ್ಪ ಅಮ್ಮ ಕೇಳಬೇಕು. ನಿಜ ಹೇಳಬೇಕೆಂದರೆ ಅತ್ಯಾಚಾರ ಮಾಡುವವರು ಯಾರೋ ಅಪ್ಪಅಮ್ಮಂದಿರ ಮಕ್ಕಳೇ ಆಗಿರುತ್ತಾರೆ. ತಮ್ಮ ಹೆಣ್ಣುಮಕ್ಕಳ ಮೇಲೆ ಹೇರುವಂತಹ ನಿರ್ಬಂಧಗಳನ್ನು ತಮ್ಮ ಗಂಡು ಮಕ್ಕಳ ಮೇಲೂ ಹೇರಲು ತಂದೆ ತಾಯಿ ನಿರ್ಧರಿಸಿದಲ್ಲಿ ಸಾಮಾಜಿಕವಾಗಿ ಮಹತ್ತರವಾದ ಬದಲಾವಣೆಗೆ ಹೊರಳಿಕೊಳ್ಳಬಹುದು ಎಂದು ಪ್ರಧಾನಿ ಸೂಚ್ಯವಾಗಿ ಹೇಳಿದ್ದಾರೆ.
ಭಾರತದಲ್ಲಿ ಕಳೆದ ವರ್ಷ, ಪ್ರತಿ 21 ನಿಮಿಷಕ್ಕೆ ಒಂದು ಅತ್ಯಾಚಾರ ಘಟನೆ ವರದಿಯಾಗಿದೆ ಎಂಬುದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದ ವರದಿ. ಇಂತಹ ಸಂದರ್ಭದಲ್ಲಿ, ಅತ್ಯಾಚಾರ ಅಪರಾಧ ತಡೆಗಾಗಿ ಮನೆಮನೆಗಳಿಂದಲೇ ಉಪಕ್ರಮ ಶುರುವಾಗಬಾರದೇಕೆ? ಎಂದು ಪ್ರಧಾನಿ ಕೇಳಿರುವುದು ಸರಿಯಾದುದು. ‘ಹುಡುಗರು ಹುಡುಗರೇ’ ಎಂಬಂಥ ಮಾತುಗಳನ್ನಾಡುತ್ತಾ ಅತ್ಯಾಚಾರ ಅಪರಾಧದ ಗಂಭೀರತೆಯನ್ನು ರಾಜಕಾರಣಿಗಳು ಕುಗ್ಗಿಸುತ್ತಿರುವ ಸಂದರ್ಭದಲ್ಲಿ ಇದು ಮುಖ್ಯ.
ಸರಿಯಾದ ಮಾತುಗಳಲ್ಲಿ ಬಿಂಬಿಸಿದಂತಹ ಸರಿಯಾದ ಭಾವನೆಗಳು ಇವು. ಲೈಂಗಿಕ ಅಪರಾಧಗಳ ಕುರಿತಾದ ದೂಷಣೆಯನ್ನು ಪುರುಷರತ್ತ ಕೇಂದ್ರೀಕರಿಸಿದ್ದು ಗಣನೀಯವಾದದ್ದು. ಈ ಹೊಸ ಧೋರಣೆ ಪಿತೃಪ್ರಧಾನ ವ್ಯವಸ್ಥೆಯನ್ನು ಅಲುಗಾಡಿಸುವಂತಹದ್ದು.
ಆದರೆ ಸ್ವಲ್ಪ ದಿನಗಳಲ್ಲೇ ಅವರದೇ ಸಂಪುಟದ ಹಿರಿಯ ಸಹೋದ್ಯೋಗಿ ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಅತ್ಯಾಚಾರ ಕುರಿತಂತೆ ನೀಡಿದ ಲಘುವಾದ ಹೇಳಿಕೆ, ಇಂತಹ ವಿಚಾರಗಳ ಬಗ್ಗೆ ಸರ್ಕಾರದ ನೈಜಬದ್ಧತೆಯನ್ನು ಕುರಿತಂತೆ ಶಂಕೆಯನ್ನು ಹುಟ್ಟುಹಾಕುತ್ತದೆ. ದೆಹಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದಂತಹ ‘ಒಂದು ಸಣ್ಣ ಘಟನೆ’ ವಿಶ್ವದಾದ್ಯಂತ ಪ್ರಚಾರ ಪಡೆದಿದ್ದರಿಂದ ಪ್ರವಾಸೋದ್ಯಮ ಇಳಿಮುಖವಾಗಿ ಲಕ್ಷಾಂತರ ಡಾಲರ್ಗಳ ನಷ್ಟಕ್ಕೆ ಕಾರಣವಾಯಿತು ಎಂಬುದು ಜೇಟ್ಲಿ ಅವರ ಮಾತು. ಈ ಮಾತುಗಳು ವಿವಾದದ ರೂಪ ಪಡೆದ ನಂತರವಷ್ಟೇ ಜೇಟ್ಲಿ ವಿಷಾದ ವ್ಯಕ್ತಪಡಿಸಿ ತಮಗೆ ಯಾವುದೇ ದುರುದ್ದೇಶ ಇರಲಿಲ್ಲ ಎಂಬಂಥ ಸಮಜಾಯಿಷಿ ನೀಡಬೇಕಾಯಿತು.
ಸಮಾಜದಲ್ಲಿ ಆಳವಾಗಿ ಬೇರೂರಿರುವ ಮನೋಧರ್ಮಗಳನ್ನು ಅಳಿಸಿ ಹಾಕುವುದು ಎಷ್ಟೊಂದು ಕಷ್ಟ ಎಂಬುದಕ್ಕೆ ಇದು ಉದಾಹರಣೆ. ಅಷ್ಟಲ್ಲದೆ, ಮಹಿಳೆಯರು ಸೂಕ್ತ ರೀತಿಯಲ್ಲಿ ಬಟ್ಟೆ ಧರಿಸಬೇಕೆಂದು ಮೋದಿಯವರದೇ ತವರು ರಾಜ್ಯ ಗುಜರಾತ್ನ ಪೋರ್ ಬಂದರ್ನ ಪೊಲೀಸರು ಬುದ್ಧಿವಾದ ಹೇಳಿರುವ ಸಂಗತಿಯೂ ವರದಿಯಾಗಿದೆ. ಸಮಾರಂಭವೊಂದರಲ್ಲಿ ಜಿಲ್ಲಾ ಪೊಲೀಸರು ಪೋಸ್ಟರ್ ಒಂದನ್ನು ಪ್ರದರ್ಶಿಸಿದ್ದರು. ಈ ಪೋಸ್ಟರ್ನಲ್ಲಿ ಮಹಿಳೆಯರಿಗೆ ಇದ್ದ ಸಂದೇಶವಾದರೂ ಏನು? ‘ಸೂಕ್ತವಲ್ಲದ ವಸ್ತ್ರ ಧರಿಸಿಕೊಂಡು ಮನೆಯಿಂದ ಹೊರಗೆ ಬರಬೇಡಿ’ ಎಂಬಂಥ ಮಾತುಗಳನ್ನು ಗುಜರಾತಿ ಭಾಷೆಯಲ್ಲಿ ಬರೆಯಲಾಗಿತ್ತು ಎಂದು ‘ದಿ ಹಿಂದೂ’ ಪತ್ರಿಕೆ ವರದಿ ಮಾಡಿದೆ. ಇದಕ್ಕೆ ಪೂರಕವಾಗಿ ಪೋಸ್ಟರ್ ನಲ್ಲಿ ಡೆನಿಮ್ ಹಾಗೂ ಟಿ ಷರ್ಟ್ ಧರಿಸಿದ ಯುವ ಮಹಿಳೆಯರ ಗುಂಪನ್ನು ಚಿತ್ರಿಸಲಾಗಿತ್ತು. ರಾಜ್ಯ
ಸರ್ಕಾರದ ಮಹಿಳಾ ಸಶಕ್ತೀಕರಣ ಸಪ್ತಾಹದ ಅಂಗವಾಗಿ ‘ಮಹಿಳಾ ಸಶಕ್ತೀಕರಣ’ ಶೀರ್ಷಿಕೆ ಹೊತ್ತ ಪೋಸ್ಟರ್ ಪ್ರದರ್ಶಿಸಿದ್ದೇ ವಿಪರ್ಯಾಸ.
