ಇಂದು ಡಿಸೆಂಬರ್ 16. ಇಂದಿಗೆ ಸರಿಯಾಗಿ ಎರಡು ವರ್ಷಗಳ ಹಿಂದೆ ಚಲಿಸುವ ಬಸ್ನಲ್ಲಿ 23 ವರ್ಷದ ವಿದ್ಯಾರ್ಥಿನಿ ಮೇಲೆ ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದರು. ನಂತರ ಆ ವಿದ್ಯಾರ್ಥಿನಿ ಬದುಕುಳಿಯಲಿಲ್ಲ. ರಾಜಧಾನಿ ದೆಹಲಿಯಲ್ಲಿ ನಡೆದ ಈ ಪ್ರಕರಣ ರಾಷ್ಟ್ರದಾದ್ಯಂತ ಉಕ್ಕಿಸಿದ ಆಕ್ರೋಶದ ಅಲೆ ಮರೆಯಲಾದೀತೆ? ಇದಕ್ಕೆ ಸ್ಪಂದಿಸುವುದು ಆಗಿನ ಯುಪಿಎ ಸರ್ಕಾರಕ್ಕೆ ಅನಿವಾರ್ಯವಾಯಿತು. ಸರ್ಕಾರ ರಚಿಸಿದ ನ್ಯಾಯಮೂರ್ತಿ ಜೆ.ಎಸ್. ವರ್ಮಾ ಸಮಿತಿ, ಅತ್ಯಂತ ಕಡಿಮೆ ದಾಖಲೆ ಅವಧಿಯಲ್ಲಿ ಅತ್ಯಾಚಾರ ಕಾನೂನು ಬದಲಾವಣೆಗಳಿಗೆ ಶಿಫಾರಸು ಮಾಡಿ ವರದಿ ನೀಡಿತು. ವರ್ಮಾ ಸಮಿತಿಯ ಅನೇಕ ಶಿಫಾರಸುಗಳನ್ನು ಅಂಗೀಕರಿಸಿದ ಸರ್ಕಾರ ಕಾನೂನುಗಳಿಗೆ ತಿದ್ದುಪಡಿ ಮಾಡಿತು. ಕಾನೂನು ಬಿಗಿಯಾಯಿತು. ಆದರೆ? ಅದರಿಂದ ಮಹಿಳೆಯರಿನ್ನು ಸುರಕ್ಷಿತರು ಎಂಬಂಥ ಭಾವನೆ ಬರೀ ನೀರಿನ ಗುಳ್ಳೆಯಾಯಿತು.
ಮೊನ್ನೆ ಡಿಸೆಂಬರ್ 5ರಂದು ಅದೇ ದೆಹಲಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ. ಈ ಬಾರಿ ಬಸ್ನಲ್ಲಲ್ಲ. ಖಾಸಗಿ ಟ್ಯಾಕ್ಸಿಯಲ್ಲಿ. ಈ ಬಾರಿಯೂ ಸರ್ಕಾರ ತಕ್ಷಣ ಕ್ರಮ ಕೈಗೊಂಡಿತು. ಆದರೆ ಯಾರ ಮೇಲೆ? ಮೊಬೈಲ್ ಆ್ಯಪ್ ಆಧಾರಿತ ಉಬರ್ ಟ್ಯಾಕ್ಸಿ ಸೇವೆಗೇ ದೆಹಲಿಯಲ್ಲಿ ನಿಷೇಧ ಹೇರಿತು. ಜೊತೆಗೆ, ಬೇರೆ ರಾಜ್ಯಗಳೂ ಈ ಕ್ರಮ ಅನುಸರಿಸಬೇಕೆಂದು ನಿರ್ದೇಶನ ನೀಡಿತು. ಆದರೆ ಮಹಿಳೆಯ ಸುರಕ್ಷತೆ ಇದರಿಂದ ಸಾಧ್ಯವೇ ಎಂಬ ಪ್ರಶ್ನೆಗೆ ಸರ್ಕಾರವೇ ಉತ್ತರಿಸಬೇಕು.
