ರಾಷ್ಟ್ರದಲ್ಲಿ 16ನೇ ಲೋಕಸಭೆಗೆ ವಿವಿಧ ಹಂತಗಳಲ್ಲಿ ಐದು ವಾರಗಳ ಕಾಲ ಚುನಾವಣೆಗಳನ್ನು ನಡೆಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಈವರೆಗೆ ಚುನಾವಣೆ ನಡೆದಿರುವ ವಿವಿಧ ರಾಜ್ಯಗಳಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಗಳಲ್ಲಿ ಮಹಿಳಾ ಮತದಾನದ ಪ್ರಮಾಣ ಶೇ 65.81 ರಷ್ಟಿತ್ತು.
ಸಂಸದೀಯ ಚುನಾವಣೆಯಲ್ಲಿ ಈ ಪ್ರಮಾಣದಲ್ಲಿ ರಾಜ್ಯದ ಮಹಿಳೆಯರು ಮತ ಚಲಾಯಿಸಿರುವುದು ಅತ್ಯಂತ ಹೆಚ್ಚಿನದು ಎಂದು ಚುನಾವಣಾ ಆಯೋಗ ಹೇಳಿದೆ.
ದಕ್ಷಿಣ ಕನ್ನಡ ಕ್ಷೇತ್ರದಲ್ಲಂತೂ ಪುರುಷರಿಗಿಂತ ಮಹಿಳೆಯರ ಮತದಾನ ಪ್ರಮಾಣ ಜಾಸ್ತಿ ಇತ್ತು. ಈ ಕ್ಷೇತ್ರದಲ್ಲಿ ಮಹಿಳಾ ಮತದಾನದ ಪ್ರಮಾಣ ಶೇ 77.39ರಷ್ಟಿದ್ದರೆ, ಪುರುಷರ ಮತದಾನ ಪ್ರಮಾಣ ಶೇ 76.97 ಇತ್ತು. ಅನೇಕ ರಾಜ್ಯಗಳಲ್ಲೂ ಇಂತಹದೇ ವಿದ್ಯಮಾನ ಕಂಡು ಬಂದಿರುವುದು ವಿಶೇಷ. ಚಂಡೀಗಡ, ಅರುಣಾಚಲ ಪ್ರದೇಶ, ಗೋವಾ, ಸಿಕ್ಕಿಂ ಹಾಗೂ ಲಕ್ಷದ್ವೀಪಗಳಲ್ಲಿ ಪುರುಷ ಮತದಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರೇ ಮತ ಹಾಕಿದ್ದಾರೆ. ಸಂಸದೀಯ ಚುನಾವಣೆಗಳಲ್ಲಿ ಮಹಿಳಾ ಮತದಾರರ ಗರಿಷ್ಠ ಮಟ್ಟದ ಪಾಲ್ಗೊಳ್ಳುವಿಕೆಗೆ ಇದು ದ್ಯೋತಕ.
1962ರಿಂದ ಪುರುಷ ಹಾಗೂ ಮಹಿಳಾ ಮತದಾರರ ಮಧ್ಯದ ಅಂತರ ಸ್ಥಿರವಾಗಿ ಕಡಿಮೆಯಾಗುತ್ತಲೇ ಬರುತ್ತಿರುವುದನ್ನು ನಾವು ಗಮನಿಸಬಹುದು. ಕಳೆದ 2009ರ ಸಂಸತ್ ಚುನಾವಣೆ ಸಂದರ್ಭದಲ್ಲಿ ಈ ಅಂತರ ಅತ್ಯಂತ ಕಡಿಮೆ ಇತ್ತು ಎಂದು ಚುನಾವಣಾ ಆಯೋಗ ಹೇಳಿದೆ.
ಮತದಾರರಾಗಿ ಮಹಿಳೆಯರ ಪಾಲ್ಗೊಳ್ಳುವಿಕೆ ನಿರಂತರವಾಗಿ ಏರಿಕೆ ಕಾಣುತ್ತಲೇ ಇರುವುದು ಈ ಬೆಳವಣಿಗೆಗಳಲ್ಲಿ ವ್ಯಕ್ತವಾಗುತ್ತಲೇ ಇದೆ. ಆದರೆ ಚುನಾವಣಾ ಕಣದಲ್ಲಿ ಮಾತ್ರ ಅವರ ಪಾಲ್ಗೊಳ್ಳುವಿಕೆಯಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿಲ್ಲ ಎಂಬ ವಿಪರ್ಯಾಸ ಮಾತ್ರ ಯಥಾಸ್ಥಿತಿಯದೇ ಆಗಿದೆ.
ಚುನಾವಣೆ ಎಂಬುದು ಈಗಲೂ ಪುರುಷರ ರಂಗ ಸ್ಥಳವಾಗೇ ಉಳಿದುಕೊಂಡಿದೆ. ಮಹಿಳೆಯರ ಹಾಜರಿ ಇಲ್ಲಿ ಏನಿದ್ದರೂ ಸಾಂಕೇತಿಕ. 2014ರ ಲೋಕಸಭಾ ಚುನಾವಣೆಯಲ್ಲೂ ಮತ್ತೆ ಇದರ ಪುನರಾವರ್ತನೆಯಾಗಿದೆಯಷ್ಟೇ. ರಾಜ್ಯದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಈ ಬಾರಿ ಚುನಾವಣಾ ಕಣದಲ್ಲಿರುವವರು 435 ಅಭ್ಯರ್ಥಿಗಳು. ಇವರಲ್ಲಿ 23 ಮಂದಿ ಮಾತ್ರ ಮಹಿಳೆಯರು. ಒಟ್ಟು ಅಭ್ಯರ್ಥಿಗಳಲ್ಲಿ ಮಹಿಳೆಯರ ಪ್ರಮಾಣ ಕೇವಲ ಶೇ 5.28. ಮಹಿಳಾ ಸಬಲೀಕರಣದ ವಿಷಯವನ್ನು ಈ ಬಾರಿ ಪ್ರಮುಖ ರಾಜಕೀಯ ಪಕ್ಷಗಳು ದೊಡ್ಡ ದನಿಯಲ್ಲೇ ಎತ್ತಿ ಮಾತನಾಡಿವೆ. ಆದರೂ ಲೋಕಸಭಾ ಚುನಾವಣೆಯಲ್ಲಿ ಅವರ ಪಾಲ್ಗೊಳ್ಳುವಿಕೆ ಪ್ರಮಾಣ ಈ ಬಾರಿಯೂ ಹೆಚ್ಚಾಗಲಿಲ್ಲ.
111 ಕ್ಷೇತ್ರಗಳನ್ನೊಳಗೊಂಡ ಮೊದಲ ನಾಲ್ಕು ಹಂತದ ಚು ನಾವಣೆಗಳಲ್ಲಿ ಒಬ್ಬರೇ ಒಬ್ಬರು ಮಹಿಳಾ ಅಭ್ಯರ್ಥಿಯೂ ಇಲ್ಲದ ಸ್ಥಿತಿ ಆರು ರಾಜ್ಯಗಳಲ್ಲಿ ಕಂಡು ಬಂದಿತ್ತು. ಇವುಗಳಲ್ಲಿ ಜಮ್ಮು ಮತ್ತು ಕಾಶ್ಮೀರ, ಅರುಣಾಚಲ ಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್ , ಲಕ್ಷ ದ್ವೀಪ ಹಾಗೂ ಸಿಕ್ಕಿಂ ಸೇರಿದ್ದವು.
1950ರ ದಶಕದಿಂದ 1990ರ ದಶಕದವರೆಗೆ ಮಹಿಳಾ ಮತದಾರರ ಪ್ರಮಾಣ ಶೇ 38.8ರಿಂದ ಶೇ 60ಕ್ಕೆ ಏರಿಕೆ ಕಂಡಿದ್ದು ವಿಶೇಷವಾದ ಬೆಳವಣಿಗೆ. ಹೀಗೆ ಪ್ರತಿ ಬಾರಿ ಮಹಿಳಾ ಮತದಾನ ಪ್ರಮಾಣ ಹೆಚ್ಚಳಕ್ಕೆ ಕಾರಣರಾಗುತ್ತಾ ಉತ್ಸುಕತೆಯಿಂದ ಮತ ಚಲಾಯಿಸುವ ಈ ಮಹಿಳೆಯರು ಯಾರಿಗಾಗಿ ಮತ ನೀಡುತ್ತಾರೆ? ಹೆಚ್ಚಿನ ಮಹಿಳಾ ಪ್ರತಿನಿಧಿಗಳು ಸಂಸತ್ತಿಗೆ ಆರಿಸಿ ಬರಲಿ ಎಂಬ ತುಡಿತಕ್ಕಂತೂ ಇಲ್ಲಿ ಅವಕಾಶವೇ ಇಲ್ಲ. ಸಂಸತ್ತಿನ ಉಭಯ ಸದನಗಳಲ್ಲಿ ಇರುವ ಮಹಿಳಾ ಸಂಸತ್ ಸದಸ್ಯರ ಪ್ರಮಾಣ ಇನ್ನೂ ಶೇ 11ರ ಆಸುಪಾಸಿನಲ್ಲೇ ಇದೆ. ಇದು ಸದ್ಯದ ಜಾಗತಿಕ ಸರಾಸರಿ ಶೇ 22ಕ್ಕಿಂತ ಅತ್ಯಂತ ಕಡಿಮೆ ಎಂಬುದು ನಮಗೆ ತಿಳಿದಿರಬೇಕು.
ವಿಪರ್ಯಾಸ ಎಂದರೆ ರಾಷ್ಟ್ರದ ಬಲಾಢ್ಯ ರಾಜಕಾರಣಿಗಳಲ್ಲಿ ಮಹಿಳೆಯರೂ ಸೇರಿದ್ದಾರೆ. ಹೀಗಿದ್ದೂ ಚುನಾವಣಾ ರಾಜಕಾರಣದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆಯೇ ಇದೆ.
ಏಕೆ ಹೀಗೆ? ಎಂದರೆ ಮಹಿಳೆಯರಿಗೆ ಚುನಾ ವಣೆಗಳಲ್ಲಿ ಗೆಲುವಿನ ಅವಕಾಶಗಳು ಕಡಿಮೆ ಎಂಬಂತಹ ವಾದಗಳನ್ನು ರಾಜಕೀಯ ಪಕ್ಷಗಳು ಸಾಮಾನ್ಯವಾಗಿ ಮುಂದಿಡುತ್ತವೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ? 2009ರ ಲೋಕಸಭಾ ಚುನಾವಣೆಗಳನ್ನೇ ವಿಶ್ಲೇಷಿಸಿದಲ್ಲಿ ಮಹಿಳೆಯರ ಗೆಲುವಿನ ಪ್ರಮಾಣ ಪುರುಷರ ಗೆಲುವಿನ ಪ್ರಮಾಣಕ್ಕಿಂತ ಹೆಚ್ಚಿದೆ. ಆಗ ಮಹಿಳಾ ಅಭ್ಯರ್ಥಿಗಳ ಗೆಲುವಿನ ಪ್ರಮಾಣ ಶೇ 11ರಷ್ಟಿದ್ದರೆ ಪುರುಷರ ಗೆಲುವಿನ ಪ್ರಮಾಣ ಶೇ 6ರಷ್ಟಿತ್ತು. ಹೀಗಿದ್ದೂ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ರಾಜಕೀಯ ಪಕ್ಷಗಳು ಹಿಂದೇಟು ಹಾಕುವುದು ಮುಂದುವರಿಸಿವೆ.
ಆದರೆ ಮಹಿಳೆಯರ ಮತ ಶಕ್ತಿಯನ್ನು ಓಲೈಸುವ ಪ್ರಯತ್ನಗಳನ್ನಂತೂ ಈ ಬಾರಿ ರಾಜಕೀಯ ಪಕ್ಷಗಳು ಜೋರಾಗಿಯೇ ಮಾಡಿವೆ. ತಮ್ಮ ‘ಚಾಯ್ ಪೆ ಚರ್ಚಾ’ ಕಾರ್ಯಕ್ರಮ ಮಾಲಿಕೆಯಲ್ಲಿ ಮಹಿಳೆ ವಿಚಾರವನ್ನು ನರೇಂದ್ರ ಮೋದಿಯವರು ಕೈಗೆತ್ತಿಕೊಂಡಿದ್ದರು.ರಾಹುಲ್ ಗಾಂಧಿಯವರೂ ತಮ್ಮ ಕುಟುಂಬದ ಮಹಿಳೆಯರ ಶಕ್ತಿಯನ್ನು ಕುರಿತು ಭಾವನಾತ್ಮಕವಾಗಿ ಮಾತನಾಡಿ ಮಹಿಳೆಯರ ಅಂತಃಕರಣ ಮುಟ್ಟಲು ಯತ್ನಿಸಿದ್ದರು.
ಕಾಂಗ್ರೆಸ್, ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷಗಳು ಮಹಿಳೆಗೆ ಸಂಬಂಧಿಸಿದಂತೆ ಒಂದೇ ರೀತಿ ಭರವಸೆಗಳನ್ನು ಪ್ರಣಾಳಿಕೆಗಳಲ್ಲಿ ನೀಡಿವೆ. ಮಹಿಳಾ ಮೀಸಲು ಮಸೂದೆ ಹಾಗೂ ಲೈಂಗಿಕ ಅಪರಾಧಗಳ ವಿಚಾರಣೆಗೆ ತ್ವರಿತ ನ್ಯಾಯಾಲಯಗಳ ಸ್ಥಾಪನೆ ಇದರಲ್ಲಿ ಸೇರಿದೆ. ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಶೇ 25ರಷ್ಟು ಮಹಿಳೆಯರ ನೇಮಕದ ಭರವಸೆಯನ್ನು ಕಾಂಗ್ರೆಸ್ ನೀಡಿದೆ. ಬಹಳಷ್ಟು ವಿಳಂಬದ ನಂತರ ಮೊದಲ ಹಂತದ ಮತದಾನದ ದಿನದಂದು ಪ್ರಣಾಳಿಕೆ ಬಿಡುಗಡೆ ಮಾಡಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ, ಮಹಿಳೆಯರ ಭದ್ರತೆಗೆ ಹೆಚ್ಚಿನ ಗಮನ ನೀಡುವ ಭರವಸೆ ನೀಡಿದೆ. ಮಹಿಳಾ ಸುರಕ್ಷತೆ ವಿಚಾರ ಮುನ್ನೆಲೆಗೆ ಬಂದಿದ್ದು ಅದಕ್ಕೆ ಆದ್ಯತೆ ನೀಡುವುದಾಗಿ ಆಮ್ ಆದ್ಮಿ ಪಕ್ಷವೂ ಆಶ್ವಾಸನೆ ನೀಡಿದೆ.
ಆದರೆ ಈ ಎಲ್ಲಾ ಆಶ್ವಾಸನೆಗಳನ್ನು ಎಷ್ಟರ ಮಟ್ಟಿಗೆ ಈಡೇರಿಸಲಾಗುತ್ತದೆ? ಪ್ರಣಾಳಿಕೆಗಳಲ್ಲಿ ಮಹಿಳೆಯರ ಹಕ್ಕುಗಳ ವಿಚಾರಗಳು ಪ್ರಸ್ತಾಪವಾಗುವುದು ಹೊಸದೇನಲ್ಲ. ಹಿಂದೆಯೂ ಇಂತಹ ಎಷ್ಟೋ ಭರವಸೆಗಳನ್ನು ನೀಡಲಾಗಿದೆ. ಆದರೆ ಈ ಬಾರಿ ಮಹಿಳೆಯರ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿ ವಿವಿಧ ಕ್ಷೇತ್ರಗಳ ಪರಿಣತರು ಸೇರಿ ರೂಪಿಸಿರುವ ‘ವುಮನಿಫೆಸ್ಟೊ’ ಬಿಡುಗಡೆ ಮಾಡಲಾಗಿದೆ. ಮಹಿಳೆಯರ ಹಿತಚಿಂತನೆಗೆ ಆದ್ಯತೆ ನೀಡುವ ಪರ್ಯಾಯ ಪ್ರಣಾಳಿಕೆ ಇದು. ಭಾರತದ ಮಹಿಳೆಯರು ಹಾಗೂ ಬಾಲಕಿಯರ ಸ್ಥಿತಿಗತಿ ಸುಧಾರಣೆಗೆ ಮುಂದಿನ ಐದು ವರ್ಷಗಳಲ್ಲಿ ಕೈಗೊಳ್ಳಬೇಕಾದ ವಿವರಗಳನ್ನು ಈ ಪ್ರಣಾಳಿಕೆ ನೀಡಿದೆ. 1966ರಲ್ಲೇ ಮಹಿಳಾ ಪ್ರಧಾನಿ ಹೊಂದಿದ ದೇಶ ಭಾರತ. ಆದರೆ ಮುಖ್ಯವಾಹಿನಿ ರಾಜಕಾರಣದಲ್ಲಿ ಮಹಿಳೆ ಅಂಚಿನಲ್ಲೇ ಉಳಿದುಕೊಂಡು ಬಂದಿರುವುದು ವಿಪರ್ಯಾಸ. ರಾಜಕೀಯ ಪಕ್ಷಗಳೂ ಇವರನ್ನು ಮುಖ್ಯವಾಹಿನಿಗೆ ತರಲು ಹೆಚ್ಚಿನ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದೇ ದುರದೃಷ್ಟಕರ.
ರಾಷ್ಟ್ರದ ಅತ್ಯಂತ ಬಲಾಢ್ಯ ರಾಜಕಾರಣಿಗಳಲ್ಲಿ ಮಹಿಳೆಯರಿದ್ದಾರೆ. ಕೇಂದ್ರದಲ್ಲಿ ಮುಂದಿನ ಹೊಸ ಸರ್ಕಾರ ರಚನೆ ಸಂದರ್ಭದಲ್ಲಿ ತಮಿಳುನಾಡಿನ ಜಯಲಲಿತಾ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಹಾಗೂ ಉತ್ತರ ಪ್ರದೇಶದ ಮಾಯಾವತಿ ಪ್ರಮುಖ ಪಾತ್ರಧಾರಿಗಳಾಗುವಂತಹವರು. ಆದರೆ ಈ ಮೂವರು ಬಲಾಢ್ಯ ನಾಯಕಿಯರೂ ಮಹಿಳಾ ಮತದಾರರನ್ನು ಅವಲಂಬಿಸಿಕೊಂಡು ಬಂದವರಲ್ಲ. ಈ ನಾಯಕಿಯರು ಮಹಿಳೆಯರ ವಿಚಾರಗಳನ್ನು ಕಡೆಗಣಿಸಿಕೊಂಡೇ ಬಂದವರು. ‘ಪುರುಷನ ಪ್ರಪಂಚದಲ್ಲಿನ ಮಹಿಳೆಯರು ತಾವು’ ಎಂಬಂತಹ ಪ್ರಜ್ಞೆಯಡಿಯೇ ಅವರು ಆಡಳಿತ ನಡೆಸಿದ್ದಾರೆ.
2013ರ ವರ್ಷಾಂತ್ಯದಲ್ಲಿ ಐದು ರಾಜ್ಯ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲೂ ಮಹಿಳಾ ಮತದಾನ ಹೊಸ ಎತ್ತರಗಳಿಗೆ ತಲುಪಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅದರಲ್ಲೂ ಛತ್ತೀಸಗಡ, ರಾಜಸ್ತಾನ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತದಾನ ಮಾಡಿದ್ದರು.
ಅಮೆರಿಕ ಹಾಗೂ ಯೂರೋಪ್ ರಾಷ್ಟ್ರಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರತಿರೋಧವಿಲ್ಲದೆ ಭಾರತದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿತು ಎಂಬುದು ಸಾಮಾನ್ಯವಾದ ಗ್ರಹಿಕೆ. ಆದರೂ ಭಾರತೀಯ ಮಹಿಳೆಯರಿಗೆ ಮತದಾನದ ಹಕ್ಕು ಸಿಗುವ ಮುಂಚೆ, ವಸಾಹತುಶಾಹಿ ಆಡಳಿತ ಇದ್ದ ಬಂಗಾಳದಲ್ಲಿ ಈ ವಿಚಾರದಲ್ಲಿ ನಡೆದ ಚರ್ಚೆಗಳನ್ನು ಗಮನಿಸಬಹುದು.
ಮಹಿಳಾ ಮತದಾನದ ಹಕ್ಕಿಗೆ ವಿವಿಧ ನೆಲೆಗಳಲ್ಲಿ ಆಗ ವಿರೋಧ ವ್ಯಕ್ತವಾಗಿದ್ದು ಈ ಚರ್ಚೆಗಳಲ್ಲಿ ವ್ಯಕ್ತವಾಗುತ್ತದೆ. ರಾಷ್ಟ್ರದ ರಕ್ಷಣೆ ಹಾಗೂ ಆಡಳಿತಕ್ಕೆ ಮಹಿಳೆ ಅರ್ಹಳಲ್ಲವಾದ್ದರಿಂದ ಮತದಾನ ಆಕೆಯ ಜನ್ಮಸಿದ್ಧ ಹಕ್ಕಾಗುವುದು ಸಾಧ್ಯವಿಲ್ಲ ಎಂಬ ವಾದವನ್ನು ಆಗ ಮುಂದಿಡಲಾಗಿತ್ತು. ಗೃಹಕೃತ್ಯಗಳ ಬಗ್ಗೆ ಮಹಿಳೆಗೆ ಅತೃಪ್ತಿ ಮೂಡಬಹುದು, ಗಂಡ, ಮಕ್ಕಳನ್ನು ನಿರ್ಲಕ್ಷ್ಯ ಮಾಡಬಹುದು, ರಾಜಕೀಯ ಹಾಗೂ ಮತ್ತಿತರ ಬುದ್ಧಿಗೆ ಸಂಬಂಧಿಸಿದ ಕೆಲಸಗಳಿಂದಾಗಿ ತನ್ನ ಮಕ್ಕಳಿಗೂ ಮೊಲೆಯೂಡುವುದು ಮಹಿಳೆಗೆ ಸಾಧ್ಯವಾಗುವುದಿಲ್ಲ ಎಂಬಂತಹ ಕುತರ್ಕದ ವಾದಗಳು ಆಗ ಮಂಡಿತವಾಗಿದ್ದವು. ಆದರೆ ಮಹಿಳಾ ಸಂಘಟನೆಗಳ ಸಕ್ರಿಯ ಮಧ್ಯ ಪ್ರವೇಶದಿಂದ ಮಹಿಳೆಯರಿಗೆ ಮತದಾನದ ಹಕ್ಕು ಲಭಿಸಿದ್ದನ್ನು ಮರೆಯಲಾಗದು. ಈಗಲೂ ಚುನಾವಣೆ ರಾಜಕೀಯದಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆಯ ವಿಚಾರ ಸರ್ಕಾರ, ರಾಜಕೀಯ ಪಕ್ಷಗಳು ಹಾಗೂ ಮಹಿಳಾ ಸಂಘಟನೆಗಳ ನಡುವಿನ ಹೋರಾಟಗಾರರ ನಡುವಿನ ವಾಗ್ವಾದಗಳಲ್ಲಿ ಸಿಲುಕಿಕೊಂಡಿದೆ.
ಭ್ರಷ್ಟತೆ ಹಾಗೂ ಜಾತಿ ಆಧಾರಿತ ರಾಜಕೀಯ ಕೊನೆಗಾಣಿಸಲು ಮಹಿಳೆಯರ ಬೃಹತ್ ಮತಶಕ್ತಿಯ ಕುರಿತಾಗಿ ಚಿಂತಿಸಿದ ಬಹುಶಃ ಏಕೈಕ ಭಾರತೀಯ ನಾಯಕ ಎಂದರೆ ಗಾಂಧೀಜಿ. ೧೯೪೬ರ ಏಪ್ರಿಲ್ ೨೧ ರ ‘ಹರಿಜನ್’ ಪತ್ರಿಕೆಯ ಸಂಚಿಕೆಯಲ್ಲಿ ಗಾಂಧೀಜಿ ಸ್ತ್ರೀವಾದಿಗಳಿಗೆ ಹೇಳುವುದು ಹೀಗೆ: ‘ಮಹಿಳಾ ಹಕ್ಕುಗಳು ಎಂದು ಕೂಗಾಡಬೇಡಿ. ಎಷ್ಟು ಸಾಧ್ಯವೊ ಅಷ್ಟು ಮಹಿಳೆಯರನ್ನು ಮತದಾರರಾಗಿ ನೊಂದಾಯಿಸಲು ಗಮನ ನೀಡಿ. ವ್ಯಾವಹಾರಿಕವಾದ ಶಿಕ್ಷಣ ನೀಡಿ. ಸ್ವತಂತ್ರವಾಗಿ ಯೋಚಿಸುವಂತೆ ಮಾಡಿ. ಅವರನ್ನು ಬಂಧಿಸಿರುವ ಜಾತಿ ಸಂಕೋಲೆಯಿಂದ ಬಿಡುಗಡೆ ಮಾಡಲು ಯತ್ನಿಸಿ. ಆ ಮೂಲಕ ಅವರಲ್ಲಾಗುವ ಬದಲಾವಣೆಗಳಿಂದ ಮಹಿಳೆಯ ರಾಜಕೀಯ ಶಕ್ತಿಯನ್ನು ಅರ್ಥ ಮಾಡಿಕೊಳ್ಳುವುದು ಪುರುಷರಿಗೆ ಅನಿವಾರ್ಯವಾಗುತ್ತದೆ. ಜೊತೆಗೆ ಆಕೆಯ ತ್ಯಾಗದ ಸಾಮರ್ಥ್ಯ ಅರಿತು ಆಕೆಗೆ ಗೌರವದ ಸ್ಥಾನ ನೀಡುವುದೂ ಅನಿವಾರ್ಯವಾಗುತ್ತದೆ. ಮಹಿಳಾ ಕಾರ್ಯಕರ್ತರು ಇದನ್ನು ಮಾಡಿದಲ್ಲಿ ಅವರು ಸದ್ಯದ ಅಶುದ್ಧ ರಾಜಕೀಯ ವಾತಾವರಣವನ್ನು ಶುದ್ಧಗೊಳಿಸಿದಂತಾಗುತ್ತದೆ...’
ಈಗ ಮಹಿಳೆಯರು ಮತದಾರರಾಗಿ ತಮ್ಮ ಹಕ್ಕುಗಳನ್ನು ಚಲಾಯಿಸುವಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇದು ದೊಡ್ಡ ಮತಶಕ್ತಿಯಾಗಿ ಮಹಿಳೆಯರ ಬೇಡಿಕೆಗಳಿಗೆ ಕಿವಿಗೊಡುವ ದಿನಗಳು ಭಾರತದ ರಾಜಕಾರಣಿಗಳಿಗೆ ಅನಿವಾರ್ಯವಾಗುವ ದಿನಗಳು ಹತ್ತಿರವಾಗಲಿದೆಯೆ? ಎಂಬುದನ್ನು ಕಾದು ನೋಡಬೇಕು.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.