ಪುತ್ರ ವ್ಯಾಮೋಹದಿಂದ ‘ಗರ್ಭದೊಳಗೇ ಹೆಣ್ಣುಭ್ರೂಣ ಕೊಲ್ಲುವುದನ್ನು ನಿಲ್ಲಿಸಿ. ಇದರಿಂದ ರಾಷ್ಟ್ರದ ಲಿಂಗಾನುಪಾತದ ಮೇಲಾಗುತ್ತಿರುವ ಅಸಮತೋಲನಗಳಿಗೆ ನೀವೇ ಕಾರಣ ರಾಗುತ್ತಿದ್ದೀರಿ’ ಎಂದು ಪ್ರಧಾನಿ ಭಾರತೀಯ ಕುಟುಂಬಗಳನ್ನು ಟೀಕಿಸಿದ್ದಾರೆ.
‘ನಮ್ಮ ಲಿಂಗಾನುಪಾತ ನೋಡಿ. 1,000 ಪುರುಷರಿಗೆ 940 ಮಹಿಳೆಯರು. ಸಮಾಜದಲ್ಲಿ ಈ ಅಸಮತೋಲನ ಸೃಷ್ಟಿಸುತ್ತಿರುವವರು ಯಾರು? ದೇವರಲ್ಲ. ಹೆಣ್ಣುಭ್ರೂಣ ಕೊಲ್ಲದಿರಲು ವೈದ್ಯರಿಗೆ ಮನವಿ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.
1947ರ ನಂತರ ರಾಷ್ಟ್ರದಲ್ಲಿ 0–6 ವಯೋಮಾನ ಗುಂಪಿನ ಗಂಡು–ಹೆಣ್ಣುಮಕ್ಕಳ ಅನುಪಾತ ತೀವ್ರವಾಗಿ ಕುಸಿದಿದೆ ಎಂದು ಸರ್ಕಾರ ಇತ್ತೀಚೆಗೆ ನಡೆದ ಸಂಸತ್ ಅಧಿವೇಶನದ ಸಂದರ್ಭದಲ್ಲಿ ರಾಜ್ಯಸಭೆಗೆ ತಿಳಿಸಿತ್ತು. ಈ ವಯೋಮಾನದಲ್ಲಿ 1,000 ಗಂಡುಮಕ್ಕಳಿಗೆ ಈಗ 919 ಹೆಣ್ಣುಮಕ್ಕಳಿದ್ದಾರೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಸಾವಿನ ಪ್ರಮಾಣವೂ ಭಾರತದಲ್ಲಿ ಹೆಚ್ಚೇ ಇರುವುದು ಆತಂಕಕಾರಿ. ಈ ವಯೋಮಾನದ 1,000 ಮಕ್ಕಳಲ್ಲಿ 59 ಹೆಣ್ಣು ಮಕ್ಕಳು ಭಾರತದಲ್ಲಿ ಸಾವಿಗೀಡಾಗು
ತ್ತಿದ್ದಾರೆ. ವಿಶ್ವದಲ್ಲಿ ಇಂತಹ ಸಾವುಗಳ ಸರಾಸರಿ ಪ್ರಮಾಣ 46. ಈ ಸಂಬಂಧದಲ್ಲಿ 195 ರಾಷ್ಟ್ರಗಳ ಪೈಕಿ ಭಾರತದ ಸ್ಥಾನ 155 ರಲ್ಲಿದೆ ಎಂಬುದು ಮತ್ತೊಂದು ಆತಂಕಕಾರಿಯಾದ ಸಂಗತಿ.
