ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೋನಿಗ್ರಹ ಸುಲಭವಲ್ಲ

Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಹಿಂದೆ ವಾರಾಣಸಿಯಲ್ಲಿ ಬೋಧಿಸತ್ವ ಒಬ್ಬ ಶ್ರೀಮಂತ ಬ್ರಾಹ್ಮಣನ ಮಗನಾಗಿ ಹುಟ್ಟಿದ. ಬೆಳೆದು ಸಕಲ ವಿದ್ಯೆಗಳಲ್ಲಿ ಪಾರಂಗತನಾದ. ತಾನು ಎಲ್ಲ ಪ್ರಾಪಂಚಿಕ ಸುಖಗಳನ್ನು ತ್ಯಜಿಸಿ ವಿರಾಗಿಯಾಗಬೇಕೆಂದು ನಿರ್ಧರಿಸಿ ಮನೆಬಿಟ್ಟು ಹೊರಟ. ಹಿಮಾಲಯ ಸೇರಿ ಯೋಗಾಭ್ಯಾಸ ಮಾಡಿ, ಮನಸ್ಸನ್ನು ನಿಗ್ರಹಿಸಿ ಧ್ಯಾನದಿಂದ ಅಲ್ಲೇ ಉಳಿದ. 

ಕೆಲ ವರ್ಷಗಳ ನಂತರ ಪ್ರಪಂಚ ಸುತ್ತಿ ಬರಬೇಕೆಂದು ತೀರ್ಮಾ­ನಿಸಿ ಎಲ್ಲೆಡೆ ತಿರುಗಾಡಿ ಕೊನೆಗೆ ವಾರಾಣಸಿಗೆ ಬಂದ. ಅರಮನೆಯ ರಾಜೋದ್ಯಾನದಲ್ಲಿ ಮರದ ಕೆಳಗೆ ನೆಲೆಸಿದ. ಬೆಳಿಗ್ಗೆ ಸ್ನಾನ ಮಾಡಿ ವಲ್ಕಲಗಳನ್ನು ಧರಿಸಿ, ಭಿಕ್ಷಾಪಾತ್ರೆ ಹಿಡಿದು, ನಗರದಲ್ಲಿ ಭಿಕ್ಷೆ ಬೇಡಲು ಹೋದ. ಅರಮನೆಯ ಮುಂದೆ ಹೋದಾಗ ಇವನ ಚಹರೆ, ಮುಖದಲ್ಲಿದ್ದ ಶಾಂತಿಗಳನ್ನು ಕಂಡು ರಾಜ ಬ್ರಹ್ಮದತ್ತ ಇವನನ್ನು ಒಳಗೆ ಕರೆದು ಅಗ್ರಪೀಠದಲ್ಲಿ ಕುಳ್ಳಿರಿಸಿ ಸತ್ಕರಿ­ಸಿದ. ರುಚಿರುಚಿಯಾದ ಭೋಜನದಿಂದ ತೃಪ್ತಿಪಡಿಸಿದ. ರಾಜನ ಅಪೇಕ್ಷೆಯಂತೆ ಬೋಧಿಸತ್ವ ಈ ಅರಮನೆಯ ರಾಜೋ­ದ್ಯಾನ­ದಲ್ಲೇ ಉಳಿದ. 

ಒಮ್ಮೆ ಗಡಿನಾಡಿ­ನಲ್ಲಿ ಉಂಟಾದ ಅಶಾಂತಿಯನ್ನು ನಿವಾರಿಸಲೆಂದು ರಾಜ ಪ್ರವಾಸ ಮಾಡ­ಬೇಕಾ­ಯಿತು. ಆತ ತನ್ನ ಹಿರಿಯ ಹೆಂಡತಿ ಮೃದುಲಕ್ಷಣೆಯನ್ನು ಕರೆದು ಯಾವ ಕಾರ­ಣಕ್ಕೂ ಸನ್ಯಾಸಿ ಬೋಧಿ­ಸತ್ವನ ಆರೈಕೆಯಲ್ಲಿ ಕಡಿಮೆಯಾಗದಂತೆ ನೋಡಿಕೊ­ಳ್ಳಲು ತಿಳಿಸಿದ. ಬೋಧಿಸತ್ವ ತನಗೆ ಬೇಕಾದ ಸಮಯಕ್ಕೆ ರಾಜಭವ­ನಕ್ಕೆ ಬಂದು ಭಿಕ್ಷೆ ಪಡೆದುಕೊಂಡು ಹೋಗುತ್ತಿದ್ದ. ಒಂದು ದಿನ ಮೃದು­ಲಕ್ಷಣೆ ಸನ್ಯಾಸಿಗೆ ಭೋಜನದ ವ್ಯವಸ್ಥೆ ಮಾಡಿ ಕಾಯ್ದುಕೊಂಡಿದ್ದಳು. ಅವನು ಬರುವುದು ತಡವಾಯಿತು. ಕುಳಿತ­ಲ್ಲಿಯೇ ಅವಳಿಗೆ ನಿದ್ದೆಯ ಮಂಪರು ಆವರಿಸಿತ್ತು.  ಸನ್ಯಾಸಿ ಬಂದು ಶಬ್ದಮಾಡಿ­ದಾಗ  ಧಡಬಡಿಸಿಕೊಂಡು ಮೃದುಲಕ್ಷಣೆ ಗಾಬರಿ­ಯಿಂದ ಮೇಲೆ­ದ್ದಳು.

ಆಗ ಅವಳು ಹೊದೆದುಕೊಂಡಿದ್ದ ಸೆರಗು ಜಾರಿಬಿದ್ದಿತು. ಅವಳು ಎಷ್ಟೇ ಬೇಗ ಸಾವರಿಸಿಕೊಂಡು ಹೊದೆದು­ಕೊಂಡರೂ ಸನ್ಯಾಸಿಯ ದೃಷ್ಟಿ ಅವಳ ಮೇಲೆ ಬಿತ್ತು. ಅವಳು ಮೊದಲೇ ಅಸಾಮಾನ್ಯ ಸುಂದರಿ. ಮೇಲೆ ಅವಳ ಈ ಅವಸ್ಥೆ ಸನ್ಯಾಸಿಯ ಮನಸ್ಸನ್ನು ಕ್ಷಣಕಾಲ ಚಂಚಲಿಸಿತು. ಅವಳು ಸುಂದರಿ ಎಂಬ ಭಾವ ಮೂಡಿತು. ಸನ್ಯಾಸಿಗೆ ಈ ಭಾವ ತಕ್ಕುದಲ್ಲ ಎಂದು ಹೊಳೆದು ಆತ ಮರಳಿ ತನ್ನ ಗುಡಿಸಲಿಗೆ ಬಂದು ಕುಳಿತುಕೊಂಡ. ಏನಾದರೂ ರಾಣಿಯ ಆ ಚಿತ್ರ ಮನದಿಂದ ಹೋಗದು. ನಿರಾಹಾರಿ­ಯಾಗಿ ಕಾಮದಲ್ಲಿ ಕುದಿಯುತ್ತ ಕುಳಿತ.

ರಾಜ ಮರಳಿ ಬಂದು ಸನ್ಯಾಸಿಯನ್ನು ಕಂಡರೆ ಆತ ಅರ್ಧವಾಗಿ ಹೋಗಿದ್ದಾನೆ! ಕಣ್ಣುಗಳಲ್ಲಿ ಯಾವ ಹೊಳಪೂ ಇಲ್ಲ. ‘ತಮಗೆ ಏನು ತೊಂದರೆ’ ಎಂದು ಕೇಳಿದ ರಾಜನಿಗೆ ಸನ್ಯಾಸಿ ಹೇಳಿದ, ‘ನನಗೆ ದೈಹಿಕವಾಗಿ ಯಾವ ತೊಂದರೆಯೂ ಇಲ್ಲ. ಆದರೆ ನನ್ನ ಚಿತ್ತವಿಕಾರವಾಗಿದೆ. ಅದು ಕಾಮವಾಗಿ ಸುಡುತ್ತಿದೆ’. ‘ನಿಮಗೆ ಯಾರ ಮೇಲೆ ಮನಸ್ಸಾಗಿದೆ?’ ಎಂದು ರಾಜ ಕೇಳಿದ. ಸನ್ಯಾಸಿ, ‘ನೀವು ತಪ್ಪು ತಿಳಿಯಬಾರದು. ನನಗೆ ನಿಮ್ಮ ರಾಣಿ ಮೃದುಲಕ್ಷಣೆಯ ಮೇಲೆ ಮನಸ್ಸಾಗಿದೆ’ ಎಂದ. ರಾಜನಿಗೆ ಕೋಪ ಬರಲಿಲ್ಲ ಬದಲಾಗಿ, ‘ಅಷ್ಟೇ ತಾನೇ. ಆಕೆಯನ್ನು ನಾನೇ ನಿಮ್ಮ ಸೇವೆಗೆ ಕಳಿಸುತ್ತೇನೆ’ ಎಂದ.