ಈ ಘಟನೆಯನ್ನೇ ಗಮನಿಸಿ. ಡಿಸೆಂಬರ್ 5ರಂದು ಆಗಿನ್ನೂ ರಾತ್ರಿ 9.30 ಗಂಟೆಯಾಗಿತ್ತು. ಪ್ರತಿಷ್ಠಿತ ಕಂಪೆನಿಯಲ್ಲಿ ಎಕ್ಸಿಕ್ಯುಟಿವ್ ಆಗಿರುವ 26 ವರ್ಷದ ಆ ಯುವತಿ ಮನೆಗೆ ಹೋಗಲು ಹತ್ತಿದ್ದು ಸಾರ್ವಜನಿಕ ಬಸ್ ಅಲ್ಲ. ಸುರಕ್ಷಿತ ಟ್ಯಾಕ್ಸಿ. ಹೋಗುತ್ತಿದ್ದದ್ದು ದೆಹಲಿ ಹೊರವಲಯಕ್ಕಲ್ಲ, ನಗರದೊಳಗೇ ಇದ್ದ ತನ್ನ ಮನೆಗೆ. ದೆಹಲಿ ಚೆನ್ನಾಗಿ ಪರಿಚಯವಿರುವಂತಹ ದೆಹಲಿಯ ಯುವತಿ ಆಕೆ. ಪಯಣದ ಮಧ್ಯದಲ್ಲಿ ಸ್ವಲ್ಪ ಕಾಲ ಜೊಂಪು ಹತ್ತಿ ನಿದ್ದೆಗೆ ಜಾರಿದ್ದೇ ಆಕೆಯ ಅಪರಾಧವಾಯಿತೆ? ಏಕೆಂದರೆ ಎಚ್ಚರವಾದಾಗ ಚಾಲಕ ಆಕೆಯ ಪಕ್ಕ ಇದ್ದ. ಕೊಲೆ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ ಆತ ಆಕೆಯನ್ನು ಮನೆ ಬಳಿ ಬಿಟ್ಟುಹೋದ.
ಸುರಕ್ಷಿತವೆಂದು ಉಬರ್ ಕ್ಯಾಬ್ ಅನ್ನು ಆಯ್ಕೆ ಮಾಡಿಕೊಂಡ ಆಕೆ ಹಾಗೂ ಆಕೆಯಂತಹ ಸಾವಿರಾರು ಮಹಿಳೆಯರಿಗೆ ಮತ್ತೊಂದು ಸುರಕ್ಷಿತ ಎನಿಸಿದ ಸಾರಿಗೆಯೂ ಕೈಕೊಟ್ಟಂತಹ ಭಾವ. ಸಾರ್ವಜನಿಕ ಸ್ಥಳಗಳು, ಸೌಕರ್ಯಗಳನ್ನು ಬಳಸಲು ಮಹಿಳೆ ಹಿಂಜರಿಯಬೇಕಾದಂತಹ ಅಸುರಕ್ಷತತೆಯ ಈ ಭಾವನೆ ಅಳಿಯುವುದು ಎಂದಿಗೆ?
ಈ ಘಟನೆಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ಪರಸ್ಪರ ಟೀಕೆಗಳ ಕೆಸರೆರಚಾಟಕ್ಕಿಳಿದವು. ಈ ಪ್ರಕ್ರಿಯೆಯಲ್ಲಿ ಸರ್ಕಾರದ ನಿಯಮಾವಳಿಗಳ ಅನುಷ್ಠಾನದಲ್ಲಿನ ನಿರ್ಲಕ್ಷ್ಯ ಮತ್ತೊಮ್ಮೆ ಚರ್ಚೆಗೆ ಬಂತು. ಅಸುರಕ್ಷಿತ ನಗರಗಳ ಕುರಿತೂ ಚರ್ಚೆ ನಡೆದಿದೆ. ಆದರೆ ಈ ಎಲ್ಲಾ ಚರ್ಚೆಗಳಲ್ಲಿ ಅತ್ಯಾಚಾರ ಸಂತ್ರಸ್ತೆಗಾದ ವಿಶ್ವಾಸಘಾತಕತನವನ್ನು ಮರೆಯುವುದು ಹೇಗೆ?
ದೆಹಲಿ ವಿದ್ಯಾರ್ಥಿನಿಯ ಮೇಲೆ ಡಿಸೆಂಬರ್ 16ರಂದು ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಆಕೆಯ ಸಾವಿನ ಎರಡನೇ ವರ್ಷಾಚರಣೆ ಸಂದರ್ಭದಲ್ಲೇ ಮತ್ತೊಂದು ಅತ್ಯಾಚಾರದ ಕಥೆ ಚರ್ಚೆಯ ಕೇಂದ್ರಬಿಂದುವಾಗಿರುವುದು ವಿಪರ್ಯಾಸ. ಕಾಕತಾಳೀಯ ಎಂದರೆ ಡಿಸೆಂಬರ್ 16ರ ಸಾಮೂಹಿಕ ಅತ್ಯಾಚಾರ ವಿರುದ್ಧದ ಪ್ರತಿಭಟನಾ ಪ್ರದರ್ಶನಗಳಲ್ಲಿ ಈ ಅತ್ಯಾಚಾರ ಸಂತ್ರಸ್ತೆಯೂ ಪಾಲ್ಗೊಂಡಿದ್ದರು.
ನಿಜ ಹೇಳಬೇಕೆಂದರೆ, ತಂತ್ರಜ್ಞಾನ ಆಧಾರಿತ ಉತ್ತರದಾಯಿತ್ವ ಇರುವ ರೇಡಿಯೊ ಟ್ಯಾಕ್ಸಿಗಳು ಸುರಕ್ಷಿತವಾದ ಸಾರಿಗೆ ವ್ಯವಸ್ಥೆ ಎನಿಸಿವೆ. ಜಿಪಿಎಸ್ ವ್ಯವಸ್ಥೆಯಿಂದಾಗಿ ಗ್ರಾಹಕರಿಗೆ ಮಾತ್ರವಲ್ಲ ಕಂಪೆನಿಗೂ ಚಾಲಕರ ಗೊತ್ತುಗುರಿ ತಿಳಿಯುವ ವ್ಯವಸ್ಥೆ ಇಲ್ಲಿದೆ. ಆದರೆ ಇಂತಹ ವ್ಯವಸ್ಥೆಯೂ ಹಳಿ ತಪ್ಪಲು ಕಾರಣವೇನು?
ಲೈಂಗಿಕ ಅಪರಾಧಗಳ ನಿರ್ವಹಣೆಯಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿನ ದೌರ್ಬಲ್ಯಗಳು ಇದಕ್ಕೆ ಎಷ್ಟರಮಟ್ಟಿಗೆ ಕಾರಣ? ಈ ಚಾಲಕ ಶಿವಕುಮಾರ್ ಯಾದವ್ ಈ ಹಿಂದೆ ಅತ್ಯಾಚಾರ ಆರೋಪದ ಮೇಲೆ ಬಂಧಿತನಾಗಿ ಏಳು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ ಎಂಬುದನ್ನು ಆತನನ್ನು ಚಾಲಕನಾಗಿ ನೇಮಿಸಿಕೊಂಡ ಕಂಪೆನಿಗೆ ಮೊದಲಿಗೇ ತಿಳಿದಿದ್ದರೆ? ಇನ್ನೊಂದು ಪ್ರಕರಣದಲ್ಲಿ ಈ ಚಾಲಕ ಜಾಮೀನು ಪಡೆದು ಹೊರಬಂದಿದ್ದ ಎಂಬುದು ತಿಳಿದಿದ್ದರೆ? ಇದೇ ಚಾಲಕನ ವರ್ತನೆ ಬಗ್ಗೆ ಅನಿವಾಸಿ ಭಾರತೀಯ ಮಹಿಳೆಯೊಬ್ಬರು ದಾಖಲಿಸಿದ್ದ ದೂರನ್ನು ಗಂಭೀರವಾಗಿ ಪರಿಗಣಿಸಿದ್ದಿದ್ದರೆ? ಈ ಅವಘಡ ತಡೆಯಬಹುದಿತ್ತೆ ಎಂಬುದು ಪ್ರಶ್ನೆ. ಈ ಘಟನೆ ಪದರ ಪದರಗಳಾಗಿ ನಿರ್ಲಕ್ಷ್ಯಗಳ ಹೊಸ ಸತ್ಯಗಳನ್ನು ಅನಾವರಣಗೊಳಿಸುತ್ತಿದೆ.
21ನೇ ಶತಮಾನದ ಮಹಿಳೆ ಹಲವು ನೆಲೆಗಳಲ್ಲಿ ತನ್ನ ಅಸ್ಮಿತೆಗಳನ್ನು ಅರಸುತ್ತಿದ್ದಾಳೆ. ಈವರೆಗಿನ ಸ್ಥಾಪಿತ ಮೌಲ್ಯಗಳನ್ನು ಮುರಿದು ಕಟ್ಟುವ ಪ್ರಕ್ರಿಯೆಯಲ್ಲಿ ಅವಳು ಭಾಗಿಯಾಗಿದ್ದಾಳೆ. ದುಡಿಯುವ ಸ್ಥಳಗಳಲ್ಲಿ ಮಹಿಳಾ ಅಧಿಕಾರಿಗಳು, ಕುಟುಂಬದ ಆಧಾರವಾಗಿ ಕುಟುಂಬವನ್ನು ಸಲಹುತ್ತಿರುವ ಹೆಣ್ಣುಮಕ್ಕಳು ಇಂದು ಸಮಾಜದಲ್ಲಿ ಕಾಣಸಿಗುತ್ತಾರೆ. ಆದರೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮಹಿಳೆ ಕುರಿತಾದ ದೃಷ್ಟಿಕೋನ ಮಾತ್ರ ಏನೇನೂ ಬದಲಾಗಲಿಲ್ಲ. ಮಹಿಳೆ ಏನು ಮಾಡಬಹುದು, ಏನು ಮಾಡಬಾರದು ಎಂಬೆಲ್ಲಾ ವಿಚಾರಗಳು ಮತ್ತದೇ ಪುರಾತನ ಮೌಲ್ಯಗಳಡಿ ಗಿರಕಿ ಹೊಡೆಯುತ್ತವೆ. ಆರ್ಥಿಕ ಪರಿವರ್ತನೆಗಳಾಗಿದ್ದರೂ ತಾವಿರುವ ನೆಲೆಗಳು ಬದಲಾಗಲಿಲ್ಲ ಎಂಬ ಸತ್ಯವನ್ನು ದಿನನಿತ್ಯ ಇಂದಿನ ಮಹಿಳೆ ಮುಖಾಮುಖಿಯಾಗುತ್ತಿದ್ದಾಳೆ.
ಮನೆ ಹೊಸಿಲು ದಾಟಿ ರಸ್ತೆಗೆ ಕಾಲಿಡುವ ಮಹಿಳೆ ಸಾರ್ವಜನಿಕ ಸ್ಥಳಗಳಲ್ಲಿ ಅನುಭವಿಸುವ ‘ಸಿಂಡ್ರೆಲ್ಲಾ’ ರೀತಿಯ ಚಡಪಡಿಕೆಯಿಂದ ಮುಕ್ತಿಯೇ ಇಲ್ಲವೆ? ಕತ್ತಲಲ್ಲಿ ರಸ್ತೆಗಳಲ್ಲಿ ನಡೆಯುವಾಗ, ವಾಹನಗಳನ್ನು ಚಲಾಯಿಸುವಾಗ, ಬಸ್ ನಿಲ್ದಾಣಗಳಲ್ಲ್ಲಿ ಕಾಯುವಾಗ ಅಥವಾ ಸಾರ್ವಜನಿಕ ಸಾರಿಗೆಗಳಲ್ಲಿ ಪಯಣಿಸುವಾಗ ಈ ಭೀತಿ ಅಥವಾ ಚಡಪಡಿಕೆ ಬೆನ್ನಿಗಂಟಿರುತ್ತದೆ. ಸದಾ ಎಚ್ಚರ ವಹಿಸಬೇಕು. ಆಕೆ ತಾನೇ ತಾನಾಗಿ ಇರುವಂತಿಲ್ಲ. ಬಿಝಿಯಾಗಿರುವಂತೆ ತೋರಿಸಿಕೊಳ್ಳುವುದು ಅಗತ್ಯ. ತಾನೇನೂ ಸುಮ್ಮನೆ ರಸ್ತೆಯಲ್ಲಿಲ್ಲ. ರಸ್ತೆಯಲ್ಲಿ ಓಡಾಡುವುದಕ್ಕೊಂದು ಉದ್ದೇಶವಿದೆ ಎಂಬುದನ್ನು ಆಕೆ ಸಾಬೀತುಪಡಿಸುತ್ತಲೇ ಇರಬೇಕು. ಸೆಲ್ ಫೋನ್ಗಳು ಬಂದ ಮೇಲೆ ಇಂತಹ ಚಡಪಡಿಕೆಗಳಿಗೆ ಒಂದಷ್ಟು ಪರಿಹಾರ ದೊರಕಿದೆ. ಸೆಲ್ ಫೋನ್ ನಲ್ಲಿ ಮಾತನಾಡುತ್ತಾ ಯಾರೊಡನೆಯೊ ಸಂವಹನದಲ್ಲಿ ಇರುವುದರ ಸಂಕೇತವನ್ನು ಹರಿಯಬಿಡುವುದರಿಂದ ಒಂದಷ್ಟು ಸುರಕ್ಷತೆಯ ಭಾವವನ್ನು ಕಂಡುಕೊಳ್ಳುವುದು ಸಾಧ್ಯವಾಗುತ್ತಿದೆ.
ಮನೆ ಹಾಗೂ ಜಗತ್ತು ಎಂಬ ಪರಿಕಲ್ಪನೆಯಲ್ಲಿ ಸಾರ್ವಜನಿಕ ಜಗತ್ತಿನಲ್ಲಿ ತನ್ನ ಅಸ್ಮಿತೆ ಕಂಡುಕೊಳ್ಳಲು ಹೆಣ್ಣು ಪಡಬೇಕಾದ ಪಡಿಪಾಟಲು ಧ್ವನಿತವಾಗುತ್ತದೆ. ಹೊರ ಪ್ರಪಂಚ, ಅರಳೀಕಟ್ಟೆಯ ಜಗುಲಿ ಏನಿದ್ದರೂ ಪುರುಷರಿಗೇ ಸೇರಿದ್ದು. ರಾತ್ರಿವೇಳೆ ಸಾರ್ವಜನಿಕ ಸಾರಿಗೆಗಳಲ್ಲಿ ಪಯಣಿಸುವುದು, ಪಾರ್ಕ್ಗಳಲ್ಲಿ ಅಡ್ಡಾಡುವುದು, ರಸ್ತೆ ಬದಿ ಅಂಗಡಿಗಳಲ್ಲಿ ತಿನ್ನುವುದು ಎಲ್ಲವೂ ಪುರುಷರಿಗೆ ಸಹಜ. ಸಾರ್ವಜನಿಕ ಸ್ಥಳಗಳು ಅವರಿಗೆ ಸೇರಿದ್ದು. ಅದೇ ಭಾವನೆ ಮಹಿಳೆಯೂ ಹೊಂದುವುದು ಸಾಧ್ಯವಿದೆಯೆ? ‘ರಾತ್ರಿಯ ವೇಳೆ ನಿಮ್ಮ ಹೆಣ್ಣುಮಕ್ಕಳನ್ನು ಏಕೆ ಹೊರ ಕಳಿಸುತ್ತೀರಿ’ ಎಂದು ನಮ್ಮ ಪೊಲೀಸ್ ಅಧಿಕಾರಿಗಳೇ ಪ್ರಶ್ನಿಸುತ್ತಾರೆ! ಹಾಗೆ ಆಕೆ ಮಾಡಿದಲ್ಲಿ ಸಮಾಜದ ನಿಯಮವನ್ನು ಆಕೆ ಉಲ್ಲಂಘಿಸುತ್ತಿದ್ದಾಳೆ ಎಂದು ಅರ್ಥ. ಹಾಗಾದಾಗ ಅವಳ ಇತರ ಅನೇಕ ಹಕ್ಕುಗಳೂ ಇಲ್ಲವಾಗುತ್ತವೆ. ಅವು ಆಕೆಯ ಘನತೆಯ ಹಕ್ಕು, ಸ್ವಾಯತ್ತತೆಯ ಹಕ್ಕು, ತನ್ನ ದೇಹದ ಮೇಲಿನ ಹಕ್ಕು ಇತ್ಯಾದಿ.
ನಮ್ಮ ಸಂವಿಧಾನ ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ. ಆದರೆ ಅನೇಕ ಕಾನೂನುಗಳು ಪುರುಷನನ್ನು ಮುಖ್ಯವಾಗಿ ಕಂಡು ಹೆಣ್ಣನ್ನು ಎರಡನೇ ದರ್ಜೆ ಅಥವಾ ಅವಲಂಬಿತಳಾಗಿಯೇ ಕಾಣುತ್ತವೆ. ಕುಟುಂಬದ ಕಣ್ಣಿನ ಮೂಲಕವಾಗಿಯೇ ಮಹಿಳೆಯ ಹಕ್ಕುಗಳನ್ನು ವಿಶ್ಲೇಷಿಸುವುದು ಮಾಮೂಲು. ಹೆಣ್ಣಿಗೆ ಕುಟುಂಬವೇ ಪ್ರಧಾನ ಹಾಗೂ ಸೂಕ್ತ ಸ್ಥಳ ಎಂಬ ಪರಿಕಲ್ಪನೆ ಇದೆ. ಕುಟುಂಬದೊಳಗಿನ ಸುರಕ್ಷತೆ, ಭದ್ರತೆ ಸಾರ್ವಜನಿಕ ಸ್ಥಳದಲ್ಲಿ ಸಿಗುವುದು ಸಾಧ್ಯವಿಲ್ಲ. ಹೀಗಾಗಿ ಮಹಿಳೆಗೆ ಮನೆಯೇ ಸುರಕ್ಷತೆಯ ಸ್ಥಳ ಎಂಬುದಾಗುತ್ತದೆ. ಆದರೆ ಈ ವಿಚಾರವೂ ಸತ್ಯವಲ್ಲ. ಮನೆಗಳಲ್ಲಿ ಅತ್ಯಾಚಾರಗಳು ನಡೆಯುವುದಿಲ್ಲವೆ?
ಹಾಗಾದರೆ ಈ ವಿಚಾರದ ನಿರ್ವಹಣೆ ಹೇಗೆ? ಮಹಿಳೆಗೆ ಸಾರ್ವಜನಿಕ ಸ್ಥಳ, ಜಾಗ ಅಥವಾ ವಲಯ ಎಂಬುದು ಆಕೆಯ ಚಲನಶೀಲತೆಗೆ ಸಂಬಂಧಿಸಿದ್ದಾಗುತ್ತದೆ. ಇದು ಸಾರ್ವಜನಿಕ ಬದುಕಿಗೆ ಆಕೆಯನ್ನು ಮುಖಾಮುಖಿಯಾಗಿಸುವ ನೆಲೆ. ಮಹಿಳೆಯ ಸಾಮರ್ಥ್ಯವನ್ನು ಕಟ್ಟುವ ಇಡೀ ಪ್ರಕ್ರಿಯೆ, ಆಕೆ ಪಡೆದುಕೊಳ್ಳುವಂತಹ ಶಿಕ್ಷಣ, ಆರೋಗ್ಯ, ಜೀವನೋಪಾಯ ಇತ್ಯಾದಿಗಳನ್ನು ಅವಲಂಬಿಸಿದೆ. ಅದಕ್ಕೆ ಆಕೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು ಅನಿವಾರ್ಯ. ಆದರೆ ಪಕ್ಕದ ಊರಿಗೆ ಹೋಗಿ ವಿದ್ಯಾಭ್ಯಾಸ ಪಡೆಯಬೇಕು ಎಂದಾದಲ್ಲಿ ಅನೇಕ ಹಳ್ಳಿಗಳ ಹೆಣ್ಣುಮಕ್ಕಳಿಗೆ ಶಿಕ್ಷಣ ಮೊಟಕಾಗುವುದು ಇಂದಿಗೂ ಕಹಿವಾಸ್ತವ. ಇಲ್ಲಿ ಮತ್ತೆ ಸಾರ್ವಜನಿಕ ಸ್ಥಳಗಳಲ್ಲಿ ಆಕೆಯ ಸಂಚಾರ ಅಥವಾ ಸಾರಿಗೆಗಳಲ್ಲಿ ಪಯಣಿಸುವಾಗ ಆಕೆಯ ಸುರಕ್ಷತೆ ದೊಡ್ಡ ಪ್ರಶ್ನೆಯಾಗುತ್ತದೆ. ಪಕ್ಕದ ಊರಿಗೆ ಹೋಗಬೇಕಾದ ಹೆಣ್ಣುಮಗಳ ಚಲನಶೀಲತೆಯನ್ನೂ ಮೊಟಕುಗೊಳಿಸುವಂತಹ ಇಂತಹ ಕ್ರಮದಿಂದಾಗಿ ಆಕೆಯ ಸಾಮರ್ಥ್ಯ ಹೆಚ್ಚಾಗುವುದಿಲ್ಲ. ಈ ವಿಷ ವರ್ತುಲದಲ್ಲಿ ಲಿಂಗ ತಾರತಮ್ಯ ಹಾಗೆಯೇ ಮುಂದುವರಿಯುತ್ತದೆ.
ಆಫ್ಘಾನಿಸ್ತಾನದ ತಾಲಿಬಾನ್ ಆಡಳಿತದಲ್ಲಂತೂ ಸ್ವತಂತ್ರವಾಗಿ ಪುರುಷರ ಜೊತೆಯಿಲ್ಲದೆ ಮನೆಯಿಂದಾಚೆಗೂ ಒಂಟಿಯಾಗಿ ಹೆಣ್ಣುಮಕ್ಕಳು ಕಾಲಿರಿಸುವಂತಿರಲಿಲ್ಲ. ಹೆಣ್ಣಾಗಿ ಹುಟ್ಟುವುದೇ ತಪ್ಪೆನಿಸುವ ಸ್ಥಿತಿ. ಹೀಗಾಗಿ ಅಮ್ಮ, ಅಜ್ಜಿ ಇರುವ ತನ್ನ ಕುಟುಂಬವನ್ನು ಸಲಹಲು ಗಂಡುಹುಡುಗನ ವೇಷ ಹಾಕಿಕೊಂಡು ದುಡಿಯಲು ಹೋಗುವ ಹೆಣ್ಣುಮಗಳೊಬ್ಬಳ ಕಥೆ ಕಳೆದವಾರ ಬೆಂಗಳೂರಿನಲ್ಲಿ ಮುಕ್ತಾಯವಾದ ಅಂತರರಾಷ್ಟ್ರೀಯ ಚಿತ್ರೋ-ತ್ಸವದಲ್ಲಿ ಪ್ರದರ್ಶನವಾದ ಆಫ್ಘಾನಿಸ್ತಾನದ ‘ಒಸಾಮಾ’ ಸಿನಿಮಾದ್ದಾಗಿತ್ತು.
ಹೊರಜಗತ್ತು ಗಂಡಿನದು ಎಂಬ ಸಂದೇಶವೇ ಅಮಾನವೀಯ. ಸುರಕ್ಷತೆಗಾಗಿ ಗಂಡಿನಂತೆ ಕಾಣಿಸಿಕೊಳ್ಳಬೇಕಾದ ಇಂತಹ ಪ್ರಯತ್ನ ಹೊಸದೇನಲ್ಲ. ಕಚೇರಿ ಕೆಲಸ ಮುಗಿಸಿ ತಡರಾತ್ರಿ ಕಾರು ಅಥವಾ ದ್ವಿಚಕ್ರವಾಹನ ಚಲಾಯಿಸಿಕೊಂಡು ಮನೆಗೆ ಹೋಗುವ ವೇಳೆ ವಾಹನ ಚಲಾಯಿಸುತ್ತಿರುವಾಕೆ ಮಹಿಳೆ ಎಂಬುದು ಗೊತ್ತಾಗದಂತೆ ತಲೆಗೂದಲು ಮರೆ ಮಾಡಿ ಪ್ಯಾಂಟ್ ಹಾಗೂ ದೊಡ್ಡ ಕೋಟ್ಗಳನ್ನು ಧರಿಸಿ ಪುರುಷನಂತೆ ಕಾಣಿಸಿಕೊಳ್ಳುವ ಪ್ರಯತ್ನವನ್ನು ಮಾಡುವ ಮಹಿಳೆಯರು ನಗರಗಳಲ್ಲಿ ನಮ್ಮ ನಡುವೆ ಇದ್ದಾರೆ.
ಹಿಂಸಾತ್ಮಕ ಗಡಿರೇಖೆಗಳನ್ನೆಳೆಯುವ ಇಂತಹ ಸಾಮಾಜಿಕ ಹಾಗೂ ಸಾಂಸ್ಕೃತಿಕ ತಡೆಗಳಿಂದಾಗಿ ತಮ್ಮ ಪೂರ್ಣ ಸಾಮರ್ಥ್ಯಗಳನ್ನು ಬಳಸಿಕೊಳ್ಳುವಲ್ಲಿ ಮಹಿಳೆಯರು ವಿಫಲರಾಗುತ್ತಾರೆ. ಇದು ಅವರ ಪರಿಣಾಮಕಾರಿ ಆರ್ಥಿಕ ಹಾಗೂ ರಾಜಕೀಯ ಪಾಲ್ಗೊಳ್ಳುವಿಕೆಗೂ ತಡೆಯೊಡ್ಡುತ್ತದೆ. ಸಾರ್ವಜನಿಕ ಸ್ಥಳಗಳು ಪುರುಷರಿಗೇ ಸೇರಿದ್ದೆಂಬ ಪಿತೃ ಪ್ರಧಾನ ಸಂಸ್ಕೃತಿಯ ಗ್ರಹಿಕೆ ತೊಲಗಬೇಕು. ಸಮಾಜದ ಎಲ್ಲಾ ಸಾಂಸ್ಥಿಕ ನೆಲೆಗಳಲ್ಲಿ ಅಂತರ್ಗತವಾಗಿರುವ ಪಿತೃಪ್ರಧಾನ ಮನೋಧರ್ಮಗಳ ಬದಲಾವಣೆಯಾಗದೆ ಈ ಪರಿಸ್ಥಿತಿ ಸುಧಾರಿಸುವುದಿಲ್ಲ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.