ಮಕ್ಕಳಾಗಿ ಹೆಣ್ಣುಮಕ್ಕಳನ್ನು ಬಯಸುವ ಸಂಸ್ಕೃತಿಯೇ ನಮ್ಮಲ್ಲಿ ಇಲ್ಲವೆ? ಸತ್ತಾಗ ಚಿತೆಗೆ ಅಗ್ನಿ ಸ್ಪರ್ಶಿಸಲು ಗಂಡುಮಗ ಇರಲೇಬೇಕು ಎಂಬಂಥ ನಂಬಿಕೆಯನ್ನು ಪ್ರಜ್ಞಾವಂತರಾಗಿ ಬದುಕಿದವರಲ್ಲೂ ಜಗ್ಗಿಸುವುದು ಸುಲಭವಲ್ಲ. ‘ಅಪುತ್ರಸ್ಯ ಗತಿರ್ನಾಸ್ತಿ’ ಎಂಬುದು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರು ಬಿಟ್ಟಿದೆ. ವಯಸ್ಸಾದ ಕಾಲದಲ್ಲಿ ಗಂಡುಮಕ್ಕಳಿಂದ ಆಶ್ರಯ ಸಿಗುತ್ತದೆ ಎಂಬ ಭಾವನೆಗಳೂ ತೊಲಗಿಲ್ಲ. ಇಂತಹ ಸಂದರ್ಭದಲ್ಲಿ ‘ಐದು ಪುತ್ರರಿದ್ದೂ ವೃದ್ಧಾಶ್ರಮಗಳಲ್ಲಿರುವ ತಂದೆತಾಯಂದಿರನ್ನು ಕಂಡಿದ್ದೇನೆ. ಆದರೆ ತಂದೆ ತಾಯಿ ಜೊತೆಗಿರಬೇಕೆಂದೇ ವಿವಾಹವಾಗದೆ ತಮ್ಮ ಕನಸುಗಳನ್ನು ಕೊಂದುಕೊಂಡಿರುವಂತಹ ಹೆಣ್ಣುಮಕ್ಕಳಿರುವ ಕುಟುಂಬಗಳನ್ನೂ ಕಂಡಿದ್ದೇನೆ’ ಎಂಬಂಥ ಮೋದಿ ಮಾತುಗಳು ಈ ಸಂಬಂಧದಲ್ಲಿ ಸತ್ಯಕ್ಕೆ ಹತ್ತಿರವಾದುದು. ಹೆಣ್ಣುಮಕ್ಕಳ ವಿರುದ್ಧದ ಪೂರ್ವಗ್ರಹಗಳನ್ನು ಈ ಮಾತುಗಳು ಸರಿಯಾಗಿಯೇ ಪ್ರಶ್ನಿಸುವಂತಿವೆ.
ಆದರೆ ಪ್ರಶ್ನೆ ಇರುವುದು ಈ ಕಾಳಜಿ ಹಾಗೂ ಹೃದ್ಯ ಮಾತುಗಳು ಸರ್ಕಾರದ ಮಟ್ಟದಲ್ಲಿ ನಿಜಕ್ಕೂ ನೀತಿಗಳಾಗಿ ರೂಪುಗೊಳ್ಳುತ್ತವೆಯೆ? ಕಾರ್ಯಕ್ರಮಗಳಾಗಿ ಹೇಗೆ ಹೊರಹೊಮ್ಮುತ್ತವೆ ಎಂಬುದರಲ್ಲಿ.
ಸ್ವಾತಂತ್ರ್ಯೋತ್ಸವ ದಿನದ ಭಾಷಣದಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ಪ್ರಸ್ತಾಪವಾದ ಮತ್ತೊಂದು ಮಹತ್ವದ ಅಂಶ ಶೌಚಾಲಯಗಳು. ‘ನಾವೀಗ 21ನೇ ಶತಮಾನದಲ್ಲಿದ್ದೇವೆ. ಆದರೆ ಇಂದಿಗೂ ನಮ್ಮ ತಾಯಂದಿರು ಹಾಗೂ ಸೋದರಿಯರು ಬಹಿರ್ದೆಸೆಗಾಗಿ ಬಯಲು ಶೌಚಾಲಯವನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ. ಮಹಿಳೆಯ ಘನತೆ... ಇದು ಎಲ್ಲರ ಹೊಣೆಯಲ್ಲವೆ?’ ಎಂಬಂಥ ಪ್ರಧಾನಿ ಪ್ರಶ್ನೆ ಸೂಕ್ತವಾದುದು. ದೇಹದ ನೈಸರ್ಗಿಕ ಬಾಧೆ ತೀರಿಸಿಕೊಳ್ಳಲು ಕತ್ತಲಾಗುವವರೆಗೆ ಕಾಯಬೇಕಾದ ಸ್ಥಿತಿ ಅನೇಕ ಕಾಯಿಲೆಗಳಿಗೂ ಕಾರಣವಾಗುವಂಥದ್ದು ಎಂಬುದನ್ನು ಪ್ರಧಾನಿ ಎತ್ತಿ ಹೇಳಿದ್ದಾರೆ. ಹೆಣ್ಣು ಮಕ್ಕಳು ಶಾಲೆಯನ್ನು ಅರ್ಧಕ್ಕೇ ಬಿಡುವುದಕ್ಕೆ ಶಾಲೆಗಳಲ್ಲಿ ಶೌಚಾಲಯಗಳಿಲ್ಲದಿರುವುದೇ ಕಾರಣ ಎಂಬುದನ್ನೂ ಒತ್ತಿ ಹೇಳಲಾಗಿತ್ತು.
ಬಯಲು ಶೌಚಾಲಯಗಳು ಮಹಿಳೆಯರ ಸುರಕ್ಷತೆ ಹಾಗೂ ಘನತೆಯನ್ನು ಕುಗ್ಗಿಸುತ್ತಿವೆ ಎಂಬ ವಿಚಾರ ಇತ್ತೀಚಿನ ತಿಂಗಳುಗಳಲ್ಲಿ ಸಾರ್ವಜನಿಕವಾಗಿ ಭಾರಿ ಚರ್ಚೆಗಳಿಗೆ ಒಳಪಟ್ಟಿದೆ.
ಇಂತಹ ಸನ್ನಿವೇಶದಲ್ಲಿ, ‘ಕೆಂಪು ಕೋಟೆಯಿಂದ ಸ್ವಚ್ಛತೆ ಹಾಗೂ ಶೌಚಾಲಯಗಳ ಕುರಿತು ಏಕೆ ಮಾತನಾಡುತ್ತಿದ್ದೇನೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಆದರೆ ನಾನು ಹೃದಯದಾಳದಿಂದ ಮಾತನಾಡುತ್ತಿದ್ದೇನೆ’ ಎಂದಿದ್ದಾರೆ ಪ್ರಧಾನಿ.
ಭಾರತದಲ್ಲಿ ಸುಮಾರು 60 ಕೋಟಿ ಜನರು ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಿದ್ದಾರೆ ಎಂಬುದು ಸಣ್ಣ ಸಂಗತಿಯೇನಲ್ಲ. ಈ ಪಿಡುಗು ನಿವಾರಣೆಗೆ ಸಾಮೂಹಿಕ ಪ್ರಯತ್ನ ಬೇಕು ಎಂಬುದೂ ಸರಿ. ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆ ಸಂದರ್ಭಕ್ಕಾಗಿ 2019ರ ಅ. 2ಕ್ಕೆ ಭಾರತವನ್ನು ಬಯಲು ಶೌಚಾಲಯ ಮುಕ್ತ ರಾಷ್ಟ್ರವಾಗಿಸಲು ಮೋದಿ ಕರೆ ನೀಡಿರುವುದು ನಿಜಕ್ಕೂ ದೊಡ್ಡ ಸವಾಲು.
ಈ ಎಲ್ಲಾ ಮಾತುಗಳು ಕ್ರಿಯೆಗಿಳಿಯಬೇಕಿವೆ. ಸತಿ ಪದ್ಧತಿಯನ್ನು ನಮ್ಮ ರಾಷ್ಟ್ರದಲ್ಲಿ ರದ್ದು ಮಾಡಿದ ಸಂದರ್ಭವನ್ನೇ ಗಮನಿಸಬಹುದು. 19ನೇ ಶತಮಾನದ ಆರಂಭದಲ್ಲಿ ಸಮಾಜ ಸುಧಾರಕ ರಾಜಾರಾಂ ಮೋಹನ ರಾಯ್ ಅವರು ಸತಿ ಪದ್ಧತಿ ರದ್ದು ಮಾಡುವಂತಹ ಕಾನೂನು ಮಾಡಲು ಬ್ರಿಟಿಷ್ ಆಡಳಿತವನ್ನು ಕೋರಿಕೊಂಡರು. 1829ರಲ್ಲಿ ಸತಿ ಪದ್ಧತಿ ರದ್ದು ಮಾಡಲಾಯಿತು. 1815–1824ರ ಅವಧಿಯಲ್ಲಿನ ಅಂಕಿ–ಸಂಖ್ಯೆಗಳ ಪ್ರಕಾರ, ಬಂಗಾಳ ಪ್ರೆಸಿಡೆನ್ಸಿಯೊಂದರಲ್ಲೇ ಒಟ್ಟು 5,997 ಸತಿ ಪ್ರಕರಣಗಳಾಗಿದ್ದವು.