ಅರಮನೆಗೆ ಹೋಗಿ ಮೃದುಲಕ್ಷಣೆಗೆ ಇದನ್ನು ತಿಳಿಸಿ, ಆತ ದೊಡ್ಡ ಸನ್ಯಾಸಿ, ಏನೋ ವಿಕಾರವಾಗಿದೆ. ಅವನ ಸದಾಚಾರವನ್ನು ಕಾಪಾಡು­ವುದು ನಿನ್ನ ಜವಾಬ್ದಾರಿ ಎಂದ. ಆಕೆ ಒಪ್ಪಿ ಬಂದಳು. ಸನ್ಯಾಸಿಯ ಹತ್ತಿರ ಬಂದು. ‘ನಾನು ನಿಮ್ಮ ಸೇವೆಗೆ ಬಂದಿದ್ದೇನೆ. ಆದರೆ, ನಿಮ್ಮನ್ನು ಸೇರುವ ಮೊದಲು ನನ್ನ ಅಪೇಕ್ಷೆಗಳನ್ನು ತೀರಿಸಬೇಕು’ ಎಂದಳು. ಆತ ಎಲ್ಲದಕ್ಕೂ ಸಿದ್ಧ­ವಿದ್ದ. ಆಕೆ ಅವನಿಂದ ಕುದುರೆ ಲಾಯ, ಗಜಶಾಲೆಯನ್ನು ಶುದ್ಧಗೊಳಿಸಿ­ದಳು. ಮನುಷ್ಯರ ಮಲ ಮೂತ್ರಗಳನ್ನು ತೆಗೆಯಿ­ಸಿದಳು.

ಆತ ಯಾವ ಮುಜು­ಗರವೂ ಇಲ್ಲದೇ ಕೆಲಸ ಮಾಡಿದ. ಕೊನೆಗೆ ರಾತ್ರಿ ಹಾಸಿಗೆಯ ಮೇಲೆ ತವಕದಿಂದ ಕುಳಿತ ಸನ್ಯಾಸಿಯ ಗಡ್ಡವನ್ನು ಹಿಡಿದೆಳೆದು ಅವನ ಕಣ್ಣಲ್ಲಿ ಕಣ್ಣಿಟ್ಟು, ‘ನೀವೊಬ್ಬ ದೊಡ್ಡ ಸನ್ಯಾಸಿ ಎಂಬುದು ಮರೆತುಹೋಯಿತೇ! ಒಂದು ಹೆಣ್ಣಿನ ಆಕರ್ಷಣೆಯಿಂದ ನೀವು ಎಂತೆಂಥ ಹೊಲಸು ಕೆಲಸವನ್ನು ನಾಚಿಕೆಯಿಲ್ಲದೇ ಮಾಡಿದಿರಲ್ಲವೇ? ಇದಕ್ಕಾಗಿಯೇ ನೀವು ಶಾಸ್ತ್ರಗಳನ್ನು ಓದಿದ್ದು, ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡಿದ್ದು?’ ಎಂದು ಕೇಳಿದಳು. ಬೋಧಿಸತ್ವನಿಗೆ ಸಿಡಿಲು ಬಡಿದಂತಾ­ಯಿತು.

ಅಷ್ಟು ವರ್ಷಗಳಿಂದ ಕಾಪಾಡಿಕೊಂಡು ಬಂದ ನಿಷ್ಠೆ ಒಂದು ಗಳಿಗೆಯಲ್ಲಿ ಕರಗಿಹೋಯಿತೇ ಎಂದು ಮೇಲೆದ್ದು ಮರಳಿ ಹಿಮಾಲಯಕ್ಕೆ ಹೋದ. ಮುಂದೆ ಮನ ಚಂಚಲ­ವಾಗದಂತೆ ಬದುಕಿ ಸಾಧಕನಾದ. ಹಿಮಾಲಯದಲ್ಲಿ ಶಾಂತಿ ಇದೆ. ಅದು ಹಿಮಾಲಯದ ಶಾಂತಿ. ನಾವು ಇದ್ದಲ್ಲಿಯೇ ನಮಗೆ ಶಾಂತಿ ದೊರೆತರೆ ಅದು ನಮ್ಮ ಶಾಂತಿ. ಆಕರ್ಷಣೆಗಳೇ ಇಲ್ಲದಿದ್ದಲ್ಲಿ ಮನೋನಿಗ್ರಹ ಸುಲಭ. ಆದರೆ, ಆಕರ್ಷಣೆಗಳ ಮಧ್ಯವೇ ಇದ್ದು ಅವುಗಳಿಂದ ಪಾರಾಗುವುದು ನಿಜವಾದ ಮನೋನಿಗ್ರಹ. ಅದಕ್ಕೆ ತುಂಬ ಪರಿಶ್ರಮಬೇಕು, ಸತತ ಪ್ರಯತ್ನವೂ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT