ಶ್ರೀ ರಾಮಕೃಷ್ಣ ಪರಮಹಂಸರ ಪುಟ್ಟ ಕಥೆಗಳು ತುಂಬ ಮನೋಜ್ಞವಾದವುಗಳು. ಅವರು ಬದುಕಿನಲ್ಲಿ ನಡೆಯುವ ಪುಟ್ಟ ಪುಟ್ಟ ಘಟನೆಗಳನ್ನು ಗಮನಿಸಿ, ಅವುಗಳ ಮೂಲಕ ನೀತಿಕಥೆಗಳನ್ನು ರಚಿಸಿ ಜನರ ಮನಸ್ಸನ್ನು ತಿದ್ದುವ ಪರಿ ಅನನ್ಯವಾದದ್ದು. ಎಂದಿನಂತೆ ಪರಮಹಂಸರು ಶಿಷ್ಯರೊಡನೆ ಗಂಗಾತೀರಕ್ಕೆ ತೆರಳಿದ್ದರು. ಅದು ಶಿಷ್ಯರಿಗೆ ಒಂದು ಸುಸಮಯ. ಗುರುಗಳೊಂದಿಗೆ ಹರಟುವುದಕ್ಕೆ ಮತ್ತು ಅವರಿಂದ ಮಾರ್ಗದರ್ಶನ ಪಡೆಯುವುದಕ್ಕೆ ಒಳ್ಳೆಯ ಅವಕಾಶ.
ಹೀಗೆ ಹರಟೆ ಸಾಗಿದ್ದಾಗ ಶಿಷ್ಯನೊಬ್ಬ ಅವರ ಗಮನವನ್ನು ನದಿಯಲ್ಲಿ ಸಾಗುತ್ತಿದ್ದ ನಾವೆಯ ಕಡೆಗೆ ಸೆಳೆದ. ಅದನ್ನು ನೋಡಿ ಕ್ಷಣಕಾಲ ಯೋಚಿಸಿದ ಪರಮಹಂಸರು ಒಂದು ದೃಷ್ಟಾಂತವನ್ನು ಹೇಳಿದರು. ಒಬ್ಬ ನಾವಿಕ ತನ್ನ ನಾವೆಯನ್ನು ಸಾಗಿಸಿಕೊಂಡು ಹೋಗುತ್ತಿದ್ದ. ಆಗ ಆತ ದೂರದಲ್ಲಿ ಎದುರಿನಿಂದ ಬರುತ್ತಿದ್ದ ಮತ್ತೊಂದು ನಾವೆಯನ್ನು ಗಮನಿಸಿದ. ಮೊದಮೊದಲು ಅವನಿಗೆ ಯಾವ ಚಿಂತೆಯೂ ಇರಲಿಲ್ಲ. ಆದರೆ ಸಮಯ ಕಳೆದಂತೆ ಆ ಎದುರಿನ ನಾವೆ ಇವನ ನಾವೆಯ ದಿಕ್ಕಿಗೇ ಬರುವಂತೆ ತೋರಿತು.
ಅದು ಹಾಗೆಯೇ ಮುಂದುವರೆದರೆ ಇವನ ನಾವೆಗೆ ಅಪ್ಪಳಿಸುವಂತೆ ಕಾಣುತ್ತಿತ್ತು. ತಕ್ಷಣ ನಾವಿಕ ನಾವೆಯಲ್ಲಿ ಎದ್ದು ನಿಂತುಕೊಂಡು ಜೋರಾಗಿ ಕೂಗಿದ, ‘ಹೇ, ಯಾರಪ್ಪಾ ನೀನು? ನಾವೆ ಕಾಣುವುದಿಲ್ಲವೇ? ನಿನ್ನ ನಾವೆಯ ದಾರಿಯನ್ನು ಬದಲಾಯಿಸಿಕೋ’. ಆ ಕಡೆಯಿಂದ ಯಾವ ಉತ್ತರವೂ ಬರಲಿಲ್ಲ. ಆದರೆ ನಾವೆ ಹಾಗೆಯೇ ಮುಂದೆ ರಭಸದಿಂದ ನುಗ್ಗುತ್ತಿತ್ತು. ಈಗ ನಾವಿಕನಿಗೆ ಹೆದರಿಕೆಯಾಯಿತು. ಮತ್ತೆ ಜೋರಾಗಿ ಕೂಗಿದ, ‘ಹೇ ಹುಚ್ಚಾ, ನಾವೆಯ ದಾರಿಯನ್ನು ಬದಲಿಸು. ಎಚ್ಚರವಿಲ್ಲವೇ? ನನ್ನ ನಾವೆಗೆ ಹೊಡೆದೀತು. ಬೇಗ ಬೇರೆ ಕಡೆಗೆ ತಿರುಗಿಸು’. ಆ ಕಡೆಯಿಂದ ಮತ್ತೆ ಯಾವ ಪ್ರತಿಕ್ರಿಯೆಯೂ ಇಲ್ಲ.
ನಾವೆ ಮತ್ತಷ್ಟು ಭರದಿಂದ ನುಗ್ಗಿ ಬಂತು. ಹತ್ತಿರ ಬಂದಾಗ ಈ ನಾವಿಕ ನೋಡಿದ, ಎದುರಿನ ನಾವೆಯಲ್ಲಿ ನಾವಿಕನೇ ಇಲ್ಲ!
ಈಗ ಈ ನಾವಿಕ ಏನು ಮಾಡಬೇಕು? ಬರೀ ಕೂಗಿದರೆ, ಬೈದರೆ ಯಾವ ಪ್ರಯೋಜನವೂ ಇಲ್ಲ. ಯಾಕೆಂದರೆ ನಾವೆಯ ದಿಕ್ಕು ಬದಲಿಸಲು ನಾವಿಕನೇ ಇಲ್ಲ. ತಕ್ಷಣ ನಾವಿಕ ತನ್ನ ನಾವೆಯ ದಿಕ್ಕನ್ನೇ ಬದಲಿಸಿ ಎದುರು ಬರುತ್ತಿದ್ದ ನಾವೆಯಿಂದ ದೂರ ಸರಿದ. ಹಾಗೆ ಮಾಡಿ ಅಪಘಾತದಿಂದ ಪಾರಾದ. ಈ ದೃಷ್ಟಾಂತವನ್ನು ತಿಳಿಸಿ ಶ್ರೀ ರಾಮಕೃಷ್ಣರು ಹೇಳಿದರು, ‘ಯಾವ ಮನುಷ್ಯನ ಮನಸ್ಸಿನಲ್ಲಿ ಕೋಪ, ತಾಪ ತುಂಬಿದೆಯೋ ಆತ ನಾವಿಕನಿಲ್ಲದ ನಾವೆಯಂತೆ. ಅದು ಎತ್ತ ಬೇಕಾದರೂ ಸಾಗೀತು.
ಈಗ ನಿಮ್ಮ ನೌಕೆಯ ಎದುರು ಆ ನಾವೆ ನುಗ್ಗಿ ಬರುತ್ತಿದ್ದರೆ ಸುಮ್ಮನೆ ನಿಂತು ಕೂಗಾಡಿ ಬೈಯುವುದರಿಂದ ಯಾವ ಪ್ರಯೋಜನವೂ ಇಲ್ಲ. ಶಾಂತವಾಗಿ ನಿಮ್ಮ ನಾವೆಯ ಗತಿಯನ್ನು ಬದಲಿಸಿ ದೂರ ಹೋಗುವುದು ಬುದ್ಧಿವಂತಿಕೆ. ನೀವು ಕೋಪದಿಂದ ಕೂಗಾಡಿದರೆ ಈಗ ಎರಡು ನಾವೆಗಳಿಗೆ ನಾವಿಕರಿಲ್ಲದಂತಾಗುತ್ತದೆ, ಅಪಘಾತ ಖಚಿತ’. ಇದು ಎಂಥ ಸತ್ಯದ ಮಾತು! ಕೋಪದಲ್ಲಿದ್ದ ಮನುಷ್ಯ ನಾವಿಕನಿಲ್ಲದ ನಾವೆಯಂತೆ. ಸಿಟ್ಟಿನಲ್ಲಿ ಯಾವುದೋ ಕೆಟ್ಟ ಮಾತು, ಕೆಟ್ಟ ಕ್ರಿಯೆ ಹೊರಬರುತ್ತದೆ.
ಆ ಕೋಪದಲ್ಲಿ ಏನಾದೀತೋ ಹೇಳುವುದು ಕಷ್ಟ. ಆ ಸಂದರ್ಭದಲ್ಲಿ ಎದುರಾದ ನಾವು ಸ್ಥಿಮಿತ ಕಳೆದುಕೊಳ್ಳದೇ, ಕೋಪಿಸಿಕೊಳ್ಳದೇ ದೂರ ಸರಿಯುವುದು ವಿವೇಕ. ಜಗತ್ತಿನಲ್ಲಿ ಅನೇಕ ಅನಾಹುತಗಳು ನಡೆದದ್ದು ಕೋಪದ ಕ್ಷಣಗಳಲ್ಲಿ ಸ್ಥಿಮಿತ ಕಳೆದುಕೊಂಡಿದ್ದರಿಂದಲೇ. ನಂತರ ಅದೆಷ್ಟು ಕೊರಗಿ ಪಶ್ಚಾತ್ತಾಪಪಟ್ಟರೂ ಪ್ರಯೋಜನವಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.