ಆದರೆ ತಮ್ಮ ಸಾಮಾಜಿಕ ಪದ್ಧತಿಗಳನ್ನು ಕಾಪಾಡಿಕೊಳ್ಳಲು ಅವಕಾಶ ನೀಡಬೇಕೆಂದು ಗಣ್ಯ ಭಾರತೀಯರು ಆಗ ರಾಯಲ್ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರು. ಅವರ ಭಾವನೆಗಳು ಹಾಗೂ ಸಾಮಾಜಿಕ ಆಚರಣೆಗಳನ್ನು ಗೌರವಿಸುವುದಾಗಿ ಆ ಸಂದರ್ಭದಲ್ಲಿ ಕೋರ್ಟ್ ಹೇಳಿತು. ಆದರೆ, ಮಹಿಳೆಯೊಬ್ಬರನ್ನು ಕೊಂದ ಅಪರಾಧ ಮಾಡಿದ ವ್ಯಕ್ತಿಯನ್ನು ಬ್ರಿಟಿಷ್ ಕಾನೂನಿನ ಪ್ರಕಾರ ನೇಣಿಗೇರಿಸಿ ಆಸ್ತಿ ವಶಪಡಿಸಿಕೊಳ್ಳಲಾಗುತ್ತದೆ ಎಂಬುದನ್ನು ಕಟ್ಟುನಿಟ್ಟಾಗಿ ತಿಳಿಸಲಾಗಿತ್ತು.
ಸತಿ ಪದ್ಧತಿಯನ್ನು ಭಾರತದಿಂದ ತೊಲಗಿಸಲು ಕಾನೂನಿನ ಅನುಷ್ಠಾನದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗಿತ್ತು. ಈಗ, ಭಾರತದಲ್ಲಿ ಅನೇಕ ಮಹಿಳಾ ಪರ ಕಾನೂನುಗಳು ಇವೆ. ಆದರೆ ಇವು ಸಂತ್ರಸ್ತರು ಹಾಗೂ ಆರೋಪಿಗಳ ಮಧ್ಯೆ ಗೊಂದಲಗಳನ್ನು ಸೃಷ್ಟಿಸುವಂತಾಗಿವೆ. ವ್ಯವಸ್ಥೆಯಲ್ಲಿರುವ ಲಿಂಗ ತಾರತಮ್ಯದ ದೃಷ್ಟಿಕೋನಗಳು ಎಷ್ಟು ಆಳವಾಗಿ ಬೇರು ಬಿಟ್ಟಿವೆ ಎಂದರೆ ಕಾನೂನು ಜಾರಿ ವ್ಯವಸ್ಥೆಗಳೂ ಕಾನೂನು ಜಾರಿಯಲ್ಲಿ ವಿಫಲವಾಗಿವೆ.
ನಿಜವಾದ ಬದಲಾವಣೆಗಳನ್ನು ತರಲು ನಿರ್ಧಾರಗಳನ್ನು ಕೈಗೊಳ್ಳುವ ಕ್ರಿಯೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಬೇಕು. ಆದರೆ ಲಿಂಗ ಸಂವೇದನಾಶೀಲ ಮಾತುಗಳನ್ನಾಡಿದರೂ ಮಹಿಳಾ ಮೀಸಲು ಮಸೂದೆಯ ಬಗ್ಗೆ ಮಾತ್ರ ಪ್ರಧಾನಿ ಮೋದಿ ಮೌನವನ್ನೇ ವಹಿಸಿದರು. ಸಾಮಾಜಿಕ ಬದಲಾವಣೆ ತರುವುದು ಬ್ರಿಟಿಷರಿಗೆ ಸಾಧ್ಯವಾಗಿತ್ತು. ನಮ್ಮದೇ ಸರ್ಕಾರಕ್ಕೂ ಇದು ಸಾಧ್ಯವಾಗಬೇಕು. ಮಾತುಗಳ ಜೊತೆ ಅನುಷ್ಠಾನ ಹಾಗೂ ಕಾನೂನುಗಳ ಜೊತೆ ಕಠಿಣ ಕ್ರಮಗಳಿದ್ದಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.